ಆ್ಯಪ್ನಗರ

ಜೂನ್‌ನಿಂದ ಏಳನೇ ಆರ್ಥಿಕ ಗಣತಿ ಆರಂಭ

ಜಿಲ್ಲೆಯಲ್ಲಿ ಏಳನೇ ಆರ್ಥಿಕ ಗಣತಿಯನ್ನು ಜೂನ್‌ ತಿಂಗಳಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌ ತಿಳಿಸಿದರು.

Vijaya Karnataka 18 Jun 2019, 5:00 am
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಏಳನೇ ಆರ್ಥಿಕ ಗಣತಿಯನ್ನು ಜೂನ್‌ ತಿಂಗಳಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌ ತಿಳಿಸಿದರು.
Vijaya Karnataka Web CKM-17RUDRAP3


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ 7ನೇ ಅರ್ಥಿಕ ಗಣತಿಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಗಣತಿ ಕಾರ್ಯ ಜೂನ್‌ನಿಂದ ಪ್ರಾರಂಭಿಸಿ 3 ತಿಂಗಳ ಕಾಲಾವಧಿಯಲ್ಲಿ ಮುಗಿಸಲು ಸರಕಾರ ಸೂಚನೆ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಬೇಕು. ಆರ್ಥಿಕ ಗಣತಿಯಲ್ಲಿ ಸಂಗ್ರಹಿಸಲಾದ ಮಾಹಿತಿಗಳನ್ನಾಧರಿಸಿ ವಿವಿಧ ಯೋಜನೆಗಳನ್ನು ರೂಪಿಸಲು ಮತ್ತು ವಿವಿಧ ವಲಯಗಳಿಂದ ಆರ್ಥಿಕತೆಗೆ ದೊರಕುವ ಕೊಡುಗೆಯನ್ನು ಅಂದಾಜಿಸುವುದು ಗಣತಿ ಕಾರ್ಯದ ಮುಖ್ಯ ಉದ್ದೇಶವಾಗಿದೆ. ಗಣತಿ ಕಾರ್ಯದಲ್ಲಿ ಯಾವುದೇ ಲೋಪ ದೋಷಗಳಿಗೆ ಆಸ್ಪದ ನೀಡದೆ ಪ್ರತಿ ಮನೆಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.

7ನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯವನ್ನು ಹಾಗೂ ಮೊದಲನೇ ಹಂತದ ಮೇಲ್ವಿಚಾರಣೆಯನ್ನು ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ ಮಾಹಿತಿ ಮತ್ತು ತಂತ್ರಜ್ಞಾನದ ಸಚಿವಾಲಯದ ಅಡಿಯಲ್ಲಿ ಬರುವ ಕಾಮನ್‌ ಸರ್ವಿಸ್‌ ಸೆಂಟರ್‌ ಇ ಗೌರ್ನೆನ್ಸ್‌ ಸರ್ವಿಸ್‌ ಲಿಮಿಟೆಡ್‌ ಸಹಯೋಗದೊಂದಿಗೆ ಮೊಬೈಲ್‌ ಆಫ್‌ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಇ.ಗೌರ್ನೆನ್ಸ್‌ ಸರ್ವಿಸ್‌ ಲಿಮಿಟೆಡ್‌ ಮೂಲಕ ನೇಮಕವಾದ ಜಿಲ್ಲಾ ವ್ಯವಸ್ಥಾಪಕರನ್ನು ಹಾಗೂ ಗಣತಿದಾರರನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿ ಕ್ಷೇತ್ರ ಗಣತಿ ಮತ್ತು ಮೇಲ್ವಿಚಾರಕರೊಂದಿಗೆ ಆರ್ಥಿಕ ಗಣತಿ ಕೈಗೊಳ್ಳುತ್ತಾರೆ ಎಂದರು.

ಜಿಲ್ಲೆಯಲ್ಲಿ 1117 ಗ್ರಾಮಗಳಲ್ಲಿ ಹಾಗೂ 8 ನಗರ ಪ್ರದೇಶಗಳಲ್ಲಿ ಗಣತಿ ಬ್ಲಾಕ್‌ಗಳ ಸರಹದ್ದನ್ನು ಗುರುತಿಸುವಲ್ಲಿ ಸಂಬಂಧಪಟ್ಟ ನಗರ ಗ್ರಾಮಗಳ ಕಂದಾಯ ಇಲಾಖೆæ, ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ನೆರವು ನೀಡಬೇಕು ಎಂದು ತಿಳಿಸಿದರು.

6ನೇ ಆರ್ಥಿಕ ಗಣತಿಯಲ್ಲಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 54,218 ಮತ್ತು ನಗರ ಪ್ರದೇಶ ವ್ಯಾಪ್ತಿಯಲ್ಲಿ 18,266 ಒಟ್ಟು 72,484 ಉದ್ಯಮಗಳು ಇರುತ್ತವೆ. ಪ್ರಸ್ತುತ ಗಣತಿ ಸಂದರ್ಭದಲ್ಲಿ ಯಾವುದೇ ಉದ್ಯಮವನ್ನು ಬಿಡದಂತೆ ಕ್ರಮ ವಹಿಸಿ ನಿಗಧಿತ ಸಮಯದೊಳಗೆ ಗಣತಿ ಕಾರ್ಯ ಪೂರ್ಣಗೊಳಿಸುವಂತೆ ಸಂಬಂಧಿಸಿದ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಿಗೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕರೇಗೌಡ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ