ಆ್ಯಪ್ನಗರ

ಕಂದಕಕ್ಕೆ ಉರುಳಿದ ಕಾರು: ನಾಲ್ವರ ಸಾವು

ವಿಕ ಸುದ್ದಿಲೋಕ ಕಳಸ (ಚಿಕ್ಕಮಗಳೂರು) ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸುತ್ತಿದ್ದ ಐವರಿದ್ದ ಕಾರು ಕದಂಕಕ್ಕೆ ಉರುಳಿಬಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ಹೋಬಳಿ ...

Vijaya Karnataka 19 Feb 2019, 5:00 am
ಕಳಸ (ಚಿಕ್ಕಮಗಳೂರು) : ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸುತ್ತಿದ್ದ ಐವರಿದ್ದ ಕಾರು ಕದಂಕಕ್ಕೆ ಉರುಳಿಬಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ಹೋಬಳಿ ವ್ಯಾಪ್ತಿಯ ಹಿರೇಬೈಲು ಮಲ್ಲೇಶನಗುಡ್ಡದ ಹಾಳೆಮರದ ತಿರುವಿನಲ್ಲಿ ಸೋಮವಾರ ನಡೆದಿದೆ.
Vijaya Karnataka Web CKM-18KLS2


ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ಮೂಲದ ದಂಪತಿ ವಿಶ್ವನಾಥ್‌(55) ಮತ್ತು ಪುಷ್ಪಾವತಿ(48), ಉಪ್ಪಿನಂಗಡಿಯ ದಂಪತಿ ರಾಜು ರೈ(58), ಮಮತಾ(51) ಎಂದು ಗುರುತಿಸಲಾಗಿದೆ. ಸಂಜೀವ್‌ ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಕಳಸ ನಿವಾಸಿ, ಉದ್ಯಮಿ ರವಿ ರೈ ಅವರ ಸಂಬಂಧಿಕರಾಗಿದ್ದರು.

ಕಳಸ ಸಮೀಪದ ಬಾಳೆಹೊಳೆ ಗ್ರಾಮದಲ್ಲಿ ಯಕ್ಷ ಗಾನ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು. ಸಂಬಂಧಿಕರು ಆಯೋಜಿಸಿದ್ದ ಕಾರ್ಯಕ್ರಮಕ್ಕೆಂದು ಬಂಟ್ವಾಳದಿಂದ ಉಪ್ಪಿನಂಗಡಿ, ಚಾರ್ಮಾಡಿ ಘಾಟ್‌ ಹೆದ್ದಾರಿ ಮೂಲಕ ತಮ್ಮ ಹೊಸ ವ್ಯಾಗನಾರ್‌ ಕಾರಿನಲ್ಲಿ ಆಗಮಿಸಿದ್ದರು. ಬಾಳೆಹೊಳೆ ಸಂಪರ್ಕಿಸುವ ಮಲ್ಲೇಶನಗುಡ್ಡದ ಒಳ ರಸ್ತೆಯಲ್ಲಿ ಸಾಗಿದ ಕಾರು, ಹಾಲುಮರ ಎಂಬಲ್ಲಿರುವ ಕಾಫಿ ತೋಟದ ತಿರುವಿನಲ್ಲಿ ಮಧ್ಯಾಹ್ನ 1.15ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು 50 ಮೀಟರ್‌ ಆಳದ ಕಂದಕಕ್ಕೆ ಉರುಳಿದೆ.

ಸುದ್ದಿ ತಿಳಿಯುತ್ತಿದ್ದಂತೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು, ನಜ್ಜುಗುಜ್ಜಾದ ವಾಹನದಿಂದ ಗಂಟೆಗಳ ಕಾಲ ಹರಸಾಹಸಪಟ್ಟು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಮೃತ ದೇಹಗಳನ್ನು ಕಳಸ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಕೊಡಲಾಯಿತು. ಘಟನೆ ಸಂಬಂಧ ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡೆಗೋಡೆ ನಿರ್ಮಿಸಲು ಆಗ್ರಹ : ಹಿರೇಬೈಲು ರಸ್ತೆಯ ಮುಖಾಂತರ ಬಾಳೆಹೊಳೆ ಬಾಳೆಹೊನ್ನೂರಿಗೆ ತಲುಪಲು ಇದು ಸಮೀಪದ ರಸ್ತೆಯಾಗಿದೆ. ಎರಡು ವರ್ಷಗಳ ಹಿಂದೆ ರಸ್ತೆಗೆ ಡಾಂಬರೀಕರಣ ಮಾಡಿದ ನಂತರ ಹೆಚ್ಚಿನವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ, ಈ ರಸ್ತೆ ಸಾಕಷ್ಟು ತಿರುವುಗಳಿಂದ ಕೂಡಿದ್ದು, ಯಾವುದೇ ಸೂಚನಾಫಲಕ ಅಳವಡಿಸಿಲ್ಲ. ಅವಘಡ ಆದ ಸ್ಥಳ ಅತ್ಯಂತ ತಿರುವಿನಿಂದ ಕೂಡಿದ್ದು, ಹೊಸದಾಗಿ ಬರುವವರಿಗೆ ಇಲ್ಲಿ ತಿರುವು ಗಮನಕ್ಕೆ ಬರುವುದಿಲ್ಲ. ಯಾವುದೇ ತಡೆಗೋಡೆ ಸೂಚನಾ ಫಲಕ ಇಲ್ಲದೆ ಇರುವುದರಿಂದ ಇಂತಹ ದುರ್ಘಟನೆ ಸಂಭವಿಸಿದೆ. ಸಂಬಂಧಿಸಿದ ಇಲಾಖೆಯವರು ಇಲ್ಲಿ ಕೂಡಲೆ ತಡೆಗೋಡೆ ನಿರ್ಮಿಸಿ, ಸೂಚನಾ ಫಲಕ ಅಳವಡಿಸಬೇಕು ಎಂದು ಗ್ರಾಮಸ್ಥರಾದ ಕಿರಣ್‌ ಶೆಟ್ಟಿ, ಅರುಣ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ