ಆ್ಯಪ್ನಗರ

ಲೆಕ್ಕಕ್ಕಿಲ್ಲ ಸಚಿವರ ಆದೇಶ ?

ಸಚಿವರು ಪ್ರಗತಿ ಪರಿಶೀಲನೆಗೆ ಭೇಟಿ ನೀಡಿದಾಗ ಭಯ ಬಿದ್ದವರಂತೆ ಹಿಂದೋಡುವ ವಿವಿಧ ಇಲಾಖೆ ಅಧಿಕಾರಿಗಳು, ಸಚಿವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ, ಬಳಿಕ ಸಚಿವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ನಿದರ್ಶನ ಇಲ್ಲಿದೆ.

Vijaya Karnataka 15 Jul 2019, 5:00 am
ಎ.ಆರ್‌.ಉದಯಶಂಕರ್‌
Vijaya Karnataka Web CKM-28MDG-P2

ಮೂಡಿಗೆರೆ :
ಸಚಿವರು ಪ್ರಗತಿ ಪರಿಶೀಲನೆಗೆ ಭೇಟಿ ನೀಡಿದಾಗ ಭಯ ಬಿದ್ದವರಂತೆ ಹಿಂದೋಡುವ ವಿವಿಧ ಇಲಾಖೆ ಅಧಿಕಾರಿಗಳು, ಸಚಿವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ, ಬಳಿಕ ಸಚಿವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ನಿದರ್ಶನ ಇಲ್ಲಿದೆ.

ಕಳೆದ ತಿಂಗಳು ಮೇ.2ರಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಮೂಡಿಗೆರೆಗೆ ಭೇಟಿ ನೀಡಿದ್ದರು. ಆ ಸಂದರ್ಭ ವಿವಿಧ ಕಾಮಗಾರಿಗಳ ನಡೆಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶವನ್ನೂ ನೀಡಿದ್ದರು. ಆದರೂ ಇದೂವರೆಗೂ ಅಧಿಕಾರಿಗಳು ಮಾತ್ರ ಸಚಿವರ ಆದೇಶಕ್ಕೆ ಕವಡೆ ಕಾಸಿಗೂ ಕಿಮ್ಮತ್ತು ನೀಡದೇ ಕಾಲ ಹರಣ ಮಾಡುತ್ತಿದ್ದಾರೆ. ಸಚಿವರ ಆದೇಶವನ್ನೇ ಪಾಲನೆ ಮಾಡದ ಅಧಿಕಾರಿಗಳು, ಸಾರ್ವಜನಿಕರ ಮಾತು ಕೇಳುತ್ತಾರೆಯೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಕಳೆದ ತಿಂಗಳು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ಶೃಂಗೇರಿ ಮತ್ತು ಹೊರನಾಡು ದೇವಸ್ಥಾನಕ್ಕೆ ತೆರಳಿ ವಾಪಾಸು ಬೆಂಗಳೂರಿಗೆ ತೆರಳುವಾಗ ಸಂಜೆ ಪಟ್ಟಣದ ಬಸ್‌ ನಿಲ್ದಾಣ ಹಾಗೂ ಸಾರಿಗೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರು, ಇಲ್ಲಿನ ಕುಂದು ಕೊರತೆಗಳನ್ನು ಸಚಿವರ ಗಮನಕ್ಕೆ ತಂದರು. ಅಲ್ಲದೇ ಬಸ್‌ ನಿಲ್ದಾಣದ ಆವರಣದಲ್ಲಿರುವ ಬೃಹತ್‌ ಗಾತ್ರದ ಮರ ಮಳೆಗಾಲದಲ್ಲಿ ವಿದ್ಯುತ್‌ ತಂತಿ ಹಾಗೂ ಕಂಬದ ಮೇಲೆ ಬೀಳುವ ಸಾಧ್ಯತೆ ಇರುವುದರಿಂದ ಅಪಾಯ ಸಂಭವಿಸಬಹುದು. ಮರವನ್ನು ಕೂಡಲೆ ತೆರವುಗೊಳಿಸಬೇಕು. ಬಸ್‌ ನಿಲ್ದಾಣದೊಳಗಿರುವ ಶೌಚಾಲಯದ ತ್ಯಾಜ್ಯ ಹೊಯ್ಸಳ ಕ್ರೀಡಾಂಗಣಕ್ಕೆ ಹರಿಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶ ಮಲೀನಗೊಳ್ಳುತ್ತಿದೆ. ಅದನ್ನು ಸರಿಪಡಿಸುವ ಕುರಿತು ಸಾರ್ವಜನಿಕರಿಂದಲೂ ನಿಲ್ದಾಣ ಹಾಗೂ ಸಾರಿಗೆ ಘಟಕದ ಕುಂದು ಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಕೂಡಲೇ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು.

ಮೂಡಿಗೆರೆ ಸಾರಿಗೆ ಘಟಕದ ಆವರಣದಲ್ಲಿ ಈಗಾಗಲೇ ಸಿಬ್ಬಂದಿಗಳಿಗೆ 1.5 ಕೋಟಿ ವೆಚ್ಚದಲ್ಲಿ 12 ವಸತಿ ಗೃಹ ಒಂದೇ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ಇನ್ನೂ ಇಂತಹ 3 ಕಟ್ಟಡಗಳ ನಿರ್ಮಾಣಕ್ಕೆ ರೂಪುರೇಷೆ ತಯಾರಿಸಿ ವರದಿ ನೀಡಬೇಕು. ಕಳಸ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಾರಣ ಕಳಸ ಹಾಗೂ ಹೊರನಾಡಿನಲ್ಲಿ 2 ಹೊಸ ಬಸ್‌ ನಿಲ್ದಾಣ ಹಾಗೂ ಡಿಪೋ ತೆರೆಯಲು ಜಾಗ ಗುರುತಿಸಬೇಕು. ಈಗಿರುವ ಮೂಡಿಗೆರೆ ಬಸ್‌ ನಿಲ್ದಾಣ ಜಾಗದ ಕೊರತೆಯಿಂದ ವಾಣಿಜ್ಯ ಮಳಿಗೆ ತೆರೆದು, ಹಳೆಯ ಕಾರಗೃಹ ಜಾಗದಲ್ಲಿ ಹೊಸ ಬಸ್‌ ನಿಲ್ದಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕೆಂದು ಆದೇಶ ನೀಡಿದ್ದರು. ಇದಕ್ಕೆ ಸಾಕಷ್ಟು ಅನುದಾನ ಬಿಡುಗಡೆಯ ಭರವಸೆಯನ್ನು ಅಧಿಕಾರಿಗಳಿಗೆ ಖುದ್ದು ಸಾರಿಗೆ ಸಚಿವರೇ ತಿಳಿಸಿದ್ದರೂ ಸಚಿವರ ಯಾವುದೇ ಆದೇಶಗಳು ಇದೂವರೆಗೂ ಪಾಲನೆಯಾಗಿಲ್ಲ. ಈಗಾಗಲೇ ಸಚಿವರು ಮೂಡಿಗೆರೆಗೆ ಬಂದು ಎರಡು ತಿಂಗಳು ಕಳೆದಿದೆ. ಆದರೆ ಅಧಿಕಾರಿಗಳು ಮಾತ್ರ ತಮ್ಮದೇ ಇಲಾಖೆ ಸಚಿವರ ಮಾತಿಗೆ ಕಿಮ್ಮತ್ತು ನೀಡದೇ ಆದೇಶವನ್ನು ಪಾಲಿಸಿಲ್ಲ. ರಾಜ್ಯ ಸರಕಾರದಲ್ಲಿ ಕ್ಯಾಬಿನೆಟ್‌ ಸಚಿವರು ನೀಡಿದ ಮೌಖಿಕ ಆದೇಶಗಳಿಗೆ ಅವರದೇ ಇಲಾಖೆಯಲ್ಲಿ ಬೆಲೆಯಿಲ್ಲವೆಂದಾದರೆ ಸಚಿವರ ಭೇಟಿ, ಕುಂದು ಕೊರತೆಗಳ ವೀಕ್ಷ ಣೆ ಪರಿಹಾರವೆಂಬುದಕ್ಕೆ ಬೆಲೆ ಸಿಗುವುದೇ ಎಂದು ಸಾರ್ವಜನಿಕರು ಪ್ರಶ್ನೆಯಾಗಿದೆ.

----------

ಕಳೆದ ತಿಂಗಳು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ಶೃಂಗೇರಿ ಮತ್ತು ಹೊರನಾಡು ದೇವಸ್ಥಾನಕ್ಕೆ ತೆರಳಿ ವಾಪಾಸು ಬೆಂಗಳೂರಿಗೆ ತೆರಳುವಾಗ ನಾನೇ ಸಚಿವರನ್ನು ಬಸ್‌ ನಿಲ್ದಾಣ ಮತ್ತು ಡಿಪೋಗೆ ಒತ್ತಾಯಪೂರ್ವಕವಾಗಿ ಕರೆದೊಯ್ದು, ಅಲ್ಲಿನ ಸಮಸ್ಯೆಗಳಿಗೆ ಮುಕ್ತಿ ದೊರಕಿಸಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆ. ಹಾಗಾಗಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಸಚಿವರ ಆದೇಶ ಪಾಲಿಸದಿರುವುದು ಅಧಿಕಾರಿಗಳ ನಿರ್ಲಕ್ಷ ್ಯ ತೋರುತ್ತದೆ. ಈ ಬಗ್ಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು.

- ಬಿ.ಬಿ.ನಿಂಗಯ್ಯ, ಮಾಜಿ ಸಚಿವರು.


---

ಸಚಿವರು ನೀಡಿದ ಬಹುತೇಕ ಆದೇಶಗಳನ್ನು ಪಾಲಿಸಲಾಗಿದೆ. ಕಟ್ಟಡ ಕಾಮಗಾರಿಗಳು ಸೇರಿದಂತೆ ಬಹುತೇಕ ಸಿವಿಲ್‌ ಕಾಮಗಾರಿಗಳು ಸಿವಿಲ್‌ನವರಿಗೆ ವಹಿಸಲಾಗಿದೆ. ಅದರ ಉಸ್ತುವಾರಿ ಅವರೇ ನೋಡಿಕೊಳ್ಳುತ್ತಾರೆ. ನಿಲ್ದಾಣದ ಶೌಚಾಲಯದ ಗುಂಡಿಯಿಂದ ತ್ಯಾಜ್ಯ ಹೊರ ಬರುತ್ತಿದಿದ್ದರಿಂದ ಕಳೆದ 4 ತಿಂಗಳಿಂದ ಕಾಮಗಾರಿ ನಡೆಸಿ ಗುಂಡಿ ಬದಲಿಸಲಾಗಿದೆ.

-ರವಿ. ಮೂಡಿಗೆರೆ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು.

===============


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ