ಆ್ಯಪ್ನಗರ

ನಗರಸಭೆ ಕಣ್ಣಿಗೆ ಕಾಣದ ಕಿಷ್ಕೆಂಧೆ ರಸ್ತೆಗಳು

ರತ್ನಗಿರಿ ರಸ್ತೆಯಿಂದ ಬಸವನಹಳ್ಳಿ ಮುಖ್ಯರಸ್ತೆ ಸಂಪರ್ಕಿಸುವ ಬಸವನಹಳ್ಳಿ ಶಾಲೆ ರಸ್ತೆಯನ್ನು ವಿಸ್ತರಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಗಿದ್ದು, ನಗರದ ಇತರೆ ಕಿಷ್ಕೆಂದೆ ರಸ್ತೆಗಳು ನಗರಸಭೆ ಕಣ್ಣಿಗೆ ಕಾಣದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Vijaya Karnataka 27 Oct 2018, 5:00 am
ಚಿಕ್ಕಮಗಳೂರು : ರತ್ನಗಿರಿ ರಸ್ತೆಯಿಂದ ಬಸವನಹಳ್ಳಿ ಮುಖ್ಯರಸ್ತೆ ಸಂಪರ್ಕಿಸುವ ಬಸವನಹಳ್ಳಿ ಶಾಲೆ ರಸ್ತೆಯನ್ನು ವಿಸ್ತರಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಗಿದ್ದು, ನಗರದ ಇತರೆ ಕಿಷ್ಕೆಂದೆ ರಸ್ತೆಗಳು ನಗರಸಭೆ ಕಣ್ಣಿಗೆ ಕಾಣದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
Vijaya Karnataka Web CKM-26rudrap2


ಅಭಿವೃದ್ಧಿಪಡಿಸುವ ರಸ್ತೆಯ ಆಸುಪಾಸಿನಲ್ಲಿ ತಾಲೂಕು ಕಚೇರಿ, ಬಸವನಹಳ್ಳಿ ಜ್ಯೂನಿಯರ್‌ ಕಾಲೇಜ್‌, ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮತ್ತು ಎಂಇಎಸ್‌ ಶಾಲಾ ಕಾಲೇಜು ಕಟ್ಟಡಗಳಿವೆ.ನಿತ್ಯ ಸಂಚರಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಪಾದಾಚಾರಿಗಳಿಗೆ ತೊಂದರೆ ಆಗುತ್ತಿದೆ ಎಂಬ ಕಾರಣಕ್ಕೆ ಅಷ್ಟೇನೂ ಕಿರಿದಲ್ಲದ ರಸ್ತೆಯನ್ನು ನಗರಸಭೆ ವಿಸ್ತರಣೆ ಮಾಡಲು ಮುಂದಾಗಿದೆ.

ವಿಸ್ತರಿಸಲು ನಾನಾ ಕಾರಣಗಳನ್ನು ನೀಡಲಾಗಿದೆ. ರಸ್ತೆಯೂ ಅತ್ಯಂತ ಕಿರಿದಾಗಿದೆ.ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಬದಿಯಲ್ಲೇ ತಳ್ಳುಗಾಡಿಗಳಿರುವ ಕಾರಣ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ ರಸ್ತೆಯ ಆಸುಪಾಸಿನಲ್ಲಿ ಶಾಲಾ, ಕಾಲೇಜುಗಳಿದ್ದು ವಿದ್ಯಾರ್ಥಿಗಳ ಸಂಚಾರಕ್ಕೂ ತೊಂದರೆ ಆಗಿದೆ. ಇದನ್ನು ಮನಗಂಡು ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ರಸ್ತೆ ವಿಸ್ತರಣೆ ಮಾಡುವಂತೆ ನಗರಸಭೆಗೆ ಅನೇಕ ಬಾರಿ ಮನವಿ ಮಾಡಲಾಗಿತ್ತು ಎಂದು ಸ್ಥಳೀಯ ರಾಜಕೀಯ ಮುಖಂಡ ವರಸಿದ್ದಿವೇಣುಗೋಪಾಲ ಹೇಳುತ್ತಾರೆ.

ನಗರಸಭೆಯ ಎಸ್‌ಎಫ್‌ಸಿ ಅನುದಾನದಿಂದ 26 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಶುಕ್ರವಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಸ್ತೆ ಹಾಗೂ ಪಾದಾಚಾರಿ ಮಾರ್ಗ ನಿರ್ಮಾಣವಾಗಲಿದೆ ಎಂದು ಅವರು ಹೇಳಿದ್ದಾರೆ.ಆದರೆ, ಇದಕ್ಕಿಂತಲೂ ನಗರದಲ್ಲಿ ಕಿರಿದಾಗಿ ಕಿಷ್ಕೆಂದೆಯಾಗಿರುವ ಅನೇಕ ರಸ್ತೆಗಳಿವೆ. ಈ ರೀತಿ ಪ್ರಧಾನ ಅಂಚೆ ಕಚೇರಿಯ ನಾಯ್ಡು ರಸ್ತೆ, ದಿಪಾ ನರ್ಸಿಂಗ್‌ಹೋಂ ರಸ್ತೆ, ಗುರುನಾಥ ಚಿತ್ರ ಮಂದಿರದ ರಸ್ತೆ, ನೆಹರು ರಸ್ತೆ ಹೀಗೆ ನಾನಾ ರಸ್ತೆಗಳು ಕಿರಿದಾಗಿದ್ದು ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸಂಚಾರ ಯಾತನಮಯವಾಗಿರುತ್ತದೆ. ನಿತ್ಯ ಟ್ರಾಫಿಕ್‌ ಜಾಂ ಆಗಿರುತ್ತದೆ. ಇಂತಹ ರಸ್ತೆಗಳನ್ನೆಲ್ಲಾ ಬಿಟ್ಟು ಸುಸ್ಥಿತಿಯಲ್ಲಿದ್ದ ಬಸವನಹಳ್ಳಿ ಅಡ್ಡ ರಸ್ತೆಯನ್ನೆ ಅಭಿವೃದ್ಧಿಗೆ ಆಯ್ಕೆ ಮಾಡಿಕೊಂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

------------

ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಅಗತ್ಯ ರಸ್ತೆಗಳನ್ನು ವಿಸ್ತರಿಸುವುದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಸುಸ್ಥಿತಿಯಲ್ಲಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಸರಿಯಲ್ಲ. ಈ ಬಗ್ಗೆ ನಗರಸಭೆ ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ರಸ್ತೆ ಅಭಿವೃದ್ಧಿಪಡಿಸಲು ಕ್ರಮವಹಿಸಬೇಕಿತ್ತು.ಆದರೆ, ಅವರ ಒಪ್ಪಿಗೆ ಇದೆಯೋ ಇಲ್ಲವೋ ತಿಳಿಯದು.

-ಗುರುಶಾಂತಪ್ಪ,ರೈತ ಹೋರಾಟಗಾರರು

---------------------

ಎಸ್‌ಎಫ್‌ಸಿ ಅನುದಾನದಲ್ಲಿ ಕಳೆದ ವರ್ಷವೇ ಈ ರಸ್ತೆಗೆ ಹಣ ಮಂಜೂರಾಗಿದ್ದು ಅನೇಕ ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ತಾಲೂಕು ಕಚೇರಿಯಿಂದ ಅನುಮತಿ ಬೇಕಿತ್ತು. ಬಸವನಹಳ್ಳಿ ಶಾಲೆ ಚರಂಡಿ ನಿರ್ಮಾಣವಾಗಬೇಕಿತ್ತು. ಈಗ ಈ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಹಾಗಾಗಿ ಈಗ ರಸ್ತೆ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ.

-ಶಿಲ್ಪಾರಾಜಶೇಖರ್‌, ನಗರಸಭೆ ಅಧ್ಯಕ್ಷೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ