ಆ್ಯಪ್ನಗರ

ಬಡವರಿಗೆ ಪವರ್‌ ಕಟ್‌: ಶ್ರೀಮಂತರಿಗೆ ಪುಲ್‌ ಕರೆಂಟ್‌

ಬಣಕಲ್‌ ಮೆಸ್ಕಾಂ ಕಚೇರಿ ಉಳ್ಳವರಿಗೆ ವಿದ್ಯುತ್‌ ಬಿಲ್‌ ಪಾವತಿ ಮಾಡಲು ರಿಯಾಯಿತಿ ನೀಡಿ, ಬಡವರಿಂದ ಬಲವಂತವಾಗಿ ವಸೂಲಿ ಮಾಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Vijaya Karnataka 18 Nov 2017, 5:00 am

ಸಂತೋಷ್‌ಅತ್ತಿಗೆರೆ, ಕೊಟ್ಟಿಗೆಹಾರ:ಬಣಕಲ್‌ ಮೆಸ್ಕಾಂ ಕಚೇರಿ ಉಳ್ಳವರಿಗೆ ವಿದ್ಯುತ್‌ ಬಿಲ್‌ ಪಾವತಿ ಮಾಡಲು ರಿಯಾಯಿತಿ ನೀಡಿ, ಬಡವರಿಂದ ಬಲವಂತವಾಗಿ ವಸೂಲಿ ಮಾಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬಣಕಲ್‌ ಮೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ಒಂದೂವರೆ ಕೋಟಿರೂ. ನಷ್ಟು ವಿದ್ಯುತ್‌ ಬಿಲ್‌ ಬಾಕಿ ಯಿದೆ. 614 ವಿದ್ಯುತ್‌ ಸಂಪರ್ಕಗಳಲ್ಲಿ 3 ಸಾವಿರ ರೂ. ಗೂ ಮೇಲ್ಪಟ್ಟು ಬಾಕಿಯಿದೆ. ಬಣಕಲ್‌, ತರುವೆ, ಪಲ್ಗುಣಿ, ನಿಡುವಾಳೆ, ತ್ರಿಪುರ, ಹೊಸಳ್ಳಿ, ಜಾವಳಿ,ಕೂವೆ, ಕುಂದೂರು ಪಂಚಾಯತಿಗಳಲ್ಲಿ ಸುಮಾರು 50 ಲಕ್ಷ ರೂ.ಗೂ ಹೆಚ್ಚು ವಿದ್ಯುತ್‌ ಬಿಲ್‌ ಬಾಕಿಯಿದೆ. ವಿವಿಧ ಎಸ್ಟೇಟ್‌ಗಳ ವಿದ್ಯುತ್‌ ಬಿಲ್‌ ಪಾವತಿಯಾಗಿಲ್ಲ . ಪ್ರತಿ ವಿದ್ಯುತ್‌ ಸಂಪರ್ಕದಲ್ಲಿ 10 ಸಾವಿರಕ್ಕೂ ಮೇಲ್ಪಟ್ಟು ಸುಮಾರು 60 ಲಕ್ಷ ಕ್ಕೂ ಹೆಚ್ಚು ವಿದ್ಯುತ್‌ ಬಿಲ್‌ ಬಾಕಿಯಿದೆ. ಯಾರೆ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದರೂ, ನಿಗದಿತ ಸಮಯದೊಳಗೆ ಕಟ್ಟದಿದ್ದರೆ ನೋಟಿಸ್‌ ನೀಡುವ ಅವಕಾಶವಿದ್ದರೂ, ಯಾವುದೇ ಕ್ರಮಕ್ಕೆ ಮುಂದಾಗದ ಮೆಸ್ಕಾಂ 1 ಸಾವಿರ ವಿದ್ಯುತ್‌ ಬಾಕಿ ಉಳಿಸಿಕೊಂಡ ಜನಸಾಮಾನ್ಯರ ಮನೆ ಸಂಪರ್ಕ ಕಡಿತಗೊಳಿಸುತ್ತಿದೆ.

ಪ್ರಭಾವಿ ವ್ಯಕ್ತಿಗಳು ಮತ್ತು ಸರಕಾರಿ ಕಚೇರಿಗಳು ಹತ್ತಾರು ಸಾವಿರ ರೂ. ಬಾಕಿ ಉಳಿಸಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ .ಬಣಕಲ್‌ ಮತ್ತು ಕೊಟ್ಟಿಗೆಹಾರದಲ್ಲಿ ಕೆಲವು ತಿಂಗಳಿಂದ 1 ಸಾವಿರ ವಿದ್ಯುತ್‌ ಬಾಕಿ ಉಳಿಸಿಕೊಂಡ ವರ್ತಕರ ಅಂಗಡಿ ಮುಂಗಟ್ಟುಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಕೂಲಿ ಕಾರ್ಮಿಕರು ಸೇರಿದಂತೆ ಬಡವರ್ಗದ ಮನೆಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್‌ ಕಡಿತಗೊಳಿಸಲಾಗಿದೆ.

ದುರುಪಯೋಗದ ಆರೋಪ:ಆನೆ ಕಾರಿಡಾರ್‌ ಯೋಜನೆಯಡಿಯಲ್ಲಿ ಬಂದ ಸಾವಿರಾರು ವಿದ್ಯುತ್‌ ಕಂಬಗಳು ಹಣಕೊಟ್ಟವರ ಮನೆ ಬಾಗಿಲಿಗೆ ತಲುಪಿವೆ. ಕಂಬ ಅಳವಡಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕಿನಡಿ ಕೇಳಿದರೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ. ಆನೆ ನಡೆದಾಡುವ ಮಾರ್ಗದಲ್ಲಿ ಕಂಬ ಹಾಕುವ ಬದಲು ಹಣ ಕೊಟ್ಟವರ ಮನೆ ಬಾಗಿಲು ತಲುಪಿವೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಿದೆ.

ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಎಲ್ಲರಿಗೂ ಒಂದೆ ರೀತಿಯ ನಿಯಮ ಪಾಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Vijaya Karnataka Web richest exempted poorest punished
ಬಡವರಿಗೆ ಪವರ್‌ ಕಟ್‌: ಶ್ರೀಮಂತರಿಗೆ ಪುಲ್‌ ಕರೆಂಟ್‌

---------------

ಮೆಸ್ಕಾಂ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಲೆನಾಡು ಭಾಗದಲ್ಲಿರುವ ಸಣ್ಣ ರೈತರು ಕಾಡಾನೆ ದಾಳಿ, ಅತಿವೃಷ್ಟಿ, ಅನಾವೃಷ್ಟಿ ಮತ್ತಿತರ ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾರೆ. 1 ಸಾವಿರ ವಿದ್ಯುತ್‌ ಬಾಕಿ ಉಳಿಸಿಕೊಂಡ ಮಲೆನಾಡಿನ ಬಡ ರೈತರ, ಕೂಲಿ ಕಾರ್ಮಿಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಮುನ್ನ ಮೆಸ್ಕಾಂ ಹತ್ತಾರು ಸಾವಿರ ವಿದ್ಯುತ್‌ ಬಾಕಿ ಉಳಿಸಿಕೊಂಡವರ ವಿರುದ್ದ ಕ್ರಮ ಕೈಗೊಳ್ಳಲಿ

-ಸಂಜಯ್‌ಗೌಡ ಕೊಟ್ಟಿಗೆಹಾರ, ಸ್ಥಳೀಯರು.

...........

ಮೆಸ್ಕಾಂ ಬಡವರಿಗೊಂದು ಶ್ರೀಮಂತರಿಗೊಂದು ನಿಯಮ ಪಾಲಿಸುತ್ತಿದೆ. 614 ವಿದ್ಯುತ್‌ ಸಂಪರ್ಕಗಳಲ್ಲಿ 3 ಸಾವಿರ ಮೇಲ್ಪಟ್ಟು ಬಾಕಿ ಯಿದೆ. ಅವುಗಳ ವಸೂಲಿ ಮಾಡಲು ಮೆಸ್ಕಾಂ ಮುಂದಾಗುತ್ತಿಲ್ಲ. ಆದರೆ ಬಡವರಮನೆಯಲ್ಲಿ ಸಾವಿರ ರೂ. ಬಾಕಿ ಇದ್ದರೆ ಅವರ ವಿದ್ಯುತ್‌ ಸಂಪರ್ಕಕ್ಕೆ ಕತ್ತರಿ ಹಾಕುತ್ತಾರೆ. ಮೆಸ್ಕಾಂ ಎಲ್ಲರಿಗೂ ಒಂದೆ ನಿಯಮ ಪಾಲಿಸಬೇಕು.

-ಪ್ರಭಾಕರ್‌ ಬಿನ್ನಡಿ, ಮಾಹಿತಿ ಹಕ್ಕು ಕಾರ್ಯಕರ್ತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ