ಆ್ಯಪ್ನಗರ

ತಾಳ್ಮೆ, ನಂಬಿಕೆಯಿಂದ ಯಶಸ್ಸು ಸಾಧ್ಯ

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಅರ್‌.ಸದಾಶಿವ ಹೇಳಿದರು.

Vijaya Karnataka 20 Jun 2019, 5:00 am
ನರಸಿಂಹರಾಜಪುರ : ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಅರ್‌.ಸದಾಶಿವ ಹೇಳಿದರು.
Vijaya Karnataka Web CKM-19NRP1


ಪಟ್ಟಣದ ಮೌಂಟ್‌ ಕಾರ್ಮಲ್‌ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು,

ವಿದ್ಯಾರ್ಥಿ ಹಂತದಲ್ಲಿ ಕಠಿಣವಾದ ನಿರ್ಧಾರ ತೆಗೆದುಕೊಂಡರೆ ಜೀವನದಲ್ಲಿ ಯಶಸ್ಸು ಹೊಂದಬಹುದು. ಎಲ್ಲರಿಗೂ ದೇವರ ಸಾಮರ್ಥ್ಯ‌ ನೀಡಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಂಡು ಜ್ಞಾನಾರ್ಜನೆಗೆ ಪ್ರಯತ್ನಿಸಬೇಕು. ತಂದೆ-ತಾಯಿ, ಗುರುಗಳು ಕಣ್ಣಿಗೆ ಕಾಣುವ ದೇವರಾಗಿದ್ದು, ಅವರಿಗೆ ಗೌರವ ನೀಡುವ ಕೆಲಸ ಮಾಡಬೇಕು. ಜೀವನದಲ್ಲಿ ಉನ್ನತ ಗುರಿ ಇಟ್ಟು ಕೊಂಡು ಒಳ್ಳೆಯ ನಡೆ-ನುಡಿ ಸಂಸ್ಕಾರ ಬೆಳೆಸಿಕೊಂಡು, ಪೋಷಕರ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.

ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಎಚ್‌.ಎ.ಸಾಜು ಮಾತನಾಡಿ, ತಾಳ್ಮೆ ಮತ್ತು ನಂಬಿಕೆಯಿಂದ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಕಷ್ಟಗಳು ಬಂದಾಗ ಮಾತ್ರ ಮನುಷ್ಯನಲ್ಲಿ ಸೃಜನಶೀಲತೆ ಬೆಳೆಯಲು ಸಾಧ್ಯವಾಗುತ್ತದೆ. ಪಿಯುಸಿ ಹಂತದಲ್ಲಿ ಗೊಂದಲ ಮತ್ತು ಕುತೂಹಲವಿರುತ್ತದೆ. ಈ ಹಂತದಲ್ಲಿ ನೈತಿಕ ಮೌಲ್ಯಗಳು, ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ದುರಭ್ಯಾಸ ಬೆಳೆಸಿಕೊಂಡು ವಿದ್ಯಾಭ್ಯಾಸದ ಹಂತದಲ್ಲಿ ಜೀವನವನ್ನು ಬಲಿ ಕೊಡಬಾರದು. ಜೀವನದಲ್ಲಿ ಹಣ, ಅಧಿಕಾರ, ಅಂತಸ್ತು, ಜನಪ್ರಿಯತೆ ಗಳಿಸಿದರೆ ಮಾತ್ರ ಯಶಸ್ಸು ಸಾಧ್ಯವಾಗುವುದಿಲ್ಲ. ತಮ್ಮ ಸ್ವಂತಕ್ಕಾಗಿ ಬದುಕದೇ ಸಮಾಜಕ್ಕಾಗಿ ಬದುಕಿದಾಗ ಮಾತ್ರು ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಇತಿಹಾಸ ಓದಿ, ಇತಿಹಾಸ ನಿರ್ಮಿಸಬೇಕು. ಸ್ವಂತತ್ರವಾಗಿ ಬದುಕುತ್ತಾ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯ ಈ.ಸಿ.ಸೇವಿಯಾರ್‌ ಮಾತನಾಡಿದರು. ಪ್ರಾಂಶುಪಾಲೆ ಸಿಸ್ಟರ್‌ ಟ್ರಿಸಾಜಾನ್‌ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲೆ ಸಿಸ್ಟರ್‌ ಶಾಲಿನಿ,ಉಪನ್ಯಾಸಕರಾದ ಐ.ಎಂ.ರಾಜೀವ್‌, ಟಿ.ಮಂಜುನಾಥ,ಅಶ್ವಿನಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ