ಆ್ಯಪ್ನಗರ

ಟಿಪ್ಪು ಹಿಂದೂ ವಿರೋಧಿಯಲ್ಲ, ದೇಶಪ್ರೇಮಿ

ಟಿಪ್ಪು ಒಬ್ಬ ಪರಾಕ್ರಮಿ, ದೇಶಪ್ರೇಮಿ ಆತ ಎಂದೂ ಹಿಂದೂ ವಿರೋಧಿಯಾಗಿರಲಿಲ್ಲ.ಆದರೆ ,ಅವರ ಹೆಸರಿಗೆ ಕಳಂಕ ಹಚ್ಚುವ ಕೆಲಸವನ್ನು ಕೆಲವು ಚರಿತ್ರಾಕಾರರು ಮಾಡಿದ್ದಾರೆ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಹೇಳಿದರು.

Vijaya Karnataka 11 Nov 2018, 5:00 am
ಚಿಕ್ಕಮಗಳೂರು : ಟಿಪ್ಪು ಒಬ್ಬ ಪರಾಕ್ರಮಿ, ದೇಶಪ್ರೇಮಿ ಆತ ಎಂದೂ ಹಿಂದೂ ವಿರೋಧಿಯಾಗಿರಲಿಲ್ಲ.ಆದರೆ ,ಅವರ ಹೆಸರಿಗೆ ಕಳಂಕ ಹಚ್ಚುವ ಕೆಲಸವನ್ನು ಕೆಲವು ಚರಿತ್ರಾಕಾರರು ಮಾಡಿದ್ದಾರೆ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಹೇಳಿದರು.
Vijaya Karnataka Web CKM-10rudrap1


ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಟಿಪ್ಪು ಒಬ್ಬ ಕ್ರೂರಿ, ಮತಾಂತರಿ, ಅತ್ಯಾಚಾರಿ ಎಂಬ ಹಣೆಪಟ್ಟಿ ಹಚ್ಚಿ ಆತನ ಹೆಸರಿಗೆ ಕಳಂಕ ತರಲಾಗುತ್ತಿದೆ. ಒಬ್ಬ ವ್ಯಕ್ತಿ ಎಂದ ಮೇಲೆ ಗುಣ-ಅವಗುಣಗಳು ಇದ್ದೇ ಇರುತ್ತವೆ. ಶ್ರೇಷ್ಠ ಗುಣಗಳನ್ನು ನಾವು ಸಮಾಜಕ್ಕೆ ತೋರ್ಪಡಿಸುವ ಜರೂರತ್ತು ಇದೆ. ಬರಿ ದೂಷಣೆಗಾಗಿ ದೂಷಣೆ ಮಾಡುವುದಲ್ಲ.ಟೀಕೆ ಮಾಡುವವರು ಒಮ್ಮೆ ಪರಾಮರ್ಶಿಸಬೇಕು. ನಮ್ಮ ನಮ್ಮ ಮಧ್ಯೆ ಬಾಂಧವ್ಯದ ಬೆಸುಗೆ ಆಗಬೇಕು. ಎಲ್ಲರೂ ಮನುಷ್ಯ ಜಾತಿಯವರೆಂದು ತಿಳಿಯಬೇಕು ಎಂದು ಹೇಳಿದರು.

ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಟೀಕಿಸುವವರು ಅರ್ಥಮಾಡಿಕೊಳ್ಳಬೇಕು. ಶ್ರೀರಂಗಪಟ್ಟಣದ ಗಂಗಾಧರೇಶ್ವರ ಗುಡಿಯಲ್ಲಿ ಗಂಟೆ ನಿನಾದ ಟಿಪ್ಪು ಕಿವಿಗೆ ಕೇಳಿಸುತ್ತಿದ್ದರೂ ಅದನ್ನು ನಿಲ್ಲಿಸಲಿಲ್ಲ.ಲಾಲ್‌ ಮಹಲ್‌ ಅರಮನೆ ಮುಂದೆ ಇರುವ ಲಕ್ಷ್ಮಿ ದೇವಾಲಯಕ್ಕೆ ತೊಂದರೆ ನೀಡಲಿಲ್ಲ. ಶೃಂಗೇರಿ ಶಾರದಾಂಭೆ ದೇಗುಲಕ್ಕೆ ಹಿಂದೂ ರಾಜರೇ ಆಕ್ರಮಣ ಮಾಡಿದಾಗ ಶ್ರೀಗಳು ಪಲಾಯನ ಮಾಡಬೇಕಾಯಿತು. ಆ ಸಂದರ್ಭ ತಮ್ಮ ನೆರವಿಗೆ ಬನ್ನಿ ಎಂದು ಶ್ರೀಗಳು ಯಾವೊಬ್ಬ ಹಿಂದೂ ರಾಜರಿಗೆ ಬಿನ್ನಹ ಮಾಡದೆ ಟಿಪ್ಪುವಿನ ಸಹಾಯ ಬೇಡಿದರು. ಆಗ ಅಭಯ ನೀಡಿದ ಟಿಪ್ಪು ಮತ್ತೆ ಶ್ರೀಗಳನ್ನು ಮಠಕ್ಕೆ ಕರೆತಂದರು.ಇಂದಿಗೂ ಶೃಂಗೇರಿ ಶಾರದಾಂಭೆಗೆ ತೊಡಿಸುವ ಆಭರಣಗಳು ಟಿಪ್ಪು ಕೊಟ್ಟಿದ್ದು. ಅಲ್ಲಿನ ಬೆಳ್ಳಿ ಪಲ್ಲಕ್ಕಿ ಟಿಪ್ಪುವಿನ ಕೊಡುಗೆ, ಗದುಗೇಶ್ವರ ಮಠಕ್ಕೆ ಪಲ್ಲಕ್ಕಿ ನೀಡಿದ್ದಾರೆ. ನಂಜನಗೂಡಿನ ನಂಜುಂಡೇಶ್ವರನಲ್ಲಿ ಹರಕೆ ಹೊತ್ತ ಟಿಪ್ಪು ಅಲ್ಲಿಗೆ ಪಚ್ಚೆ ಲಿಂಗ ಅರ್ಪಿಸಿರುವುದನ್ನು ಇಂದಿಗೂ ಕಾಣಬಹುದು. ಹಿಂದೂ ದೇವಸ್ಥಾನಗಳ ಮೇಲೆ ಇಷ್ಟೆಲ್ಲಾ ಔದಾರ್ಯ ತೋರಿದ ಟಿಪ್ಪು ಅದು ಹೇಗೆ ಹಿಂದೂ ವಿರೋಧಿಯಾಗುತ್ತಾನೆ ಎಂದು ಪ್ರಶ್ನಿಸಿದ ಅವರು ಕತ್ತಲೆಯಲ್ಲಿದ್ದವರ ನಡುವೆ ದೀಪ ಹಚ್ಚುವ ಕೆಲಸ ಮಾಡಿ. ಸಾಧ್ಯವಾದರೆ ಅವರನ್ನು ಕತ್ತಲೆಯಿಂದ ಹೊರತರುವ ಪ್ರಯತ್ನ ಮಾಡಿ. ಆದರೆ, ಬೆಂಕಿ ಹಚ್ಚುವ ಕೆಲಸ ಮಾತ್ರ ಮಾಡಬೇಡಿ ಎಂದು ಟಿಪ್ಪು ಜಯಂತಿ ಆಚರಣೆ ವಿರೋಧಿಗಳಿಗೆ ತಿವಿದರು.

ವಕ್ಫ್ ಬೋರ್ಡ್‌ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಅತೀಕ್‌ ಖೈಸರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟಿಪ್ಪು ಒಬ್ಬ ಮುಸಲ್ಮಾನ್‌ ಎಂಬ ಕಾರಣಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಅವರ ಜಯಂತಿಯನ್ನು ವಿರೋಧಿಸುತ್ತಿದೆ. ಟಿಪ್ಪು ಈ ದೇಶಕ್ಕಾಗಿ ತನ್ನ ಜೀವವನ್ನೇ ಮುಡುಪಾಗಿಟ್ಟ. ತನ್ನ ಮಕ್ಕಳನ್ನು ಅಡವಿಟ್ಟ.ಈ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ.ಆದರೆ, ಕೇವಲ ಓಟ್‌ ಬ್ಯಾಂಕಿಗಾಗಿ ಜಾತಿ ಜಾತಿ ಒಡೆಯುವ ಕೆಲಸವನ್ನು ಸಂಘಪರಿವಾರ ಮಾಡುತ್ತಿದೆ ಎಂದು ಆರೋಪಿಸಿದರು.

ಡಿಸಿ ಎಂ.ಕೆ.ಶ್ರೀರಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ವ್ಯಕ್ತಿಯಲ್ಲಿ 99 ಗುಣ ಒಳ್ಳೆಯದಿದ್ದು ಒಂದು ಗುಣ ಕೆಟ್ಟದಿದ್ದರೆ ಒಂದನ್ನೆ ವಿಜೃಂಭಿಸುತ್ತೇವೆ. ಒಳ್ಳೆಯದು ಮುನ್ನೆಲೆಗೆ ಬರುವುದಿಲ್ಲ. ಟಿಪ್ಪು ಮೈಸೂರು ಹುಲಿ, ಪರಾಕ್ರಮಿ ಎಂಬುದನ್ನು ಪಠ್ಯದಲ್ಲಿ ಕೇಳಿದ್ದೇವೆ. ಕಂದಾಯ ಇಲಾಖೆಗೆ ಟಿಪ್ಪುವಿನ ಕೊಡುಗೆ ಅಪಾರ ಎಂದು ಹೇಳಿದರು.ಟಿಪ್ಪು ಸುಲ್ತಾನ್‌ ಕಿರುಪರಿಚಯದ ಕೈಪಿಡಿಯನ್ನು ಡಿಸಿ ಶ್ರೀರಂಗಯ್ಯ ಬಿಡುಗಡೆ ಮಾಡಿದರು.

ಬ್ಯಾರಿ ಅಕಾಡೆಮಿ ಅಧ್ಯಕ್ಷ ಕೆ.ಮೊಹಮದ್‌, ಟಿಪ್ಪು ಅಭಿಮಾನಿ ಸಂಘದ ಅಧ್ಯಕ್ಷ ಜಂಶಿದ್‌ಖಾನ್‌, ಜಿ.ಪಂ.ಮಾಜಿ ಅಧ್ಯಕ್ಷ ಎ.ಎನ್‌.ಮಹೇಶ್‌, ಕೋಮುಸೌಹಾರ್ದವೇದಿಕೆ ಗೌಸ್‌ಮೊಯುದ್ದೀನ್‌, ಬಿಎಸ್ಪಿ ರಾಧಾಕೃಷ್ಣ ಹಾಜರಿದ್ದರು. ಡಾ.ರಮೇಶ್‌ ಸ್ವಾಗತಿಸಿದರು.ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ