ಆ್ಯಪ್ನಗರ

ನೆರೆ ಸಂತ್ರಸ್ತರಿಗೆ 10 ತಿಂಗಳೊಳಗೆ ಪುನರ್ವಸತಿ

ಎನ್‌ಡಿಆರ್‌ಎಫ್‌, ಎಸ್‌ಟಿಆರ್‌ಎಫ್‌ ನಿಯಮಕ್ಕೆ ಒಳಪಡದ ಮಧ್ಯಮ ವರ್ಗದ ಕುಟುಂಬಗಳಿಗೂ ಪರಿಹಾರ ಕಲ್ಪಿಸಲು ವಿಶೇಷ ಪ್ಯಾಕೇಜ್‌ ರೂಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

Vijaya Karnataka 22 Aug 2019, 5:00 am
ಚಿಕ್ಕಮಗಳೂರು : ಎನ್‌ಡಿಆರ್‌ಎಫ್‌, ಎಸ್‌ಟಿಆರ್‌ಎಫ್‌ ನಿಯಮಕ್ಕೆ ಒಳಪಡದ ಮಧ್ಯಮ ವರ್ಗದ ಕುಟುಂಬಗಳಿಗೂ ಪರಿಹಾರ ಕಲ್ಪಿಸಲು ವಿಶೇಷ ಪ್ಯಾಕೇಜ್‌ ರೂಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
Vijaya Karnataka Web rehabilitation of flood victims within 10 months
ನೆರೆ ಸಂತ್ರಸ್ತರಿಗೆ 10 ತಿಂಗಳೊಳಗೆ ಪುನರ್ವಸತಿ


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನೆರೆ ಪರಿಹಾರ ಕಾರ‍್ಯದ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನೆರೆ ಹಾನಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳಿಂದ ವರದಿ ತರಿಸಿಕೊಳ್ಳುತ್ತಿದ್ದು, ಮಧ್ಯಮ ವರ್ಗಕ್ಕೂ ಪ್ಯಾಕೇಜ್‌ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಕೊಡಲು ಯಾವುದೇ ಜಿಲ್ಲೆಯಲ್ಲಿ ಹಣದ ಕೊರತೆ ಇಲ್ಲ. ರಾಜ್ಯದ ನೆರೆಪೀಡಿತ 22 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 592ಕೋಟಿ ರೂ. ಇದೆ ಎಂದರು.

ನೆರೆಪೀಡಿತ ಪ್ರದೇಶದ ಜನ ಬ್ಯಾಂಕ್‌ ಸಾಲ ಮರುಪಾವತಿ ಮಾಡಲು ಸದ್ಯಕ್ಕೆ ಸಾಧ್ಯವಿಲ್ಲ. ಬಡ್ಡಿ ಮನ್ನಾ ಮಾಡುವ ಜತೆಗೆ ಅಸಲು ತೀರಿಸಲು 3-4 ವರ್ಷ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸಹಕಾರ ಬ್ಯಾಂಕ್‌ಗಳಲ್ಲಿ ಸಂತ್ರಸ್ತರು ಸಾಲ ಮಾಡಿದ್ದರೆ ಸದ್ಯಕ್ಕೆ ಸಾಲ ವಸೂಲಿ ಮುಂದೂಡುವಂತೆ ಸಹಕಾರ ಬ್ಯಾಂಕ್‌ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದರು.

ಗ್ರಾಮಗಳ ಸ್ಥಳಾಂತರ

ಮೂಡಿಗೆರೆ ತಾಲೂಕಿನ ಮಲೆಮನೆ, ಆಲೆಕಾನ್‌ ಹೊರಟ್ಟಿ, ಮಧುಗುಂಡಿ, ಚನ್ನಹಡ್ಲು, ನರಸಿಂಹರಾಜಪುರ ತಾಲೂಕಿನ ಬಂಡಿಮಠ, ಹೊಳೆಬಾಗಿಲು ಗ್ರಾಮಗಳನ್ನು ಸ್ಥಳಾಂತರಿಸುವಂತೆ ಅಲ್ಲಿನ ಜನ ಮನವಿ ಮಾಡಿದ್ದಾರೆ. ಪರಾರ‍ಯಯ ಭೂಮಿ ಗುರುತಿಸಿ ಸ್ಥಳಾಂತರಕ್ಕೆ ಪ್ಯಾಕೇಜ್‌ ಸಿದ್ಧಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಚಿವ ಜೆ.ಸಿ.ಮಾದುಸ್ವಾಮಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಗಿರುವ ಗುಡ್ಡಕುಸಿತ, ಮಳೆ ಅನಾಹುತ ಅತ್ಯಂತ ವಿಶೇಷ ಪ್ರಕರಣವಾಗಿದೆ. ಜಿಲ್ಲಾಡಳಿತ ತೃಪ್ತಿಕರವಾಗಿ ಕೆಲಸ ಮಾಡಿದೆ. ಎಲ್ಲಿಯೂ ಅಜಾಗರೂಕತೆ ನಡೆದಿಲ್ಲ. ಶಕ್ತಿಮೀರಿ ಕೆಲಸ ಮಾಡಿದ್ದು, ತುರ್ತು ಪರಿಹಾರವನ್ನೂ ನೀಡಿದೆ ಎಂದರು.

ಹಾನಿಯಾಗಿರುವ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಕಾಲಾವಕಾಶ ಬೇಕು. ಜನರ ಕಷ್ಟಕ್ಕೆ ಸರಕಾರ ಸ್ಪಂದಿಸುತ್ತದೆ. ದಾನಿಗಳು, ಕಂಪನಿಗಳಿಂದ ಹಣ ಹಾಕಿಸಿ ಮನೆ ಕಟ್ಟಿಸಿಕೊಡುವ ಬಗ್ಗೆಯೂ ಚರ್ಚಿಸಲಾಗಿದೆ. ಮನೆ, ಜಮೀನು ಕಳೆದುಕೊಂಡವರಿಗೆ ಬದಲಿ ಜಾಗವಿದ್ದರೆ ಪ್ಯಾಕೇಜ್‌ ಕೊಡಲಾಗುವುದು ಎಂದು ಹೇಳಿದರು.

ನರೇಗಾ ಮೂಲಕ ಕೊಟ್ಟಿಗೆ, ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು. ಮನೆ ಕಳೆದುಕೊಂಡವರಿಗೆ 10 ತಿಂಗಳವರೆಗೆ ಬಾಡಿಗೆ ಹಣ ಕೊಡುವುದಾಗಿ ಹೇಳಲಾಗಿದೆ. 10 ತಿಂಗಳೊಳಗೆ ವಸತಿ ಕಲ್ಪಿಸಲಾಗುವುದು ಎಂದರು.

ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಜಿ.ಪಂ.ಅಧ್ಯಕ್ಷೆ ಸುಜಾತಕೃಷ್ಣಪ್ಪ, ಜಿಲ್ಲಾ ಉಸ್ತುವಾರಿ ಕಾರ‍್ಯದರ್ಶಿ ರಾಜೀವ್‌ ಚಾವ್ಲ, ಹಿರಿಯ ಐಎಎಸ್‌ ಅಧಿಕಾರಿ ಯಶವಂತ್‌, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮತ್ತಿತರರು ಹಾಜರಿದ್ದರು.

ತಜ್ಞರಿಂದ ಪರಿಶೀಲನೆ
ಗುಡ್ಡಕುಸಿತಕ್ಕೆ ಕಾರಣ ಏನು ಎಂಬ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ. ವರದಿ ಕೈಸೇರಿದ ನಂತರ ಭವಿಷ್ಯದಲ್ಲಿ ಅನಾಹುತಗಳನ್ನು ತಡೆಯಲು ಯಾವ ರೀತಿ ಯೋಜನೆ ರೂಪಿಸಬೇಕು ಎಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

-ಸಿ.ಟಿ.ರವಿ,
ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ