ಆ್ಯಪ್ನಗರ

ರಾಜರಾಜೇಶ್ವರಿಯಾಗಿ ರಾರಾಜಿಸಿದ ಶಾರದೆ

ಪಟ್ಟಣದಲ್ಲಿ ಶರನ್ನವರಾತ್ರಿ ಮಹೋತ್ಸವ ದಿನೇದಿನೆ ಮೆರಗು ಪಡೆಯುತ್ತಿದ್ದು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿವೆ. ರಾಜಬೀದಿ ಉತ್ಸವದಲ್ಲಿ ಭಕ್ತರು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Vijaya Karnataka 17 Oct 2018, 5:00 am
ಶೃಂಗೇರಿ : ಪಟ್ಟಣದಲ್ಲಿ ಶರನ್ನವರಾತ್ರಿ ಮಹೋತ್ಸವ ದಿನೇದಿನೆ ಮೆರಗು ಪಡೆಯುತ್ತಿದ್ದು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿವೆ. ರಾಜಬೀದಿ ಉತ್ಸವದಲ್ಲಿ ಭಕ್ತರು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
Vijaya Karnataka Web CKM-16sri01


ಶ್ರೀ ಶಾರದಾ ಪೀಠದ ಆರಾಧ್ಯ ದೇವತೆ ಶ್ರೀ ಶಾರದೆಯನ್ನು ಈ ವರೆಗೆ ಬ್ರಾಹ್ಮೀ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವೀಣಾಶಾರದೆಯಾಗಿ ಅಲಂಕರಿಸಲಾಗಿದೆ. ಮಂಗಳವಾರ ಶ್ರೀ ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು. ಪಾಶ, ಅಂಕುಶ, ಪುಷ್ಪಬಾಣ, ಬಿಲ್ಲು ಹಿಡಿದು ಕರುಣಾ ಪೂರಿತ ದೃಷ್ಟಿ ಉಳ್ಳವಳಾಗಿ ಕಾಮೇಶ್ವರನ ಪ್ರಾಣಕಾಂತೆಯಾಗಿರುವ ರಾಜರಾಜೇಶ್ವರಿಗೆ ಸಾವಿರಾರು ಭಕ್ತರು ಭಕ್ತಿ ಭಾವದಿಂದ ನಮಿಸಿ ಕೃತಾರ್ಥರಾದರು. ಪಂಚಬ್ರಹ್ಮ ಸ್ವರೂಪಿಣಿಯೂ, ಕರುಣಾಮೂರ್ತಿಯು ಕೈವಲ್ಯಪ್ರದಾಯಿನಿಯು, ಕ್ಷಿಪ್ರಪ್ರಸಾದಿನಿಯು ಆದ ರಾಜರಾಜೇಶ್ವರಿ ಅಲಂಕಾರ ನಯನ ಮನೋಹರವಾಗಿದೆ. ಕನ್ನಡಿಯಂತೆ ಸ್ವಚ್ಛವಾಗಿರುವ ಮನಸ್ಸುಗಳಲ್ಲಿ ತನ್ನ ಪಾದ ಪದ್ಮವು ಚೆÜನ್ನಾಗಿ ಹೊಳೆಯುತ್ತದೆ ಎಂದು ಭಕ್ತರಿಗೆ ತಿಳಿಸುವ ಸಲುವಾಗಿ ದೇವಿ ತನ್ನ ಪಾದ ತಳದಲ್ಲಿ ಕನ್ನಡಿಯನ್ನು ಹೊಂದಿರುವುದು ಈ ದಿನದ ವೈಶಿಷ್ಟ್ಯವಾಗಿದೆ.

ಪುರಾಣ, ಐತಿಹಾಸಿಕ ಸ್ಥಳ:


ಶೃಂಗೇರಿ ಪುರಾಣ ಇತಿಹಾಸದ ಸ್ಥಳವಾಗಿದೆ. ಪರಶಿವನು ಸಂಚರಿಸಿದ ಸ್ಥಳ ಪಟ್ಟಣದ ಹೃದಯ ಭಾಗದಲ್ಲಿರುವ ಬೆಟ್ಟದಲ್ಲಿ ಮಲಹಾನಿಕರೇಶ್ವರ ದೇವಾಲಯವಿದೆ. ಇದು ಮಹರ್ಷಿ ವಿಭಾಂಡಕ ಮುನಿಗಳು ಲೋಕ ಕಲ್ಯಾಣಾರ್ಥವಾಗಿ ತಪಸ್ಸನ್ನು ಆಚರಿಸಿ ಶಿವೈಕ್ಯರಾದ ಪುಣ್ಯ ಸ್ಥಳವಾಗಿದೆ.

ವಿಜೃಂಭಣೆಯ ಆಚರಣೆ:

ಶ್ರೀ ಶಾರದಾ ಪೀಠದ 12ನೇ ಜಗದ್ಗುರುಗಳಾಗಿದ್ದ ಶ್ರೀ ವಿದ್ಯಾರಣ್ಯರ ಕಾಲದಿಂದ ನವರಾತ್ರಿ ಉತ್ಸವದಲ್ಲಿ ಶಕ್ತಿಯ ಆರಾಧನೆ ಜತೆಗೆ ದಸರಾ ದರ್ಬಾರು ಕೂಡ ಪೂರ್ವ ಪರಂಪರೆಯಂತೆ ಇಂದಿಗೂ ನಡೆದುಕೊಂಡು ಬಂದಿದೆ. ಯಾವುದೇ ರೀತಿಯಲ್ಲಿ ಶಾಸ್ತ್ರ ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆನುಚಾನವಾಗಿ ವಿಜೃಂಭಣೆಯಿಂದ ನಡೆಯುತ್ತಿದೆ. ಸಾಂಸ್ಕೃತಿಕ ಮೆರುಗಿನ ದರ್ಬಾರು ಉತ್ಸವ ನೋಡಲು ಬರುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಶ್ರೀ ಶಾರದೆಯ ಸನ್ನಿಧಿಯಲ್ಲಿ ಮಂಗಳವಾರ ರಾತ್ರಿ ನಡೆದ ಸಪ್ತಶತೀ ಪಾರಾಯಣದ 9ನೇ ಅಧ್ಯಾಯ, ಸಪ್ತಶತೀ ಪೂಜೆ, ಚರ್ತುವೇದ ಪಾರಾಯಣ, ಅಷ್ಟಾವದಾನ ಸೇವೆ ಸರ್ವವಾದ್ಯ ಸೇವೆ, ಜಗದ್ಗುರುಗಳ ರಾಜ ದರ್ಬಾರು ದಿಂಡಿ ದೀಪಾರಾಧನೆ ಭಕ್ತರನ್ನು ಭಾವ ಪರವಶರಾಗಿಸಿತು.

ರಾಜಬೀದಿ ಉತ್ಸವ:

ಸಂಜೆ ಪ್ರತಿದಿನ ಶ್ರೀ ಶಾರದೆಯ ವಿಗ್ರಹದೊಂದಿಗೆ ಭವ್ಯ ಮೆರವಣಿಗೆಯಲ್ಲಿ ರಾಜಬೀದಿ ಉತ್ಸವ ನಡೆಯುತ್ತಿದೆ. ತಾಲೂಕಿನ 9 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿದಿನ ಒಂದೊಂದು ಗ್ರಾ.ಪಂ. ವ್ಯಾಪ್ತಿಯ ಜನತೆ ರಾಜಬೀದಿ ಉತ್ಸವದಲ್ಲಿ ಭಜನಾ ಕ್ರಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಮಂಗಳವಾರ ರಾಜಬೀದಿ ಉತ್ಸವದ ಹೊಣೆಗಾರಿಕೆ ಧರೆಕೊಪ್ಪ ಗ್ರಾ.ಪಂ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡರು.

ಮನಸ್ಸಿಗೆ ಆನಂದ:

ಶ್ರೀ ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವದಲ್ಲಿ ಪ್ರತಿದಿನ ಸಂಜೆ ಸಂಗೀತ ಭಕ್ತರಿಗೆ ಇಂಪಾದ ಆನಂದ ತಂದಿದೆ. ರಾಜ್ಯ ಹಾಗೂ ಹೊರ ರಾಜ್ಯಗಳ ಸಂಗೀತ ವಿದ್ವಾಂಸರು ಶ್ರೋತೃಗಳಿಗೆ ರಸದೌತಣ ನೀಡುತ್ತಿದ್ದಾರೆ. ಬೆಂಗಳೂರಿನ ನಾಗಚೇತನ ಮತ್ತು ತಂಡದವರಿಂದ ಮಂಗಳವಾರ ಹಾಡುಗಾರಿಕೆ ಏರ್ಪಡಿಸಲಾಗಿತ್ತು.

ಮಳೆರಾಯನ ಅಡ್ಡಿ: ತಾಲೂಕಿನಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸಾಮಾನ್ಯ ಮಳೆಯಾಯಿತು. ನಂತರ ಮೋಡ ಕವಿದ ವಾತಾವರಣ ತುಂತುರು ಮಳೆಯಿಂದಾಗಿ ನವರಾತ್ರಿಗೆ ಆಗಮಿಸಿದ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಯಿತು. ತುಂತುರು ಮಳೆಯನ್ನೂ ಲೆಕ್ಕಿಸದೆ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡರು.

ಬುಧವಾರದ ಕಾರ್ಯಕ್ರಮ: ಶ್ರೀ ಶಾರದೆಗೆ ಮೋಹಿನಿ ಅಲಂಕಾರ. ಧಾರ್ಮಿಕ ಕಾರ್ಯಕ್ರಮ ಉಭಯ ಜಗದ್ಗುರುಗಳಿಂದ ವಿಶೇಷ ಪೂಜೆ ಸಂಜೆ ಬೀದಿ ಉತ್ಸವ ನೆಮ್ಮಾರು ಗ್ರಾ.ಪಂ ಭಕ್ತಾದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ. ಬೆಂಗಳೂರಿನ ಜ್ಞಾನೋದಯ ಶಾಲಾ ವಿದ್ಯಾರ್ಥಿಗಳಿಂದ ಸಂಗೀತ ಸಂಜೆ. ರಾತ್ರಿ ಜಗದ್ಗುರುಗಳ ದರ್ಬಾರು, ಉತ್ಸವ ದಿಂಡಿ ದೀಪಾರಾಧನೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ