ಆ್ಯಪ್ನಗರ

ಮಳೆ ಕಡಿಮೆಯಾದರೂ ಹೆಚ್ಚುತ್ತಿದೆ ಹಾನಿ

ಕಳಸ ತಾಲೂಕಿನಾದ್ಯಂತ ಮಳೆಯ ಪ್ರಮಾಣ ಕಡಿಮೆಯಾದರೂ, ಮನೆ ಹಾನಿ, ಗುಡ್ಡ ಕುಸಿತವಾಗುತ್ತಿದ್ದು, ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಟ್ಟ ಗುಡ್ಡಗಳು ಜರಿದು ಇನ್ನೂ ಬೆಳಕಿಗೆ ಬರದ ಗ್ರಾಮಗಳು ಹಲವಷ್ಟಿದೆ.

Vijaya Karnataka 14 Aug 2019, 5:00 am
ಕಳಸ : ಕಳಸ ತಾಲೂಕಿನಾದ್ಯಂತ ಮಳೆಯ ಪ್ರಮಾಣ ಕಡಿಮೆಯಾದರೂ, ಮನೆ ಹಾನಿ, ಗುಡ್ಡ ಕುಸಿತವಾಗುತ್ತಿದ್ದು, ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಟ್ಟ ಗುಡ್ಡಗಳು ಜರಿದು ಇನ್ನೂ ಬೆಳಕಿಗೆ ಬರದ ಗ್ರಾಮಗಳು ಹಲವಷ್ಟಿದೆ.
Vijaya Karnataka Web CKM-13KLS1


ಪರ್ಯಾಯ ವ್ಯವಸ್ಥೆ ಬೇಡುತ್ತಿದೆ ಕಿರುಗಲ ನಾರಾಯಣ ಗೌಡ ಕುಟುಂಬ

ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಿಗೆ ಗ್ರಾಮದ ಕಿರುಗಲ ನಾರಾಯಣ ಗೌಡ ಇವರ 9 ಎಕರೆ ಕಾಫಿ ಭೂಮಿ ಸಂಪೂರ್ಣ ಕೊಚ್ಚಿ ಹೋಗಿದೆ. ಇಲ್ಲಿಗೆ ಹೋಗಲು ರಸ್ತೆಗಳು ಸಂಪೂರ್ಣ ಕುಸಿದಿದ್ದು, ಸುಮಾರು ನಾಲ್ಕು ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗಿದೆ. ಆದರೆ ಇಲ್ಲಿ ಅನಾಹುತಗಳು ಸಂಭವಿಸಿ ನಾಲ್ಕು ದಿನ ಕಳೆದರೂ ಇದು ಬೆಳಕಿಗೆ ಬರಲಿಲ್ಲ. ಇಲ್ಲಿಗೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿಲ್ಲ. ಮನೆ ಮಾಲೀಕ ನಾರಾಯಣ ಗೌಡ ಹೇಳುವಂತೆ ಸುಮಾರು 10 ಎಕರೆ ಕಾಫಿ ತೋಟದಲ್ಲಿ 9 ಎಕರೆ ಭೂಮಿ ಸಂಪೂರ್ಣ ನೋಡುನೋಡುತ್ತಿದ್ದ ಹಾಗೆ ಕೊಚ್ಚಿಕೊಂಡು ಹೋಗಿದೆ. ಅದೇ ದಿನ ಸ್ಥಳೀಯರೊಬ್ಬರು ನಮ್ಮನ್ನು ರಕ್ಷಿಸಿ ಅವರ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ್ದಾರೆ. ನನ್ನ ತಮ್ಮನಿಗೆ ಹುಷಾರಿಲ್ಲದೆ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಅವನನ್ನು ಆಸ್ಪತ್ರೆಗೂ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ವೈದ್ಯರನ್ನು ಕೂಡ ಇಲ್ಲಿಗೆ ಕರೆದುಕೊಂಡು ಬರಲು ಆಗುತ್ತಿಲ್ಲ. ನಮ್ಮ ಮನೆ ಕೂಡ ಅಪಾಯದ ಸ್ಥಿತಿಯಲ್ಲಿದೆ ನಮ್ಮನ್ನು ಯಾರೂ ಕೂಡ ವಿಚಾರಿಸಲು ಬಂದಿಲ್ಲ ದಯವಿಟ್ಟು ನಮ್ಮನ್ನು ರಕ್ಷಿಸಿ, ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ಅಂಗಲಾಚುತ್ತಿದ್ದಾರೆ.

ಕಣ್ಣೀರಲ್ಲಿ ಕೈತೊಳೆಯುತ್ತಿದೆ ರಮೇಶ್‌ ಕುಟುಂಬ : ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಗದ್ದೆ ರಮೇಶ ಎಂಬುವವರ ಮನೆ ಸಂಪೂರ್ಣ ನಾಶವಾಗಿದ್ದು ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದಾರೆ. ಅವರು ಹೇಳುವಂತೆ ಕಳೆದ ನಾಲ್ಕು ದಿನಗಳ ಹಿಂದೆ ಶೃಂಗೇರಿಯಲ್ಲಿ ಓದುತ್ತಿರುವ ತಮ್ಮ ಮಗಳನ್ನು ಕರೆದುಕೊಂಡು ಬರಲು ಕುಟುಂಬ ಸಹಿತ ಹೋಗಿದ್ದೆವು. ಮಳೆ ಬಂದು ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಬರಲು ಸಾದ್ಯವಾಗಲಿಲ್ಲ. ಆದರೆ ರಸ್ತೆ ಸಂಪರ್ಕವಾದ ಮೇಲೆ ಇಲ್ಲಿಗೆ ಬಂದು ನೋಡಿದರೆ ನಮ್ಮ ಮನೆ ಮೇಲೆ ಗುಡ್ಡ ಬಿದ್ದು ಸಂಪೂರ್ಣ ಕುಸಿದಿದೆ. ದಿನ ಕೂಲಿ ಮಾಡಿ ಜೀವನ ಸಾಗಿಸುವ ನಾವು ಸಾಲಸೂಲ ಮಾಡಿ ಸಣ್ಣ ಮನೆ ಕಟ್ಟಿಕೊಂಡಿದ್ದೆವು. ದೇವರಿಗೆ ಅದನ್ನು ನೋಡಲು ಸಾದ್ಯವಾಗಲಿಲ್ಲವೇನೋ ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾನೆ. ನಾವಿನ್ನು ಬದುಕಿದ್ದು ಏನು ಪ್ರಯೋಜನ ನಾವು ಯಾವ ಸಾಂತ್ವಾನ ಕೇಂದ್ರಕ್ಕೂ ಬರುವುದಿಲ್ಲ. ಇಲ್ಲೇ ಪಕ್ಕದಲ್ಲಿ ಗುಡಿಸಲು ಕಟ್ಟಿ ಕುಳಿತುಕೊಂಡಿದ್ದೇವೆ ಎಂದು ಕಣ್ಣೀರಿಡುತ್ತ ತಮ್ಮ ಅಳಲನ್ನು ಹೇಳಿಕೊಂಡರು.

ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆ ಹೆಚ್ಚಳ : ಕಳಸದ ಕಾರಗದ್ದೆ ವೀರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಕಾಳಜಿ ಕೇಂದ್ರ ತೆರೆದು ಅಲ್ಲಿ 40 ಜನರಿಗೆ ಆಶ್ರಯ ನೀಡಲಾಗಿದೆ. ಕಳಸದ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆ ಮಂಗಳವಾರಕ್ಕೆ 110ಕ್ಕೆ ಏರಿಕೆಯಾಗಿದೆ. ಹಿರೇಬೈಲು, ಭದ್ರಾಕಾಳಿ ಶಾಲೆ, ಎಡೂರುಗಳಲ್ಲಿ ಇರುವ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆ 367ಕ್ಕೆ ಏರಿಕೆಯಾಗಿದೆ.

ಕಳಸ-ಬಾಳೆಹೊನ್ನೂರು ರಸ್ತೆ ಸಂಪರ್ಕ ಹೊರತು ಪಡಿಸಿ ಉಳಿದ ಎಲ್ಲಾ ಭಾಗಗಳಿಗೂ ರಸ್ತೆ ಸಂಪರ್ಕ ಕಡಿತಗೊಂಡಿದೆ. ತುರ್ತಾಗಿ ಕಳಸ-ಮಂಗಳೂರು ರಸ್ತೆಯನ್ನು ಸ್ಥಳಿಯರ ನೆರವಿನಿಂದ ರಸ್ತೆ ದುರಸ್ತಿ ಕಾರ್ಯ ಮಾಡಲಾಗುತ್ತಿದೆ.


ಪತ್ತೆಯಾಗದ ಸಂತೋಷ್‌ ಪೂಜಾರಿ : ಕಳೆದ ಐದು ದಿನಗಳಿಂದ ಚನ್ನಡ್ಲು ಎಂಬಲ್ಲಿ ಮನೆಕುಸಿದು ಮಣ್ಣಿನಡಿ ಸಿಲುಕಿದ್ದ ಸಂತೋಷ್‌ ಪೂಜಾರಿ ಎಂಬುವವರನ್ನು ಪತ್ತೆ ಮಾಡದೆ ಇರುವುದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಕುಸಿದು 5 ದಿವಾಗಿದೆ ಅದರಡಿ ಸಂತೋಷ್‌ ಇದ್ದಾರೆ. ಇವರ ದೇಹವನ್ನು ತೆಗೆಯಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬಂದವರೆಲ್ಲ ಕಷ್ಟದ ಕೆಲಸ ಎಂದು ಹೇಳಿ ಹೋಗುತ್ತಿದ್ದಾರೆ. ಮಣ್ಣಿನಡಿ ಬಿದ್ದಿರುವುದು ಒಂದು ಬಡಕುಟುಂಬದ ಜೀವ. ಅದೇ ಶ್ರೀಮಂತರಾಗಿದ್ದರೆ ಇಷ್ಟೋತ್ತಿಗೆ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಅತ್ಯಾಧುನಿಕ ತಂತ್ರಗಳನ್ನು ಬಳಸಿ ಹೊರತೆಗೆಯುತ್ತಿದ್ದರು. ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಅಡಳಿತ ಇಲಾಖೆ ನಿರ್ಲಕ್ಷ ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ