ಆ್ಯಪ್ನಗರ

ಶೋಭಾ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ

ಪ್ರಧಾನಿ ಮೋದಿ ಸಾಧನೆಯಿಂದಾಗಿ ಭಾರತವನ್ನು ಪ್ರಪಂಚದ ರಾಷ್ಟ್ರಗಳು ಎದುರು ನೋಡುತ್ತಿವೆ. ಮೋದಿ ಯಶಸ್ಸಿನ ಗಾಥೆಯ ಆಧಾರದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Vijaya Karnataka 23 Mar 2019, 5:00 am
ಚಿಕ್ಕಮಗಳೂರು : ಪ್ರಧಾನಿ ಮೋದಿ ಸಾಧನೆಯಿಂದಾಗಿ ಭಾರತವನ್ನು ಪ್ರಪಂಚದ ರಾಷ್ಟ್ರಗಳು ಎದುರು ನೋಡುತ್ತಿವೆ. ಮೋದಿ ಯಶಸ್ಸಿನ ಗಾಥೆಯ ಆಧಾರದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Vijaya Karnataka Web CKM-22ARAGAP2


ಉಡುಪಿಯಲ್ಲಿ ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿಗೆ ಸಾಂಕೇತವಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕುಟುಂಬ ರಾಜಕಾರಣ ನಿರತರಿಗೆ ದೇಶಭಕ್ತಿ, ಪ್ರಜಾತಂತ್ರ ಅರ್ಥವಾಗದ ಕಾರಣ ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರದ್ದು ಆನೆ ನಡಿಗೆಯಾಗಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹಿತ ಯಾರ ಪ್ರಮಾಣಪತ್ರ ಅಗತ್ಯವಿಲ್ಲ ಎಂದರು.

ರಾಜ್ಯದಲ್ಲಿ 22ರಿಂದ 23 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದ್ದು ಕಾರ‍್ಯಕರ್ತರು ಉತ್ಸಾಹದಿಂದ ಇದ್ದಾರೆ. ಕೇಂದ್ರ, ರಾಜ್ಯ ಮುಖಂಡರು ಮತ್ತೆ ಟಿಕೆಟ್‌ ನೀಡಿದ್ದರಿಂದ ಮೋದಿ ಜತೆ ಕೆಲಸ ಮಾಡುವ ಅವಕಾಶ ಬಹುದೊಡ್ಡ ಮತಗಳ ಅಂತರದ ಗೆಲುವಿನಿಂದ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿ, ಅಡಕೆ, ಕಾಫಿ ಬೆಳೆಗಾರರಿಗೆ ಅನುಕೂಲ, ಕೇಂದ್ರ, ರಾಜ್ಯದಿಂದ ಮತ್ತಷ್ಟು ಯೋಜನೆ, ಅನುದಾನ ತರಲು ಮುಂದಿನ 5 ವರ್ಷಗಳಲ್ಲಿ ಪ್ರಯತ್ನಿಸಲಾಗುವುದು ಎಂದರು.

ಕಾಪು ಶಾಸಕ ಲಾಲಾಜಿ ಆರ್‌.ಮೆಂಡನ್‌, ಬಿಜೆಪಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಡಿ.ಎನ್‌.ಜೀವರಾಜ್‌, ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನವೀನ್‌ ಶೆಟ್ಟಿ ಕುತ್ಯಾರು, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಭಾರತಿಶೆಟ್ಟಿ, ಸಂಧ್ಯಾರಮೇಶ್‌ ನಾಯಕ್‌, ಸಾಣೂರು ನರಸಿಂಹಕಾಮತ್‌, ಪ್ರಭಾಕರ ಪೂಜಾರಿ ಹಾಜರಿದ್ದರು.

26ಕ್ಕೆ ಮತ್ತೆ ನಾಮಪತ್ರ

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಶುಕ್ರವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಮಾ.26ರಂದು ಪುನಃ ನಾಮಪತ್ರ ಸಲ್ಲಿಸುವರು. ಅಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಪಾಲ್ಗೊಳ್ಳಲಿದ್ದು, ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಕಾರ‍್ಯಕರ್ತರು, ಮೀನುಗಾರರು, ಮಹಿಳೆಯರ ಸಮಾವೇಶ ಮಾ.31ರೊಳಗೆ ನಡೆಯಲಿದೆ. ಏಪ್ರಿಲ್‌ 1ರಿಂದ 7ರವರೆಗೆ ಬೂತ್‌ ಸಮಿತಿ, ಏ.7ರಿಂದ ಮನೆ ಮನೆ ಪ್ರಚಾರ ನಡೆಯಲಿದೆ. ಶುಕ್ರವಾರ ಮಹಾಕಾಳಿ, ದುರ್ಗೆಯ ದಿನವಾದರೆ ಸಾರ್ವಜನಿಕವಾಗಿ ನಾಮಪತ್ರ ಸಲ್ಲಿಸುವ ಮಂಗಳವಾರವೂ ದುರ್ಗೆಯ ದಿನ, ಶುಭದಿನ. ಗೆಲುವು ದೊರೆಯಲಿದೆ ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲರೂ ಪಕ್ಷದ ಸೇನಾನಿಗಳು

ಟಿಕೆಟ್‌ ಘೋಷಣೆ ಬಳಿಕ ಎಲ್ಲರೂ ಪಕ್ಷದ ಸೇನಾನಿಗಳಾಗಿ ಕೆಲಸ ಮಾಡಲಿದ್ದಾರೆ. ಮತಯಂತ್ರದಲ್ಲಿರುವ ಕಾಂಗ್ರೆಸ್‌ಗೆ ನೋಟಾ ಹಾಕುವ ಸ್ಥಿತಿ ಬಂದಿದೆಯೇ ವಿನಾ ಬಿಜೆಪಿಗಲ್ಲ. ಕಾಂಗ್ರೆಸ್‌, ಜೆಡಿಎಸ್‌ ಷಡ್ಯಂತ್ರಕ್ಕೆ ಮತದಾರರು ಬಲಿಯಾಗಲಾರರು. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಪ್ರಜಾತಂತ್ರದಲ್ಲಿ ಯಾವುದೇ ಪಕ್ಷ ಸೇರಲು, ಸ್ಪರ್ಧಿಸಲು ಸ್ವತಂತ್ರರು. ಎರಡೂ ಪಕ್ಷಗಳು ಉತ್ತಮ ಹೋರಾಟ ನೀಡಲು ಒಂದಾಗಿದ್ದರೂ ನಾವು ಮಣಿಸುತ್ತೇವೆ. ಕಳೆದ ಬಾರಿಗಿಂತ ಎರಡುಪಟ್ಟು ಹೆಚ್ಚು ಮತಗಳ ಅಂತರದ ಗೆಲುವು ನಮ್ಮದಾಗಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ