ಆ್ಯಪ್ನಗರ

ಸರಸ್ವತಿ ಪುತ್ರರ ನಡುವೆ ಬದುಕಿದ್ದೇ ಸಾರ್ಥಕತೆ

ದಿವ್ಯಶಕ್ತಿ ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರಂತಹ ಸರಸ್ವತಿ ಪುತ್ರರ ನಡುವೆ ಬದುಕಿದ್ದೇ ನನ್ನ ಜೀವನದ ಸಾರ್ಥಕತೆ ಎಂದು ರಾಜೇಶ್ವರಿ ತೇಜಸ್ವಿ ಹೇಳಿದರು.

Vijaya Karnataka 15 Dec 2022, 4:32 pm
ಚಿಕ್ಕಮಗಳೂರು: ದಿವ್ಯಶಕ್ತಿ ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರಂತಹ ಸರಸ್ವತಿ ಪುತ್ರರ ನಡುವೆ ಬದುಕಿದ್ದೇ ನನ್ನ ಜೀವನದ ಸಾರ್ಥಕತೆ ಎಂದು ರಾಜೇಶ್ವರಿ ತೇಜಸ್ವಿ ಹೇಳಿದರು.
Vijaya Karnataka Web rajeshwari tejaswi


ನಗರದ ಕುವೆಂಪು ಕಲಾ ಮಂದಿರದಲ್ಲಿ ಮಂಗಳವಾರ ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ರಂಗರೂಪವನ್ನು ವೀಕ್ಷಿಸಿ, ತಮಗೆ 82 ವರ್ಷ ತುಂಬಿದ ಹಿನ್ನೆಲೆಯಲ್ಲಿ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಶ್ರೀರಾಮಾಯಣ ದರ್ಶನಂನಂತಹ ಮಹಾಕಾವ್ಯವನ್ನು ರಂಗರೂಪಕ್ಕೆ ಅಳವಡಿಸುವುದು ಸುಲಭದ ಮಾತಲ್ಲ. ಆದರೆ, ಮೈಸೂರು ರಂಗಾಯಣ ಆ ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡಿದೆ. ಇಡೀ ನಾಟಕವನ್ನು ನೋಡುವಾಗ ನಾನು ಭೂಮಿ ಮೇಲಿದ್ದೇನೋ ಮತ್ಯಾವುದೋ ಲೋಕದಲ್ಲಿದ್ದೇನೋ ಎಂದು ಭಾಸವಾಗುತ್ತಿತ್ತು. ಕುವೆಂಪು ಅವರ ಆಶಯಕ್ಕೆ ಧಕ್ಕೆಯಾಗದಂತೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಪ್ರದರ್ಶಿಸಿರುವುದು ತಮಗೆ ಅತೀವ ಸಂತಸ ನೀಡಿದೆ ಎಂದರು.

ಕುವೆಂಪು ಬರೀ ವ್ಯಕ್ತಿಯಲ್ಲ; ಅವರೊಂದು ದಿವ್ಯಶಕ್ತಿ. ಪೂರ್ಣಚಂದ್ರ ತೇಜಸ್ವಿ ಕೂಡ ಸರಸ್ವತಿ ಪುತ್ರ. ಇಂತಹ ದಿವ್ಯಶಕ್ತಿಗಳ ಸಾನ್ನಿಧ್ಯದಲ್ಲಿ ನಾನು ಬದುಕಿದ್ದೆ ಎಂಬುದೇ ಒಂದು ಸಾರ್ಥಕ ಭಾವನೆ ನೀಡುತ್ತದೆ. ಶ್ರೀರಾಮಾಯಣ ದರ್ಶನಂನಲ್ಲಿ ಕುವೆಂಪು ವೈಚಾರಿಕ ದರ್ಶನ ಮಾಡಿಸಿದ್ದಾರೆ. ಹಳಗನ್ನಡದಲ್ಲಿ ರಚಿತವಾದ ಈ ಮಹಾಕಾವ್ಯವನ್ನು ಇಂದಿನ ತಲೆಮಾರಿಗೆ ರಂಗರೂಪದ ಮೂಲಕ ಕಟ್ಟಿಕೊಂಡು ಅರ್ಥ ಮಾಡಿಸುವ ಮಹಾನ್‌ ಕೆಲಸವನ್ನು ಮೈಸೂರು ರಂಗಾಯಣ ಮಾಡಿದೆ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಹಾಗೂ ಈ ನಾಟಕಕ್ಕಾಗಿ ದುಡಿದವರಿಗೆ ಎಷ್ಟು ನಮನಗಳನ್ನು ಹೇಳಿದರೂ ಕಡಿಮೆಯೇ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್‌ ಮಾತನಾಡಿ, ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಕೃತಿಯನ್ನು ರಂಗರೂಪಕ್ಕೆ ಅಳವಡಿಸಿ ರಾಜ್ಯಾದ್ಯಂತ ಪ್ರದರ್ಶಿಸಲಾಗುತ್ತಿದೆ. ಜಿಲ್ಲೆಯಲ್ಲಿ ನಾಟಕಗಳನ್ನು ಆಸ್ವಾದಿಸುವ ಉತ್ತಮ ಪ್ರೇಕ್ಷಕ ವರ್ಗವಿದ್ದು, ರಂಗಭೂಮಿ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುಳ ಹುಲ್ಲಹಳ್ಳಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ