ಆ್ಯಪ್ನಗರ

ರಾತ್ರೋರಾತ್ರಿ ನೆಲಸಮವಾಯ್ತು ವಿವೇಕಾನಂದರ ವಿಕಾರ ಪ್ರತಿಮೆ, ಸಿ.ಟಿ.ರವಿ ಸ್ಪಷ್ಟನೆ

ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೆ ಸ್ವಾಮಿ ವಿವೇಕಾನಂದರ ವಿಕಾರ ರೂಪದ ಪ್ರತಿಮೆಯನ್ನು ರಾತ್ರೋರಾತ್ರಿ ಯಾರ ಅನುಮತಿಯೂ ಇಲ್ಲದೆ ನೆಲಸಮ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಮೂರ್ತಿಯನ್ನು ಮಾಡಲಾಗಿತ್ತು.

Vijaya Karnataka Web 18 Jun 2020, 11:15 am
ಚಿಕ್ಕಮಗಳೂರು: ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಿದ್ದ ಸ್ವಾಮಿ ವಿವೇಕಾನಂದರ ವಿಕಾರಗೊಂಡ ಪ್ರತಿಮೆಯನ್ನು ರಾತ್ರೋರಾತ್ರಿ ಯಾರ ಅನುಮತಿಯೂ ಇಲ್ಲದೆ ನೆಲಸಮ ಮಾಡಲಾಗಿದೆ.
Vijaya Karnataka Web ಚಿಕ್ಕಮಗಳೂರು
ನೆಲಸಮವಾಗುವುದಕ್ಕೂ ಮುನ್ನ ಇದ್ದ ಪ್ರತಿಮೆ


ಸಣ್ಣ ನೀರಾವರಿ ಇಲಾಖೆಗೆ ಸೇರಿದ ನಗರದ ದಂಟರಮಕ್ಕಿ ಕೆರೆಯಲ್ಲಿ ನಿರ್ಮಿಸಿರುವ ನಡುಗಡ್ಡೆಯಲ್ಲಿ 35 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ವಿರೋಧದ ನಡುವೆಯೂ ಕೆಲವರು ಸ್ಥಾಪಿಸಿದ್ದರು. ವಿರೂಪಗೊಂಡ ಪ್ರತಿಮೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, 'ವಿಜಯ ಕರ್ನಾಟಕ' ಮಂಗಳವಾರ ವರದಿ ಪ್ರಕಟಿಸಿತ್ತು.ವಿವೇಕಾನಂದರ ಪ್ರತಿಮೆಯ ವಿವಾದದ ಬಗ್ಗೆ ಬುಧವಾರ ಸುದ್ದಿಗೋಷ್ಠಿ ನಡೆಸಿದ ನಗರಸಭೆ ಮಾಜಿ ಅಧ್ಯಕ್ಷ ಎನ್‌.ಮುತ್ತಯ್ಯ, ಇದರಲ್ಲಿ ತಮ್ಮನ್ನು ಬಲಿಪಶು ಮಾಡಲಾಗಿದೆ. ಪ್ರತಿಮೆ ಸ್ಥಾಪನೆಗೂ ಸ್ಥಳೀಯ ಶಾಸಕ ಸಿ.ಟಿ. ರವಿಗೂ ಯಾವುದೇ ಸಂಬಂಧ ಇಲ್ಲ. ಅನಗತ್ಯವಾಗಿ ಅವರ ಹೆಸರನ್ನು ಎಳೆದು ತರಲಾಗುತ್ತಿದೆ ಎಂದರು.

ಅನುಮತಿ ಪಡೆಯದೆ ಪ್ರತಿಮೆ ಸ್ಥಾಪಿಸಿದ್ದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದರು. ಪ್ರತಿಮೆ ಕೆಡವಿದ್ದು ಯಾರು? ಪ್ರತಿಮೆ ಕೆಡವಲು ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗೆ, ಯಾರು ಕೆಡವಿ ದ್ದಾರೋ ಗೊತ್ತಿಲ್ಲ ಎಂದರು. ಪತ್ರಕರ್ತರು ತರಾಟೆಗೆ ತೆಗೆದುಕೊಂಡ ನಂತರ ''ತಾವೇ ಕೆಡವಿಸಿದ್ದು, ಅದೇ ಜಾಗದಲ್ಲಿ ಹೊಸ ಪ್ರತಿಮೆ ಸ್ಥಾಪಿಸುವುದಾಗಿ,'' ಎಂದು ಹೇಳಿದರು.ಹೊಸ ಪ್ರತಿಮೆ ಸ್ಥಾಪಿಸಲು ಅನುಮತಿ ಪಡೆಯಲಾಗಿದೆಯೇ? ಸಾರ್ವ ಜನಿಕ ಸ್ಥಳದಲ್ಲಿ ಯಾವುದೇ ಅನುಮತಿ ಪಡೆಯದೆ, ಯಾರು ಬೇಕಾದರೂ ಪ್ರತಿಮೆ ಸ್ಥಾಪಿಸಬಹುದೇ ಎಂಬ ಪ್ರಶ್ನೆಗಳಿಗೆ ಎನ್‌.ಮುತ್ತಯ್ಯ ಅವರ ಬಳಿ ಉತ್ತರ ಇರಲಿಲ್ಲ.

ಈ ಕುರಿತು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಇದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಬೆಳಗ್ಗೆ ಎಸ್ಪಿ ಮೆಸೇಜ್‌ ಮಾಡಿದ್ದಾರೆ. ಅವರಿಂದಲೇ ಮಾಹಿತಿ ಪಡೆಯುವುದು ಸೂಕ್ತ ಎಂದು ಹೇಳಿದರು. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಯ ಮಧ್ಯದಲ್ಲಿಜನರಿಂದ ಹಣ ಸಂಗ್ರಹಿಸಿ ಅನಧಿಕೃತವಾಗಿ ಪ್ರತಿಮೆ ಸ್ಥಾಪಿಸಿದ್ದೂ ಅಲ್ಲದೆ, ಅನುಮತಿ ಪಡೆಯದೆ ನೆಲಸಮ ಮಾಡಿದರೂ ಇದುವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ.

ಸಚಿವ ಸಿ.ಟಿ.ರವಿ ಸ್ಪಷ್ಟನೆ:
ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪಗೊಳಿಸಿ ನಿಲ್ಲಿಸಿರುವ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿಆಕ್ರೋಶ ವ್ಯಕ್ತವಾಗಿರುವ ಬಗ್ಗೆ ಸಚಿವ ಸಿ.ಟಿ.ರವಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿಸ್ಪಷ್ಟನೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರ ಪ್ರತಿಮೆ ಕಾಮಗಾರಿಯು ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಮತ್ತು ಕೆಲವೇ ದಾನಿಗಳು ನೀಡಿದ ದೇಣಿಗೆಯಿಂದ ಸ್ವರೂಪಕ್ಕೆ ಬಂದಿದೆ. ಕಾಮಗಾರಿ ಬಹಳ ಕಳಪೆಯಾಗಿದ್ದು, ಅತೃಪ್ತಿ ಸಹ ವ್ಯಕ್ತವಾಗಿದೆ. ನಂತರ ಬೆಂಗಳೂರು ಮೂಲದ ಗುತ್ತಿಗೆದಾರನೊಬ್ಬ ಪ್ರತಿಮೆ ಸರಿ ಮಾಡುತ್ತೇನೆ ಎಂದು 13 ಲಕ್ಷ ರೂ. ಮುಂಗಡ ಪಡೆದು ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸ್‌ ತನಿಖೆ ನಡೆಯುತ್ತಿದೆ. ನಂತರ ಮತ್ತೊಬ್ಬ ಗುತ್ತಿಗೆದಾರ 4 ಲಕ್ಷ ರೂ. ಪಡೆದಿದ್ದು, ಆ ವ್ಯಕ್ತಿ ಮತ್ತೊಬ್ಬರಿಗೆ ಸಬ್‌ ಕಾಂಟ್ರಾಕ್ಟ್ ನೀಡಿ, ಅಲ್ಲಿಯೂ ಮೋಸವಾಗಿದೆ. ಊರಿಗೆ ಒಳ್ಳೆಯದಾಗುವ ಕೆಲಸಕ್ಕೆ ಬೇಡ, ಏನೇ ಕೆಲಸವಾದರೂ ಸರಕಾರ ಮಾತ್ರ ಮಾಡಬೇಕು ಎಂದು ಹೇಳಲಾಗುವುದಿಲ್ಲ. ಬಸವನಹಳ್ಳಿ ಕೆರೆಯ ನಡುವಿನ ವಿವೇಕಾನಂದರ ಪ್ರತಿಮೆ ಮಾಡುವ ವಿಷಯದಲ್ಲಿಆಸಕ್ತಿ ಮತ್ತು ಜವಾಬ್ದಾರಿ ತೆಗೆದುಕೊಂಡು ಮುಂದೆ ಬಂದವರೆಲ್ಲನಮ್ಮೂರಿನವರೇ. ಇದರಲ್ಲಿಸರಕಾರದ ಒಂದು ರೂಪಾಯಿಯೂ ಖರ್ಚಾಗಿಲ್ಲ. ಈಗ ನಮ್ಮದೇ ಸರಕಾರ ಇದೆ. ಕೆರೆಯ ಮಧ್ಯೆ ಕುಳಿತಿರುವ ಭಂಗಿಯಲ್ಲಿರುವ ವಿವೇಕಾನಂದರ ಪ್ರತಿಮೆ, ಕೆರೆ ಸುತ್ತಲೂ ವಾಕಿಂಗ್‌ ಟ್ರ್ಯಾಕ್‌ ಮಾಡುವ ಯೋಜನೆಗೆ ಡಿಪಿಆರ್‌ ಸಿದ್ಧವಾಗುತ್ತಿದೆ. ಯೋಜನೆಗಾಗಿ ಖಾಸಗಿ ಸಂಸ್ಥೆಗಳು ಸರಕಾರದೊಂದಿಗೆ ಸಹಭಾಗಿತ್ವಕ್ಕೆ ಕೈಜೋಸುತ್ತಿದ್ದು, ಆದಷ್ಟು ಬೇಗ ಈ ಕೆಲಸ ಮಾಡಿ ಮುಗಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ