ಆ್ಯಪ್ನಗರ

ಇಂದಿನಿಂದ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ

ಕೃಷಿಪ್ರಧಾನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗ ಸುಗ್ಗಿ ಸಂಭ್ರಮ. ಹಚ್ಚಹಸಿರಿನ ನಿಸರ್ಗ ಸಿರಿಯ ಗಿಡಮರಗಳಲ್ಲಿ ಈಗಷ್ಟೇ ಹಣ್ಣೆಲೆ ಉದುರಿ ಚಿಗುರೆಲೆಗಳ ಜೋಕಾಲಿಯೊಂದಿಗೆ ವಸಂತಾಗಮನ. ಇಂತಹ ಪ್ರಕೃತಿ ಸಿರಿಯ ಮಡಿಲಲ್ಲಿ ಮಾ.2 ಮತ್ತು 3ರಂದು ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ

Vijaya Karnataka 2 Mar 2019, 5:00 am
ಚಿಕ್ಕಮಗಳೂರು : ಕೃಷಿಪ್ರಧಾನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗ ಸುಗ್ಗಿ ಸಂಭ್ರಮ. ಹಚ್ಚಹಸಿರಿನ ನಿಸರ್ಗ ಸಿರಿಯ ಗಿಡಮರಗಳಲ್ಲಿ ಈಗಷ್ಟೇ ಹಣ್ಣೆಲೆ ಉದುರಿ ಚಿಗುರೆಲೆಗಳ ಜೋಕಾಲಿಯೊಂದಿಗೆ ವಸಂತಾಗಮನ. ಇಂತಹ ಪ್ರಕೃತಿ ಸಿರಿಯ ಮಡಿಲಲ್ಲಿ ಮಾ.2 ಮತ್ತು 3ರಂದು ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ.
Vijaya Karnataka Web CKM-1ARAGAP1


ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿರುವ ಎರಡು ದಿನಗಳ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅಧ್ಯಕ್ಷರಾಗಿರುವುದು ಮತ್ತೊಂದು ವಿಶೇಷ. ಎರಡು ದಿನಗಳ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ: ಮಹಿಳಾ ನೋಟ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ, ಮಹಿಳೆ ಮತ್ತು ಚಳವಳಿ ಗೋಷ್ಠಿಗಳು, ಕವಿಗೋಷ್ಠಿ ನಡೆಯಲಿವೆ.

ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರು ನೀಡಿದ ಕೊಡುಗೆ, ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಸ್ಥಿತಿಗತಿ, ಎದುರಿಸುತ್ತಿರುವ ಸವಾಲುಗಳು, ಸಿಗಬೇಕಿರುವ ಅವಕಾಶಗಳು, ಆಗಬೇಕಿರುವ ಬದಲಾವಣೆಗಳು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಬಗೆ ಸೇರಿದಂತೆ ಹಲವು ಆಯಾಮಗಳಲ್ಲಿ ಚಿಂತನ ಮಂಥನ ನಡೆಯಲಿದೆ.

ತನ್ನದೇ ಆದ ಸಂಸ್ಕೃತಿ, ವೇಷಭೂಷಣ, ಆಚಾರ ವಿಚಾರ ಹೊಂದಿರುವ ಮಲೆನಾಡಿನ ಪರಿಸರದಲ್ಲಿ ಸಮ್ಮೇಳನ ನಡೆಯುತ್ತಿದ್ದು, ಜಿಲ್ಲೆಯ ಸಾಮಾಜಿಕ ಪರಿಸರದಲ್ಲಿ ಮಹಿಳೆಯರ ನೋವು ನಲಿವುಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಆದರೆ, ಇಂತಹ ಚರ್ಚೆಗೆ ಜಿಲ್ಲೆಗೆ ಪ್ರತ್ಯೇಕ ಗೋಷ್ಠಿ ನಿಗದಿಯಾಗಿಲ್ಲ.

ನಗರದ ಕುವೆಂಪು ಕಲಾ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಸಂಪೂರ್ಣ ಸಿದ್ಧತೆಗಳು ನಡೆದಿವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಬಗ್ಗೆ ಜನರಲ್ಲಿ ಕುತೂಹಲವಿದ್ದು, ಸಮ್ಮೇಳನದ ಯಶಸ್ವಿಗೆ ನೂರಾರು ಮಹಿಳೆಯರು ಸಂಘಟಿತ ಹೆಜ್ಜೆ ಹಾಕುತ್ತಿದ್ದಾರೆ.

ಇವತ್ತು ಏನೇನಿರುತ್ತೆ?
ಬೆಳಗ್ಗೆ 9ಕ್ಕೆ ಎಂ.ಜಿ.ರಸ್ತೆಯ ಗಣಪತಿ ದೇವಸ್ಥಾನದಿಂದ ಅಂಚೆ ಕಚೇರಿ ರಸ್ತೆ ಮೂಲಕ ಕುವೆಂಪು ಕಲಾ ಮಂದಿರದವರೆಗೆ ಸಮ್ಮೇಳನಾಧ್ಯಕ್ಷೆ ಡಾ.ಸುಧಾ ಮೂರ್ತಿ ಅವರ ಮೆರವಣಿಗೆ. 10.30ಕ್ಕೆ ಕುವೆಂಪು ಕಲಾ ಮಂದಿರದಲ್ಲಿ ಸಮ್ಮೇಳನದ ಉದ್ಘಾಟನೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಉದ್ಘಾಟಿಸುವರು. ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಡಿ.ಎಸ್‌.ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ಸಂಸದೆ ಶೋಭಾ ಕರಂದ್ಲಾಜೆ, ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಬರಹಗಾರ್ತಿ ರಾಜೇಶ್ವರಿ ತೇಜಸ್ವಿ, ನಗರಸಭೆ ಅಧ್ಯಕ್ಷೆ ಶಿಲ್ಪ ರಾಜಶೇಖರ್‌, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಪಾಲ್ಗೊಳ್ಳುವರು. ಮಧ್ಯಾಹ್ನ 2ಕ್ಕೆ ಡಾ.ವೈ.ಸಿ.ಭಾನುಮತಿ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ: ಮಹಿಳಾ ನೋಟ ಗೋಷ್ಠಿ ನಡೆಯಲಿದೆ. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಪ್ರತಿನಿಧೀಕರಣದ ಬಗ್ಗೆ ಡಾ.ರಾಜೇಶ್ವರಿ ಮಹೇಶ್ವರಯ್ಯ, ಮಹಿಳೆಯ ದೃಷ್ಟಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಬಗ್ಗೆ ಡಾ.ಎಚ್‌.ಎಲ್‌.ಪುಷ್ಪ, ಜಾನಪದ ಮತ್ತು ಶಾಸನಗಳಲ್ಲಿ ಮಹಿಳೆಯರ ಚಿತ್ರಣದ ಬಗ್ಗೆ ಡಾ.ಎನ್‌.ಕೆ.ಲೋಲಾಕ್ಷಿ ವಿಷಯ ಮಂಡಿಸುವರು. ಸಂಜೆ 4ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ನಿರ್ಮಲಾ ಯಲಿಗಾರ್‌ ನಿರ್ವಹಿಸುವರು. ಸಂವಾದದಲ್ಲಿ ಡಾ.ಎಂ.ಪಿ.ರೇಖಾ, ಬಿ.ಸಿ.ಶೈಲಾ ನಾಗರಾಜ್‌, ಸಹನಾ ಕಾಂತಬೈಲು, ಪದ್ಮಾ ತಿಮ್ಮೇಗೌಡ, ಡಾ.ಕೆ.ಲೀಲಾ ಪ್ರಕಾಶ್‌, ಪುಷ್ಪಾ ಅಯ್ಯಂಗಾರ್‌, ದಾಕ್ಷಾಯಣಿ ಬಿರಾದಾರ್‌, ವಾಣಿ ಚಂದ್ರಯ್ಯನಾಯ್ಡು, ಡಾ.ಸಿ.ನಂದಿನಿ, ಕಾಂತಿ ಶೆಟ್ಟಿ, ಭಾಗ್ಯಲಕ್ಷ್ಮಿ ಮಗ್ಗೆ, ವಾಣಿ ಘಟ್ಟಿ, ಬನಶಂಕರಿ ಅಂಗಡಿ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ್‌, ಮಮತಾ ಅರಸಿಕೆರೆ ಪಾಲ್ಗೊಳ್ಳುವರು. ಸಂಜೆ 6ರಿಂದ ಶಿರಸಿಯ ಜ್ಯೋತಿ ಹೆಗಡೆ ಅವರಿಂದ ರುದ್ರವೀಣೆ, ರಾತ್ರಿ 7ರಿಂದ ಡಾ.ಜಯದೇವಿ ಜಂಗಮಶೆಟ್ಟಿ ಅವರಿಂದ ವಚನ ಮತ್ತು ದಾಸರ ಪದಗಳ ಗಾಯನ ಇದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ