ಆ್ಯಪ್ನಗರ

ದೇವರಗುಡ್ಡದಲ್ಲಿ ಘೋರ ಶಬ್ದ, ಗ್ರಾಮಕ್ಕೆ ಮರಳಲು ಜನರ ಹಿಂದೇಟು

ಹೋಬಳಿ ವ್ಯಾಪ್ತಿಯ ದೇವರಗುಡ್ಡದಲ್ಲಿ ಜೋರಾದ ಗುಡುಗಿನಂಥ ಶಬ್ದಗಳು ಪದೇಪದೆ ಕೇಳುತ್ತಿದ್ದು, ಮತ್ತೆ ಯಾವ ಅಹಾನುತ ಕಾದಿದೆಯೋ ಎಂದು ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

Vijaya Karnataka 21 Aug 2019, 5:00 am
ಕಳಸ (ಚಿಕ್ಕಮಗಳೂರು) : ಹೋಬಳಿ ವ್ಯಾಪ್ತಿಯ ದೇವರಗುಡ್ಡದಲ್ಲಿ ಜೋರಾದ ಗುಡುಗಿನಂಥ ಶಬ್ದಗಳು ಪದೇಪದೆ ಕೇಳುತ್ತಿದ್ದು, ಮತ್ತೆ ಯಾವ ಅಹಾನುತ ಕಾದಿದೆಯೋ ಎಂದು ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
Vijaya Karnataka Web CKM-20KLS2


ಗ್ರಾಮ ವ್ಯಾಪ್ತಿಯಲ್ಲಿ ಆಗಸ್ಟ್‌ 9ರಂದು ಸಂಭವಿಸಿದ ಭೂಕುಸಿತದಿಂದ 20ಕ್ಕೂ ಹೆಚ್ಚು ಕುಟುಂಬಗಳು ಅತಂತ್ರರಾಗಿದ್ದಾರೆ. ಗ್ರಾಮದ ಸರ್ವೆ ನಂಬರ್‌ 176ರಲ್ಲಿ ಕೃಷಿ ಮಾಡುತ್ತಿರುವ ರಾಯಪ್ಪಗೌಡ ಮತ್ತು ಕೃಷ್ಣೇಗೌಡ ಅವರಿಗೆ ಸೇರಿದ 5 ಎಕರೆಗೂ ಹೆಚ್ಚು ಕಾಫಿ ತೋಟ ನಾಶವಾಗಿದೆ. ಕಾಫಿ, ಅಡಕೆ, ಮೆಣಸು ಬೆಳೆ ನೆಲಸಮವಾದ ಕಾರಣ ಇಲ್ಲಿನ ಕುಟುಂಬಗಳು ಭವಿಷ್ಯ ಜೀವನದ ಬಗ್ಗೆ ಆತಂಕಗೊಂಡಿದ್ದಾರೆ. ಪಟ್ಟಣದ ಕಾಳಜಿ ಕೇಂದ್ರದಲ್ಲಿ ಉಳಿದುಕೊಂಡಿರುವ ಗ್ರಾಮಸ್ಥರು ಮತ್ತೆ ದೇವರಗುಡ್ಡಕ್ಕೆ ಮರಳಲು ಹಿಂಜೆರಿಯುವಂತಾಗಿದೆ.

ಭಾರಿ ಸದ್ದಿನೊಂದಿಗೆ ಉಂಟಾದ ಭೂಕುಸಿತವು ಗುಡ್ಡದ ಮೇಲಿಂದ ನೀರು, ಮಣ್ಣು ಬಂಡೆ, ಮರ ಗಿಡಗಳನ್ನು ಅತಿವೇಗದಲ್ಲಿ ಕೆಳಗೆ ತಂದಿತು. ಇಲ್ಲಿ ಭೂಕುಸಿತವಾಗುವ ಸಂದರ್ಭ ಬೃಹತ್‌ ಗಾತ್ರದ ನೀರಿನ ಬುಗ್ಗೆಗಳು ಮೇಲೆದ್ದಿದ್ದು, ತೀವ್ರ ಹಾನಿಗೆ ಕಾರಣವಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಳೆ ಪ್ರವಾಹಕ್ಕೆ ರಾಯಪ್ಪಗೌಡ ಅವರ ಗೋದಾಮು ಕೂಡ ಕೊಚ್ಚಿಕೊಂಡು ಹೋಗಿದೆ. ಚನ್ನಪ್ಪಗೌಡ ಮತ್ತು ಮಂಜುನಾಥ್‌ ಆಚಾರ್‌ ಅವರ ತೋಟಗಳಲ್ಲಿ ಬಂಡೆ ಜಾರಿ ಬಿದ್ದು ತೋಟಕ್ಕೆ ಅಪಾರ ಹಾನಿಯಾಗಿದೆ. ಈ ಪ್ರದೇಶದಲ್ಲಿ ಇನ್ನೂ 20 ಕಡೆಗಳಲ್ಲಿ ಭೂ ಕುಸಿತ ಸಂಭವಿಸಿದೆ. ದೇವರಗುಡ್ಡದ 20ಕ್ಕೂ ಹೆಚ್ಚು ಕುಟುಂಬಗಳು ಊರು ಬಿಟ್ಟು ಈಗಲೂ ಕಳಸ ಪಟ್ಟಣದಲ್ಲಿ ಮನೆಯೊಂದರಲ್ಲಿ ಆಸರೆ ಪಡೆದಿದ್ದಾರೆ. ಅಧಿಕಾರಿಗಳ ತಂಡ ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಬೃಹತ್‌ ಸದ್ದಿಗೆ ಕಾರಣ ಪತ್ತೆಹಚ್ಚಬೇಕು. ಇಲ್ಲಿಯ ನಿವಾಸಿಗಳಿಗೆ ವಾಸಿಸಲು ಬೇರೆ ಸ್ಥಳವಕಾಶ ಮಾಡಿಕೊಡಬೇಕು ಎನ್ನುವ ಒತ್ತಾಯಗಳು ಕೇಳಿಬಂದಿವೆ.

ಗ್ರಾಮ ಸ್ಥಳಾಂತರ ಅಗತ್ಯ

ಪುನರ್ವಸತಿ ಕೇಂದ್ರದಲ್ಲಿರುವ ಜನರು ಗ್ರಾಮಕ್ಕೆ ಹೋಗಲು ಭಯಪಡುತ್ತಿದ್ದಾರೆ. ಇಷ್ಟಾದರೂ ಇದರ ಬಗ್ಗೆ ಉನ್ನತಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುವ ಗೋಜಿಗೆ ಹೋಗಿಲ್ಲ. ದೇವರಗುಡ್ಡ ಗ್ರಾಮಕ್ಕೆ ಹೊಂದಿಕೊಂಡ ಬಿಳಗೋಡು ಗ್ರಾಮವೂ ಅಪಾಯದಲ್ಲಿದ್ದು ಇಲ್ಲಿನವರನ್ನೂ ಸ್ಥಳಾಂತರ ಮಾಡುವುದು ಸೂಕ್ತ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ್‌.


ದೇವರಗುಡ್ಡದಲ್ಲಿ ಸುಮಾರು 35 ಕುಟುಂಬಗಳು ಕೂಲಿ ಮಾಡಿ ಜೀವನ ಸಾಗಿಸುತ್ತಿವೆ. ಮಳೆಯಿಂದ ಮನೆ, ಜಮೀನುಗಳನ್ನು ಕಳೆದುಕೊಂಡಿದ್ದೇವೆ. ಈಗ ನಮಗೆ ಎಲ್ಲಿಯೂ ಕೂಲಿ ಕೆಲಸ ಸಿಗುತ್ತಿಲ್ಲ. ಕೈಯಲ್ಲಿ ಹಣವಿಲ್ಲ. ದಿನ ಬಳಕೆಯ ಯಾವುದೇ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮಗೆ ಒಂದು ತಿಂಗಳವರೆಗೆ ದಿನನಿತ್ಯದ ಸಾಮಾಗ್ರಿಗಳನ್ನು ಕೊಟ್ಟು ಅನುಕೂಲ ಮಾಡಿಕೊಡಬೇಕು.

- ರಾಘವೇಂದ್ರ, ದೇವರಗುಡ್ಡ ನಿವಾಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ