ಆ್ಯಪ್ನಗರ

ಕಲೆ, ಸಂಸ್ಕೃತಿ ಸ್ವಾಸ್ಥ್ಯ ಸಮಾಜದ ಕುರುಹು

ಮಲೆನಾಡು ಸಾಂಸ್ಕೃತಿಕವಾಗಿ ಅಪಾರವಾದ ಜಾನಪದ ಸಂಪತ್ತನ್ನು ಹೊಂದಿದೆ. ರಂಗಭೂಮಿ ಶತಮಾನಗಳ ಇತಿಹಾಸದ ಹಿರಿಮೆ ಪಡೆದಿದೆ ಎಂದು ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ಹೇಳಿದರು.

Vijaya Karnataka 11 Jan 2019, 5:00 am
ಶೃಂಗೇರಿ: ಮಲೆನಾಡು ಸಾಂಸ್ಕೃತಿಕವಾಗಿ ಅಪಾರವಾದ ಜಾನಪದ ಸಂಪತ್ತನ್ನು ಹೊಂದಿದೆ. ರಂಗಭೂಮಿ ಶತಮಾನಗಳ ಇತಿಹಾಸದ ಹಿರಿಮೆ ಪಡೆದಿದೆ ಎಂದು ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ಹೇಳಿದರು.
Vijaya Karnataka Web CKM-10SRI1


ಪಟ್ಟಣದ ಗೌರಿಶಂಕರ್‌ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್‌, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಮಲೆನಾಡು ಉತ್ಸವವನ್ನು ಭತ್ತ ಕೇರುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಲೆ ಮತ್ತು ಸಂಸ್ಕೃತಿಯು ಸ್ವಾಸ್ಥ್ಯ ಸಮಾಜದ ಕುರುಹುಗಳಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.

ಸಮಾಜ ಸೇವಕಿ ಶ್ಯಾಮಲಾ ರಂಗನಾಥ್‌ ಬಗ್ಗೆ ಮಾತನಾಡಿದ ಉತ್ಸವ ಸಂಚಾಲಕ ಎಸ್‌.ಎನ್‌ ವಿಶ್ವನಾಥ್‌, ಕೊಟ್ಟು ಶ್ಯಾಮಲ ಅವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ ಇಂದಿನ ಸ್ವಾರ್ಥಪರ ಪ್ರಪಂಚದಲ್ಲಿ ಒಂದು ವಿಶೇಷವಾದ ಸ್ಥಾನವನ್ನು ಪಡೆದಿದೆ. ಮಲೆನಾಡಿನ ಗೃಹಿಣಿಯರನ್ನು ಅವರು ಸೃಜನಶೀಲತೆಯ ಕಡೆಗೆ ಸೆಳೆದೊಯ್ಯುತ್ತಿದ್ದ ಪರಿ ಅವರ ವ್ಯಕ್ತಿತ್ವದ ಕನ್ನಡಿಯಾಗಿದೆ. ಮಹಿಳೆಯರಿಗೆ ಸಮಾಜಮುಖಿ ಕಾರ್ಯಕ್ಕೆ ಪ್ರೇರಣೆ ಒದಗಿಸುತ್ತಿದ್ದ ಅಪರೂಪದ ವ್ಯಕ್ತಿ ಶ್ಯಾಮಲಾ. ಇಂತಹ ಕ್ರಿಯಾಶೀಲ ಮಹಿಳೆಯನ್ನು ಸ್ಮರಿಸುವ ಮೂಲಕ ಮಲೆನಾಡು ಉತ್ಸವ ಮಹಿಳೆಯರಿಗೂ ಪ್ರಾಮುಖ್ಯ ನೀಡಿರುವುದು ಸ್ವಾಗತಾರ್ಹ ಎಂದರು. ಶ್ಯಾಮಲಾ ರಂಗನಾಥ್‌ ಸ್ಮರಣಾರ್ಥ ನೀಡಲಾದ ವಿಶೇಷ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ಭಾರತೀಯ ಅನಿವಾಸಿ ಸಮಿತಿಯ ಮಾಜಿ ಉಪಾಧ್ಯಕ್ಷೆ ಆರತಿಕೃಷ್ಣರವರ ಪರವಾಗಿ ಸೌಮ್ಯ ಸ್ವೀಕರಿಸಿದರು.

ಅಧ್ಯಕ್ಷ ತೆ ವಹಿಸಿ ಮಾತನಾಡಿದ ಕಲ್ಕುಳಿ ವೆಂಕಟೇಶ್‌, ಮಲೆನಾಡಿನ ಕಲೆ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಮಲೆನಾಡು ಉತ್ಸವ ವರ್ಷದಿಂದ ವರ್ಷಕ್ಕೆ ವಿನೂತನ ಚಿಂತೆಯನ್ನು ಅಳವಡಿಸಿಕೊಳ್ಳುತ್ತಾ ಮೈಲಿಗಲ್ಲು ನಿರ್ಮಿಸುತ್ತಿದೆ. ಈ ಉತ್ಸವವನ್ನು ಪ್ರೋತ್ಸಾಹಿಸುವುದು ಕಲಾಭಿಮಾನಿಗಳ ಕರ್ತವ್ಯ ಎಂದರು.

ಉದ್ಯಮಿ ವಿ.ಆರ್‌ ರಾಜೇಶ್‌ ಮತ್ತು ಶೈಕ್ಷ ಣಿಕ ಕ್ಷೇತ್ರದ ಎನ್‌ ಲೋಕೇಶ್‌ರವರಿಗೆ ಮಲೆನಾಡು ಉತ್ಸವದ ಸಮರ್ಪಣಾ ಗೌರವವನ್ನು ಪ್ರದಾನ ಮಾಡಲಾಯಿತು.

ಉತ್ಸವ ಅಧ್ಯಕ್ಷ ರಂಗ ಕಲಾವಿದ ಬಿ.ಎಲ್‌ ರವಿಕುಮಾರ್‌, ಆಯೋಜಕ ರಮೇಶ್‌ ಬೇಗಾರ್‌ ಉಪಸ್ಥಿತರಿದ್ದರು. ಡಾ. ಬಿ.ಎನ್‌.ವಿ ಸುಬ್ರಮಣ್ಯಂ ಕುರಿತ ಸಾಕ್ಷ ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ- ಕೊಪ್ಪದ ಭಾವಯಾನ ತಂಡದಿಂದ ನಡೆದ ಭಾವತೀರಯಾನ ಮಧುರ ಅನುಭವವನ್ನು ಕೇಳುಗರಿಗೆ ನೀಡುವಲ್ಲಿ ಯಶಸ್ಸು ಪಡೆಯಿತು. ನಾಗರತ್ನ ನಟರಾಜ್‌ ಮತ್ತು ಇಮ್ತಿಯಾಜ್‌ ಸುಲ್ತಾನ್‌ ಕನ್ನಡದ ಗೀತೆಗೆ ಧ್ವನಿಯಾದರು. ಸುಗಮ ಸಂಗೀತದ ರೂಢಿಗತ ಜಾಡನ್ನು ಬಿಟ್ಟು ಪ್ರಯೋಗಶೀಲವಾಗಿ ಈ ಕಾರ್ಯಕ್ರಮ ಮೂಡಿ ಬಂದಿತು. ಪಿ. ಕಾಳಿಂಗರಾವ್‌ ಅವರ ಜನಪ್ರಿಯ ಗೀತೆ ಅಳುವ ಕಡಲೊಳು ಹಾಡನ್ನು ನಾಗರತ್ನ ಪ್ರಸ್ತುತಪಡಿಸಿ ಪ್ರೇಕ್ಷ ಕರ ಮನಗೆದ್ದರು. ನಟರಾಜ ಗೋಗಟೆ ವಾದ್ಯ ಸಂಯೋಜನೆಯನ್ನು ಈ ಕಾರ್ಯಕ್ರಮ ಹೊಂದಿತ್ತು.

ನಾಟಕ- ಬೆಂಗಳೂರಿನ ಕ್ರಿಯೇಟೀವ್‌ ಥಿಯೇಟರ್‌ ತಂಡದವರು ಹೆಸರಾಂತ ಮಲೆಯಾಳಿ ಬರಹಗಾರ ವೈಕಂ ಬಷೀರ್‌ ಅವರ ಸಣ್ಣ ಕಥೆ ಆಧರಿಸಿದ ಮೂಗು ಮಸಾಲ ಎಂಬ ವಿಡಂಬನಾತ್ಮಕ ನಾಟಕವನ್ನು ರಂಜನೀಯವಾಗಿ ಪ್ರದರ್ಶಿಸಿದರು. ವ್ಯಕ್ತಿಯೊಬ್ಬನಿಗೆ ಉದ್ದದ ಮೂಗೊಂದು ಬೆಳೆಯುವುದು ಮತ್ತು ಈ ಅಚ್ಚರಿಯನ್ನು ಸಮಾಜ ಹೇಗೆ ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತದೆ ಎಂಬ ಸಂಗತಿಯ ಸುತ್ತ ನಾಟಕ ಸಾಗುತ್ತದೆ. ಈ ಪ್ರಕರಣದ ಬೆಳವಣಿಗೆ ಇಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯುವ ವಿಡಂಬನೆಯ ಮಹಾಪೂರವೇ ನಾಟಕದ ವಸ್ತುವಾಗಿದೆ. ನಾಟಕ ಆಧುನಿಕ ಸಮಾಜದ ದೃಷ್ಟಿಕೋನವನ್ನು ವ್ಯಂಗ್ಯಭರಿತ ಮಾತಿನ ಮೂಲಕ ಸಾಕ್ಷೀಕರಿಸುತ್ತದೆ. ಹೆಸರಾಂತ ಕಿರುತರೆ ನಟಿ ಲಕ್ಷ್ಮೀ ಚಂದ್ರಶೇಖರ್‌ ಚಟಿವಟಿಕೆ ಭರಿತ ಅಭಿನಯದ ಮೂಲಕ ಜನರನ್ನು ಮೋಡಿ ಮಾಡಿದರು. ಕೇವಲ 5 ಜನ ಕಲಾವಿದರು 30ಕ್ಕೂ ಹೆಚ್ಚು ಪಾತ್ರವನ್ನು ರಂಗದಲ್ಲಿ ತಂದು ಅಚ್ಚರಿ ಮೂಡಿಸಿದರು. ಜೋಸೆಫ್‌ ಅವರ ನಿರ್ದೇಶನವನ್ನು ನಾಟಕ ಹೊಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ