ಆ್ಯಪ್ನಗರ

‘ಅತಿವೃಷ್ಟಿ’ ಪರಿಹಾರ ಇನ್ನೂ ಮರೀಚಿಕೆ

ಮಲೆನಾಡಿನಲ್ಲಿ ಕಳೆದ ವರ್ಷ ಸುರಿದ ಭಾರೀ ವರ್ಷಧಾರೆ ರೈತರ ಬದುಕಿಗೆ ಬರೆ ಹಾಕಿತು. ಆ ಗಾಯದಿಂದ ಇನ್ನೂ ಅವರಿಗೆ ಸರಕಾರ ಮುಕ್ತಿ ಸಿಕ್ಕಿಲ್ಲ. ಅತಿವೃಷ್ಟಿ ಪರಿಹಾರಕ್ಕಾಗಿ ಇಲಾಖೆಗೆ ಸಲ್ಲಿಸಿದ ಅರ್ಜಿಗಳು ಧೂಳು ಹಿಡಿದಿವೆ.

Vijaya Karnataka 10 Jun 2019, 5:00 am
ಎಲ್‌.ಪಿ.ಜಗದೀಶ್‌
Vijaya Karnataka Web CKM-8BHR2


ಬಾಳೆಹೊನ್ನೂರು :
ಮಲೆನಾಡಿನಲ್ಲಿ ಕಳೆದ ವರ್ಷ ಸುರಿದ ಭಾರೀ ವರ್ಷಧಾರೆ ರೈತರ ಬದುಕಿಗೆ ಬರೆ ಹಾಕಿತು. ಆ ಗಾಯದಿಂದ ಇನ್ನೂ ಅವರಿಗೆ ಸರಕಾರ ಮುಕ್ತಿ ಸಿಕ್ಕಿಲ್ಲ. ಅತಿವೃಷ್ಟಿ ಪರಿಹಾರಕ್ಕಾಗಿ ಇಲಾಖೆಗೆ ಸಲ್ಲಿಸಿದ ಅರ್ಜಿಗಳು ಧೂಳು ಹಿಡಿದಿವೆ.

ಭತ್ತದ ಸಸಿ ನಾಟಿ ಮಾಡಿದ ಬೆನ್ನಲ್ಲೇ ಸತತವಾಗಿ ಸುರಿದ ಮಳೆಯಿಂದಾಗಿ ಹಳ್ಳಕ್ಕೆ ಗುಡ್ಡ ಕುಸಿದು ಹಳ್ಳದ ನೀರೆಲ್ಲಾ ಜಮೀನಿನ ಮೇಲೆ ಹರಿದು ನಾಟಿ ಮಾಡಿದ ಗದ್ದೆಯಲ್ಲಿ ಕಲ್ಲು, ಮಣ್ಣು, ಮರಳು ಸಂಗ್ರಹವಾಗಿತ್ತು. ಇದು ಈ ಭಾಗದ ರೈತರಿಗೆ ಭಾರೀ ನಷ್ಟವನ್ನು ಉಂಟು ಮಾಡಿತ್ತು. ಇತ್ತ ಬೆಳೆಯನ್ನೂ ಬೆಳೆಯಲಾಗಲಿಲ್ಲ, ನಾಟಿ ಮಾಡಿದ್ದ ಸಸಿಗಳೂ ನೀರು ಪಾಲಾದವು.ಅತ್ತ ಗದ್ದೆಯಲ್ಲಿ ಭಾರೀ ಮರಳು, ಕಲ್ಲು , ಮಣ್ಣು ಸಂಗ್ರಹಗೊಂಡು ಉಳುಮೆ ಮಾಡಲು ಆಗದ ಸ್ಥಿತಿ ತಲುಪಿತ್ತು. ಸಮೀಪದ ಆಡುವಳ್ಳಿ ಗ್ರಾ.ಪಂ.ವ್ಯಾಪ್ತಿಯ ಕುಂಜಳ್ಳಿ ಮತ್ತು ಕುರುಕಬಳ್ಳಿ ಗ್ರಾಮದಲ್ಲಿ ಸತತ ಸುರಿದ ಮಳೆಯಿಂದಾಗಿ ಸುಮಾರು 25ಎಕರೆಗೂ ಹೆಚ್ಚು ಭತ್ತದ ಕೃಷಿ ಮಾಡಿದ್ದ ಜಮೀನು ಜಲಾವೃತ್ತಗೊಂಡು ಅಪಾರ ನಷ್ಟ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಏಳು ತಿಂಗಳು ಕಳೆದು ಇದೀಗ ಮತ್ತೆ ಮಳೆಗಾಲ ಪ್ರಾರಂಭವಾಗಿದೆ, ಆದರೆ ಇದುವರೆವಿಗೂ ಬೆಳೆ ಪರಿಹಾರ ನೀಡಿಲ್ಲ. ಇದರಿಂದ ರೈತರು ಸರಕಾರದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಮೇಲೆ ಇಟ್ಟ ಭರವಸೆ ಹುಸಿಯಾಗಿದೆ, ನಿತ್ಯವೂ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆಪರಿಹಾರ ನೀಡುವಲ್ಲಿ ಚುರುಕಾಗಬೇಕಿದೆ.

===============
ಕುಂಜಳ್ಳಿ, ಕುರುಕಬಳ್ಳಿ ಗ್ರಾಮದಲ್ಲಿ ಕಳೆದ ವರ್ಷ ದಾಖಲೆಯ ಮಳೆಯಾದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಭೂ ಕುಸಿತದಿಂದಾಗಿ ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಅಲ್ಲದೆ ಕೃಷಿ ಜಮೀನಿಗೆ ಸಂಪರ್ಕಿಸುವ ರಸ್ತೆಯೂ ಅಲ್ಲಲ್ಲಿ ಕುಸಿದಿದೆ. ತುಪ್ಪೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ವಾಸವಿರುವ ಮನೆಯ ಹಿಂಬದಿಯ ದರೆಯು ಬಹುತೇಕ ಕುಸಿದಿರುವುದರಿಂದ ಜನರು ಆತಂಕದಲ್ಲಿ ಜೀವನ ನಡೆಸುತಿದ್ದಾರೆ. ಗ್ರಾಮದಲ್ಲಿ ಕೃಷಿಕರ 20 ಎಕರೆಗೂ ಹೆಚ್ಚು ಜಮೀನಿನಲ್ಲಿ ಮಣ್ಣು ಮತ್ತು ಇತರೆ ವಸ್ತುಗಳ ಸಂಗ್ರಹವಾಗಿತ್ತು. ಅಲ್ಲದೆ ಭತ್ತದ ಗದ್ದೆಯನ್ನು ಯಥಾ ಸ್ಥಿತಿಗೆ ತರಬೇಕಾದಲ್ಲಿ ಲಕ್ಷಾಂತರ ರೂ. ಭರಿಸಬೇಕಿದೆ. ಸ್ಥಳ ಪರೀಶೀಲಿಸಿದ್ದು ,ಬಿಟ್ಟರೆ ಇದುವರೆವಿಗೂ ಇನ್ನೂ ಪರಿಹಾರ ವಿತರಿಸಿಲ್ಲ.
- ತುಪ್ಪೂರು ಮಂಜುನಾಥ್‌

===============

ಕುಂಜಳ್ಳಿ ಮತ್ತು ಕುರುಕಬಳ್ಳಿ ಗ್ರಾಮದಲ್ಲಿ ಆಗಿರುವ ನಷ್ಟ ಸಂಭವಿಸಿದ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಇದೀಗ ಮಳೆ ಸತತವಾಗಿ ಸುರಿಯುತ್ತಿರುವುದರಿಂದ ದುರಸ್ತಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಾದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದರು. ಅದರಂತೆ ಶಾಸಕರ ಸುಮಾರು 20ಲಕ್ಷ ಅನುದಾನದಲ್ಲಿ ಜಮೀನಿನ ಪಕ್ಕದಲ್ಲಿನ ಹಳ್ಳಕ್ಕೆ ಎರಡು ಕಡೆ ತಡೆಗೋಡೆ ನಿರ್ಮಿಸಿದ್ದು ಇನ್ನೊಂದು ಕಡೆ ತಡೆಗೋಡೆ ನಿರ್ಮಿಸಬೇಕಾಗಿದೆ. ಆದರೆ ಭತ್ತದ ಗದ್ದೆಯಲ್ಲಿ ಉಂಟಾದ ಬೆಳೆ ನಾಶ ಉಂಟಾಗಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಪರಿಹಾರ ಇನ್ನೂ ನೀಡಿಲ್ಲ.
-ಮಂಜುನಾಥ್‌ ,ಕುರುಕಬಳ್ಳಿ ಕೃಷಿಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ