ಆ್ಯಪ್ನಗರ

ಕಾಡಾನೆ ತುಳಿತಕ್ಕೆ ಕಾರ್ಮಿಕ ಸಾವು

ತಾಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ಬಳಿ ಶನಿವಾರ ಮಧ್ಯಾಹ್ನ ಕಾಡಾನೆ ತುಳಿತದಿಂದ ಕೂಲಿ ಕಾರ್ಮಿಕ ಪ್ರೇಮನಾಥರಾಜು (50) ಮೃತಪಟ್ಟಿದ್ದಾರೆ.

Vijaya Karnataka 17 Mar 2019, 5:00 am
ಚಿಕ್ಕಮಗಳೂರು : ತಾಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ಬಳಿ ಶನಿವಾರ ಮಧ್ಯಾಹ್ನ ಕಾಡಾನೆ ತುಳಿತದಿಂದ ಕೂಲಿ ಕಾರ್ಮಿಕ ಪ್ರೇಮನಾಥರಾಜು (50) ಮೃತಪಟ್ಟಿದ್ದಾರೆ.
Vijaya Karnataka Web CKM-16aragap10


ಜನವರಿ 22ರಂದು ಕೂಡ ಮಲ್ಲೇನಹಳ್ಳಿ ಸಮೀಪದ ಹೊಸಪೇಟೆ ಅರವಿಂದನಗರದಲ್ಲಿ ಶುಂಠಿಗದ್ದೆ ಕಾಯುತ್ತಿದ್ದ ಕಾರ್ಮಿಕ ಕುಮಾರನಾಯ್ಕ್‌ ಅವರನ್ನು ಕಾಡಾನೆ ದಾಳಿ ಮಾಡಿ ಕೊಂದು ಹಾಕಿತ್ತು. ಈ ಘಟನೆ ಜನರ ಮನಸ್ಸಿಂದ ಮಾಸುವ ಮುನ್ನವೇ ಕಾಡಾನೆ ದಾಳಿಗೆ ಮತ್ತೊಬ್ಬ ಕಾರ್ಮಿಕ ಬಲಿಯಾಗಿದ್ದು, ಈ ಭಾಗದ ಜನ ಭೀತಿಗೊಂಡಿದ್ದಾರೆ.

ಮಲ್ಲೇನಹಳ್ಳಿ ಸಮೀಪದ ಬಿಂಡಿಗದ ತೇಜಪಾಲ್‌ ಎಂಬುವರ ಕಾಫಿ ತೋಟದಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು, ಕೆಲಸ ಮುಗಿಸಿ ಸೌದೆ ತರಲು ಹೋಗಿದ್ದ ಸಂದರ್ಭ ಪ್ರೇಮನಾಥರಾಜು ಅವರ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿ ತುಳಿದು ಹಾಕಿದೆ. ಮೂಲತಃ ಮೂಡಿಗೆರೆ ತಾಲೂಕು ಭಾರತಿಬೈಲ್‌ನವರಾದ ಪ್ರೇಮನಾಥರಾಜು ಹಲವು ವರ್ಷಗಳಿಂದ ಬಿಂಡಿಗದ ಕೂಲಿಲೈನ್‌ನಲ್ಲಿ ಕುಟುಂಬ ಸಮೇತ ವಾಸವಿದ್ದರು. ಮನೆಗೆ ಸೌದೆ ತರಲು ಹೋದಾಗ ಮೈಮೇಲೆ ಎರಗಿದ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾಲಿನಿಂದ ತುಳಿದು, ಸೊಂಡಿಲಿನಿಂದ ಬಡಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜನವರಿಯಲ್ಲಿ ಕಾಡಾನೆ ತುಳಿತಕ್ಕೆ ಕಾರ್ಮಿಕ ಬಲಿಯಾದ ಸಂದರ್ಭವೇ ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಎರಡು ವರ್ಷದ ಹಿಂದೆ ಮಲ್ಲೇನಹಳ್ಳಿ ಸಮೀಪದಲ್ಲೇ ಇರುವ ಭಕ್ತರಹಳ್ಳಿಯಲ್ಲಿ ಗ್ರಾಮಸ್ಥರೊಬ್ಬರನ್ನು ಕಾಡಾನೆ ಕೊಂದು ಹಾಕಿತ್ತು. ಈ ಭಾಗದಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಅವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಮೂಲಕ ಜನರಿಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ