ಆ್ಯಪ್ನಗರ

ಪರಿಣಾಮಕಾರಿ ಕೆಲಸಕ್ಕೆ ಬೆಂಬಲ ನೀಡಲು ಮನವಿ

ಕಳೆದ 5 ವರ್ಷಗಳಲ್ಲಿ ಸಂಸದೆಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಕಲ್ಪಿಸಿದ ಮತದಾರರು ಈ ಬಾರಿಯೂ ಆಶೀರ್ವದಿಸಿ ಮತ್ತಷ್ಟು ಉತ್ತಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಲು ತಮಗೆ ಬೆಂಬಲ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮನವಿ ಮಾಡಿದರು.

Vijaya Karnataka 4 Apr 2019, 5:00 am
ಚಿಕ್ಕಮಗಳೂರು: ಕಳೆದ 5 ವರ್ಷಗಳಲ್ಲಿ ಸಂಸದೆಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಕಲ್ಪಿಸಿದ ಮತದಾರರು ಈ ಬಾರಿಯೂ ಆಶೀರ್ವದಿಸಿ ಮತ್ತಷ್ಟು ಉತ್ತಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಲು ತಮಗೆ ಬೆಂಬಲ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮನವಿ ಮಾಡಿದರು.
Vijaya Karnataka Web CKM-3aragap3


ಕಡೂರು ತಾಲೂಕಿನ ದೇವನೂರು, ಚಿಕ್ಕದೇವನೂರು, ನಾಗರಾಳು, ನಿಡಘಟ್ಟ, ಟಿ.ಬಿ.ಕಾವಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರಚಾರ ಸಭೆ ನಡೆಸಿ ಮಾತನಾಡಿದರು.

ದೇಶಕ್ಕೆ ಶಕ್ತಿ ತುಂಬುವ ಚುನಾವಣೆ ಇದು. ವಿಕಾಸ ಪಥದಲ್ಲಿ ಮುನ್ನಡೆದು ಭಾರತದ ಘನತೆ, ಗೌರವ ಮತ್ತಷ್ಟು ವಿಜೃಂಭಿಸಲು ಕಮಲದ ಚಿಹ್ನೆಗೆ ಮತ ಚಲಾಯಿಸಬೇಕು. ಈ ಚುನಾವಣೆಯಲ್ಲಿ ತಮ್ಮನ್ನು ಚುನಾಯಿಸುವ ಮೂಲಕ ಮೋದಿ ಸರಕಾರಕ್ಕೆ ಬಲ ತುಂಬುವ ಕೆಲಸ ಮಾಡಬೇಕು ಎಂದರು.

2014ರಲ್ಲಿ ಮಹಾಜನತೆ ಮುಂದೆ ನರೇಂದ್ರ ಮೋದಿ 4 ಪ್ರಮುಖ ಭರವಸೆ ನೀಡಿದ್ದರು. ಭ್ರಷ್ಟಾಚಾರ ರಹಿತ ಆಡಳಿತ, ಜನಸಾಮಾನ್ಯರಿಗೂ ತಲುಪುವ ಅಭಿವೃದ್ಧಿ ಕೆಲಸಗಳು, ಗಡಿಭಾಗಗಳ ರಕ್ಷಣೆ ಜತೆಗೆ ಭಾರತದ ಸೈನ್ಯ ಬಲಗೊಳಿಸುವುದು, ಭಾರತಕ್ಕೆ ಗೌರವದ ಸ್ಥಾನ ತಂದುಕೊಡುವುದು ಅವರ ಮಾತಾಗಿತ್ತು. ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ ಮೋದಿ ದೇಶವನ್ನು ಮುನ್ನಡೆಸಿದ್ದಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ನೀರಾವರಿ ಸಮಸ್ಯೆಗಳಿಗೂ ಪರಿಹಾರಕ್ಕಾಗಿ ಶ್ರಮಿಸಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯ, ಪಾಸ್‌ಪೋರ್ಟ್‌ ಕೇಂದ್ರ, ಸಖೀ ಕೇಂದ್ರ, ಕೌಶಲ ತರಬೇತಿ ಕೇಂದ್ರ, ಹೆದ್ದಾರಿಗಳ ಅಭಿವೃದ್ಧಿ, ರೈಲ್ವೆ ಅಭಿವೃದ್ಧಿ ಜತೆಗೆ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್‌, ಬೀಕನಹಳ್ಳಿ ಸೋಮಶೇಖರ್‌, ಜಸಂತಾ ಅನಿಲ್‌ಕುಮಾರ್‌, ಬೆಳವಾಡಿ ರವೀಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಎಚ್‌.ಡಿ.ತಮ್ಮಯ್ಯ, ಮುಖಂಡರಾದ ಪುಟ್ಟೇಗೌಡ, ರವಿ, ಕಲ್ಮರುಡಪ್ಪ, ಲಕ್ಷ್ಮಣನಾಯ್ಕ, ತಾ.ಪಂ.ಅಧ್ಯಕ್ಷ ಜಯಣ್ಣ ಮತ್ತಿತರರು ಹಾಜರಿದ್ದರು.

ಪಿಂಚಣಿ ದೇಣಿಗೆ: ಸೇನೆಯಲ್ಲಿ ಕಾರ‍್ಯ ನಿರ್ವಹಿಸುತ್ತ ಬೆನ್ನುಹುರಿಯ ಶಾಶ್ವತ ನೋವಿನಿಂದ ಬಳಲುತ್ತಿರುವ ಅರಕೆರೆಯ ನಿವೃತ್ತ ಯೋಧ ಎ.ಉಪೇಂದ್ರ ನಂಜಪ್ಪ ಮತ್ತು ಅವರ ಸ್ನೇಹಿತ ದಿಲ್ಲಿಯ ತಾರಾಸಿಂಗ್‌ ಬಿಜೆಪಿಯ ಚುನಾವಣಾ ನಿಧಿಗೆ ಒಂದು ತಿಂಗಳ ಪಿಂಚಣಿ ಮೊತ್ತವನ್ನು ಶೋಭಾ ಕರಂದ್ಲಾಜೆ ಅವರಿಗೆ ದೇಣಿಗೆ ನೀಡಿದರು.

ಇದಕ್ಕೂ ಮುನ್ನ ಚಿಕ್ಕದೇವನೂರಿನ ಲಕ್ಷ್ಮೇನರಸಿಂಹಸ್ವಾಮಿ ದೇವಸ್ಥಾನ, ದೇವನೂರಿನ ಚಂದ್ರಮೌಳೀಶ್ವರ, ನಿಡಘಟ್ಟದ ಆಂಜನೇಯಸ್ವಾಮಿ, ನಾಗರಾಳಿನ ಲಕ್ಷ್ಮೇರಂಗನಾಥ, ಹೋಚಿಹಳ್ಳಿಯ ಆಂಜನೇಯ, ಸಖರಾಯಪಟ್ಟಣದ ಶಕುನರಂಗನಾಥ, ಎಸ್‌.ಬಿದರೆಯ ಬೆಂಕಿರಂಗನಾಥ ಮತ್ತು ಚಟ್ನಪಾಳ್ಯದ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ