ಚಿಕ್ಕಮಗಳೂರು :ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಬುಧವಾರ ನಗರದ ಎಲ್ಲ ರಸ್ತೆಗಳು ಕಾಂಗ್ರೆಸ್ ಫ್ಲೆಕ್ಸ್ಗಳಿಂದ ರಾರಾಜಿಸುತ್ತಿದ್ದು , ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಹೈ ಅಲರ್ಟ್ ವ್ಯವಸ್ಥೆ ಕಲ್ಪಿಸಿದ್ದರು.
ರಾಹುಲ್ ಗಾಂಧಿ ಮಧ್ಯಾಹ್ನದ ವೇಳೆಗೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ, ಪೊಲೀಸರು ಬೆಳಗ್ಗೆ 10ರಿಂದಲೇ ಕೆಲ ಕಡೆ ರಸ್ತೆ ತಡೆದು, ಸಾರ್ವಜನಿಕ ಓಡಾಟಕ್ಕೆ ಅಡಚಣೆ ಉಂಟು ಮಾಡಿದರು. ಎಂಜಿ ರಸ್ತೆ ಮತ್ತು ಐಜಿ ರಸ್ತೆಗಳಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶ ನೀಡದೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಬಗ್ಗೆ ಕೆಲವರು ಎಸ್ಪಿ ಕೆ.ಅಣ್ಣಾಮಲೈ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಜಿಲ್ಲಾ ಆಟದ ಮೈದಾನದ ವೇದಿಕೆಗೆ ಆಗಮಿಸುತ್ತಿದ್ದಂತೆ ಈ ಎರಡೂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಯಿತು. ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತು. ರಾಹುಲ್ ಗಾಂಧಿ ಭಾಷಣ ಮಾಡಲಿದ್ದ ಮುಖ್ಯ ವೇದಿಕೆಗೆ ಕಾಂಗ್ರೆಸ್ ಜಿಲ್ಲಾಕ್ಷರೇ ಗುರುತಿನ ಚೀಟಿ ತೋರಿಸಿ ಒಳ ಹೋಗಬೇಕಾಯಿತು. ಜನ ಸಾಮಾನ್ಯರು ಸಾಗಬೇಕಿದ್ದ ಮಾರ್ಗ ಬಿಟ್ಟು ಬೇರೆ ಎಲ್ಲಿಯೂ ಸಾರ್ವಜನಿಕರಿಗೆ ಆಟದ ಮೈದಾನ ಪ್ರವೇಶಿಸಲು ಅವಕಾಶವಿರಲಿಲ್ಲ.
ಬಿರು ಬಿಸಿಲಿನಲ್ಲಿ ಬತ್ತದ ಉತ್ಸಾಹ
ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಗೆ ಜಿಲ್ಲೆಯ ವಿವಿಧ ತಾಲೂಕಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದುಬಂತು. ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ ಕೊಪ್ಪ ಭಾಗದ ಕಾರ್ಯಕರ್ತರು ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆಯಲ್ಲಿ ಆಟದ ಮೈದಾನಕ್ಕೆ ಬಂದರು. ಹನುಮಂತಪ್ಪ ವೃತ್ತದಿಂದ ಕಾಂಗ್ರೆಸ್ ಬಾವುಟ, ಬ್ಯಾನರ್,ಫ್ಲೆಕ್ಸ್ ಹಿಡಿದು ತಂಡೋಪ ತಂಡವಾಗಿ ಬಂದ ತರೀಕೆರೆ, ಕಡೂರು ಭಾಗದ ಕಾರ್ಯಕರ್ತರು, ಮಹಿಳೆಯರು, ಮಕ್ಕಳು ಎಂಜಿ ರಸ್ತೆಯಲ್ಲಿ ಬಿರುಬಿಸಲಿನ ಮಧ್ಯೆ ಮೆರವಣಿಗೆಯಲ್ಲಿ ಸಾಗಿದರು. ಹಳ್ಳಿ ವಾದ್ಯ, ನಾಸಿಕ್ ಡೋಲ್ಗಳ ತಾಳಕ್ಕೆ ಹೆಜ್ಜೆ ಹಾಕುತ್ತಾ ಸಾಗಿದ ಪಡ್ಡೆಹುಡುಗರು ರಾಹುಲ್ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪರ ಘೋಷಣೆ ಕೂಗಿದರು. ದಾರಿ ಮಧ್ಯೆ ಅಲ್ಲಿಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾರ್ಯಕರ್ತರು ಮುಂದೆ ಸಾಗಿದ ನಂತರ ಐಡಿಎಸ್ಜಿ ಹೆಲಿಪ್ಯಾಡ್ ನಿಂದ ಭದ್ರತೆಯ ಮಧ್ಯೆ ಕಾರಿನಲ್ಲಿ ಬಂದ ರಾಹುಲ್ಗಾಂಧಿ, ಎಂಜಿ ರಸ್ತೆ ಬದಿಯಲ್ಲಿದ್ದ ಸಾರ್ವಜನಿಕರಿಗೆ ಕೈಬೀಸುತ್ತಾ ಸಾಗಿದರು. ಜತೆಗೆ ಸಿಎಂ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತಿತರೆ ಮುಖಂಡರು ರಾಹುಲ್ ಅವರನ್ನು ಹಿಂಬಾಲಿಸಿದರು.
ನಗರವೇ ಫ್ಲೆಕ್ಸ್ ಮಯ
ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಇಡೀ ನಗರವನ್ನೇ ಫ್ಲೆಕ್ಸ್ಗಳಿಂದ ಸಿಂಗರಿಸಲಾಗಿತ್ತು. ಐಡಿಎಸ್ಜಿ ಕಾಲೇಜಿನ ಹೆಲಿಪ್ಯಾಡಿನಿಂದ ಬಸವನಹಳ್ಳಿ ಕೆರೆದಂಡೆ, ಎಂಜಿ ರಸ್ತೆ, ಇಂದಿರಾಗಾಂಧಿ ರಸ್ತೆ, ಮಾರ್ಕೆಟ್ ರೋಡ್ ಹಾಗೂ ಆಜಾದ್ಪಾರ್ಕ್, ಹನುಮಂತಪ್ಪ ವೃತ್ತ ಮತ್ತಿತರೆ ಸಂಪರ್ಕ ರಸ್ತೆಗಳಲ್ಲಿ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳಿದ್ದ ಬೃಹತ್ ಗಾತ್ರದ ಬ್ಯಾನರ್ ರಾರಾಜಿಸಿದವು. ಹನುಮಂತಪ್ಪ ವೃತ್ತದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕಟೌಟ್ ನಿಲ್ಲಿಸಲಾಗಿತ್ತು. ಈ ಮಧ್ಯೆ ಬೈಪಾಸ್ ರಸ್ತೆಯಲ್ಲಿ ಕಿಡಿಗೇಡಿಗಳು ಕೆಲವು ಫ್ಲೆಕ್ಸ್ಗಳನ್ನು ಹರಿದುಹಾಕಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾ ಆಟದ ಮೈದಾನದಲ್ಲಿ ಹಾಕಿದ್ದ ಫ್ಲೆಕ್ಸ್ಗಳನ್ನು ಕಾರ್ಯಕರ್ತರು ಕಿತ್ತುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.