ಆ್ಯಪ್ನಗರ

ಕಾಮನದುರ್ಗ ಪಿಡಿಒ ವಿರುದ್ಧ ಉಪ ಲೋಕಾಯುಕ್ತ ತನಿಖೆ

ತರೀಕೆರೆ ತಾಲೂಕು ಕಾಮನದುರ್ಗ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಣ ದುರುಪಯೋಗ ಮತ್ತು ಕಳಪೆ ಕಾಮಗಾರಿ ದೂರಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧದ ಆಪಾದನೆಗಳ ತನಿಖೆಯನ್ನು ಸರಕಾರ ಉಪ ಲೋಕಾಯುಕ್ತಕ್ಕೆ ವಹಿಸಿದೆ.

Vijaya Karnataka 13 Feb 2019, 5:00 am
ಚಿಕ್ಕಮಗಳೂರು : ತರೀಕೆರೆ ತಾಲೂಕು ಕಾಮನದುರ್ಗ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಣ ದುರುಪಯೋಗ ಮತ್ತು ಕಳಪೆ ಕಾಮಗಾರಿ ದೂರಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧದ ಆಪಾದನೆಗಳ ತನಿಖೆಯನ್ನು ಸರಕಾರ ಉಪ ಲೋಕಾಯುಕ್ತಕ್ಕೆ ವಹಿಸಿದೆ.
Vijaya Karnataka Web sub lokayukta probe against kamanadurga pdo
ಕಾಮನದುರ್ಗ ಪಿಡಿಒ ವಿರುದ್ಧ ಉಪ ಲೋಕಾಯುಕ್ತ ತನಿಖೆ


ಕಾಮನದುರ್ಗ ಗ್ರಾ.ಪಂ. ಪಿಡಿಒ ದಿವ್ಯಜ್ಯೋತಿ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ 14(ಎ) ಅಡಿ ಲೋಕಾಯುಕ್ತ ತನಿಖೆಗೆ ವಹಿಸಿದ್ದು, ನಿಯಮಾವಳಿ 1957ರ ನಿಯಮ 8ರಡಿ ಸೂಚಿತವಾದ ಯಾವುದಾದರೊಂದು ಅಥವಾ ಹೆಚ್ಚಿನ ದಂಡನೆ ವಿಧಿಸಲು ಸರಕಾರ ಸಕ್ಷಮ ಪ್ರಾಧಿಕಾರವಾಗಿದೆ.

ಪಿಡಿಒ ದಿವ್ಯಜ್ಯೋತಿ ಮತ್ತು ಗ್ರಾ.ಪಂ. ಅಧ್ಯಕ್ಷ ದೇವರಾಜ್‌ ವಿರುದ್ಧ ಸಂತವೇರಿಯ ಎಚ್‌.ರಾಜು ಎಂಬುವರು ದೂರು ನೀಡಿದ್ದರು. 2012-13ನೇ ಸಾಲಿನಲ್ಲಿ ನಡೆದ ಹಲವು ಅಭಿವೃದ್ಧಿ ಕಾರ‍್ಯಗಳು ಕಳಪೆಯಾಗಿವೆ. ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೆ, ಸಾರ್ವಜನಿಕರ ಹಿತಾಸಕ್ತಿ ಕಾಪಾಡದೆ ಕಳಪೆ ಕಾಮಗಾರಿ ನಡೆಸಿ ಅವ್ಯವಸ್ಥೆಗೆ ಕಾರಣವಾಗಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದರು.

ದೂರುದಾರರು ಹಾಜರುಪಡಿಸಿದ ದಾಖಲೆಗಳ ಬಗ್ಗೆ ಓಂಬುಡ್ಸ್‌ಮನ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪಿಡಿಒ ಮತ್ತು ಅಧ್ಯಕ್ಷರು ಸಮವಾಗಿ ದುರುಪಯೋಗವಾಗಿರುವ ಸರಕಾರದ ಹಣ 20,200ರೂ.ಗಳನ್ನು ಪಂಚಾಯತ್‌ರಾಜ್‌ ಇಲಾಖೆಗೆ ಕಳಿಸಿಕೊಡುವಂತೆ ಆದೇಶಿಸಲಾಗಿತ್ತು. ಯೋಜನೆಯ ಅನುಷ್ಠಾನ, ಹಣ ಬಳಕೆ ಬಗ್ಗೆ ಉತ್ತರದಾಯಿತ್ವ, ಪಾರದರ್ಶಕತೆ ಎತ್ತಿಹಿಡಿಯದಿರುವ ಬಗ್ಗೆ ದಿವ್ಯಜ್ಯೋತಿ, ಕಿರಿಯ ಎಂಜಿನಿಯರ್‌ ಹರೀಶ್‌, ಅಧ್ಯಕ್ಷ ದೇವರಾಜ್‌ಗೆ ದಂಡ ವಿಧಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ಡಿವೈಎಸ್ಪಿಗೆ ಆದೇಶಿಸಲಾಗಿತ್ತು.

ಪಿಡಿಒ ದಿವ್ಯಜ್ಯೋತಿ ಮತ್ತು ಗ್ರಾ.ಪಂ. ಅಧ್ಯಕ್ಷ ದೇವರಾಜ್‌ ಕೆಲವು ಕಳಪೆ ಕಾಮಗಾರಿಗಳನ್ನು ಮಾಡಿದ್ದು, ಕೆಲವು ಕಾಮಗಾರಿಗಳಿಗೆ ಎಸ್ಟಿಮೇಟ್‌ಗಿಂತ ಹೆಚ್ಚು ಖರ್ಚು ಮಾಡಿರುವುದು ಸ್ಥಳ ಮತ್ತು ದಾಖಲೆಗಳ ಪರಿಶೀಲನೆಯಿಂದ ಕಂಡುಬರುತ್ತದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಅಭಿಪ್ರಾಯ ನೀಡಿದ್ದು, ವಿವರಗಳನ್ನು ಲಗತ್ತಿಸಿದ್ದರು.

ಒಟ್ಟು 11 ಕಾಮಗಾರಿಗಳಲ್ಲಿ 56,555ರೂ. ವ್ಯತ್ಯಾಸ ಕಂಡುಬಂದಿದ್ದು, ಹಲವು ಕಾಮಗಾರಿಗಳಿಗೆ ಅಂದಾಜು ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿರುವುದು ತನಿಖೆ ಸಂದರ್ಭ ಬೆಳಕಿಗೆ ಬಂದಿದೆ. ಅಧಿಕಾರ ದುರುಪಯೋಗ, ಕರ್ತವ್ಯಲೋಪ ಎಸಗಿರುವುದು ಕಂಡುಬಂದಿರುವುದರಿಂದ ಸರಕಾರಿ ನೌಕರರಾಗಿ ಕರ್ತವ್ಯ ಪರಿಪಾಲನೆಯಲ್ಲಿ ನಿಷ್ಠೆ ತೋರದೆ, ಕರ್ತವ್ಯಲೋಪವೆಸಗಿ, ದುರ್ವರ್ತನೆ ತೋರಿಸಿ, ನಿಯಮ ಉಲ್ಲಂಘಿಸಿ ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವೆ (ನಡತೆ) ನಿಯಮ 1966ರ ನಿಯಮ 3(1) (ಜಿಜಿ) ಮತ್ತು (ಜಿಜಿಜಿ)ರನ್ವಯ ಶಿಸ್ತುಕ್ರಮಕ್ಕೆ ಬಾಧ್ಯರಾಗುವುದರಿಂದ ಪಿಡಿಒ ವಿರುದ್ಧ ಶಿಸ್ತು ನಡವಳಿಕೆ ಹೂಡಲು, ಇಲಾಖೆ ವಿಚಾರಣೆ ನಡೆಸಲು ಸರಕಾರ ಉಪ ಲೋಕಾಯುಕ್ತರಿಗೆ ಶಿಫಾರಸು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ