ಆ್ಯಪ್ನಗರ

ಗಾಂಧೀಜಿ ಮತ್ತು ಅವರ ಜೀವನ ಮೌಲ್ಯಗಳು ಕುರಿತ ವಿಚಾರ ಸಂಕಿರಣ

ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆಯನ್ನು ಪರಮ ಧರ್ಮವೆಂದು ಪ್ರತಿಪಾದಿಸಿ, ಅವುಗಳನ್ನು ಅನುಸರಿಸಿದ ಶ್ರೇಷ್ಠ ವ್ಯಕ್ತಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ತಿಳಿಸಿದರು.

ವಿಕ ಸುದ್ದಿಲೋಕ 5 Oct 2016, 7:28 pm
ಚಿತ್ರದುರ್ಗ : ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆಯನ್ನು ಪರಮ ಧರ್ಮವೆಂದು ಪ್ರತಿಪಾದಿಸಿ, ಅವುಗಳನ್ನು ಅನುಸರಿಸಿದ ಶ್ರೇಷ್ಠ ವ್ಯಕ್ತಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ತಿಳಿಸಿದರು.
Vijaya Karnataka Web
ಗಾಂಧೀಜಿ ಮತ್ತು ಅವರ ಜೀವನ ಮೌಲ್ಯಗಳು ಕುರಿತ ವಿಚಾರ ಸಂಕಿರಣ


ನಗರದ ಎಸ್‌ಜೆಎಂ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಗಾಂಧೀಜಿ ಮತ್ತು ಅವರ ಜೀವನ ಮೌಲ್ಯಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಅಹಿಂಸೆ ಮಾರ್ಗದ ಮೂಲಕವೇ ಬ್ರಿಟೀಷರ ದಾಸ್ಯದಿಂದ ಭಾರತವನ್ನು ಬಿಡುಗಡೆ ಮಾಡುವಲ್ಲಿ ಶ್ರಮಿಸಿದರು. ಶಾಂತಿಯೇ ಮೂಲಮಂತ್ರವನ್ನಾಗಿಸಿ ಬ್ರಿಟಿಷರನ್ನು ದೇಶಬಿಟ್ಟು ಕಳುಹಿಸಿದ ಗಾಂಧೀಜಿಯವರು ನಮ್ಮ ರಾಷ್ಟ್ರಪಿತ ಎನಿಸಿಕೊಂಡಿದ್ದಾರೆ. ಗಾಂಧೀಜಿ ಅವರೊಂದಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಡಾ.ಬಿ.ಆರ್‌.ಅಂಬೇಡ್ಕರ್‌, ಲಾಲ್‌ಬಹದ್ದೂರ್‌ ಶಾಸ್ತ್ರಿ, ಸರ್ದಾರ್‌ ವಲ್ಲಭಾಯಿ ಪಟೇಲ್‌, ಕಿತ್ತೂರು ರಾಣಿ ಚೆನ್ನಮ್ಮ ಇವರೆಲ್ಲರನ್ನು ನೆನೆಯುತ್ತಾ ಕೃತಜ್ಞರಾಗಿರಬೇಕು ಎಂದು ಹೇಳಿದರು.

ಮಹಾತ್ಮ ಗಾಂಧೀಜಿ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸವನ್ನು ಮಾಡಿದವರು. ಹರಿಜನ ಕೇರಿಯಲ್ಲಿ ಸಂಚರಿಸಿ, ಇವರನ್ನು ಮುಟ್ಟಿ, ಸ್ವಚ್ಚಗೊಳಿಸಿ ಇವರೊಂದಿಗೆ ಸಹಭೋಜನ ಮಾಡಿದ್ದರಿಂದ ಅಸ್ಪೃಶ್ಯತೆ ನಿವಾರಣೆಯ ಅವರ ರಾಜಮಾರ್ಗ ದಾರಿಯಾಗಿ ಇಂದಿಗೂ ಇದರ ಬೆಳಕು ಮೂಡಿದೆ. ಗಾಂಧೀ ಸ್ವದೇಶಿ ಚಳುವಳಿ ಮೂಲಕ ಖಾದಿಗೆ ಹೆಚ್ಚಿನ ಮಹತ್ವಕೊಟ್ಟವರು ಮತ್ತು ಸಮಾನತೆಗಾಗಿ ಹೋರಾಟ ಮಾಡಿದವರು ಎಂದರು.

ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಜಿಲ್ಲಾ ಪಂಚಾಯತ್‌ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ.ಪ್ರಕಾಶ್‌ಮೂರ್ತಿ, ಜಿಪಂ ಸದಸ್ಯ ನರಸಿಂಹರಾಜು, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ರಕ್ಷ ಣಾಧಿಕಾರಿ ಅರುಣ್‌ ರಂಗರಾಜನ್‌, ಅಪರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ, ಉಪವಿಭಾಗಾಧಿಕಾರಿ ರಾಘವೇಂದ್ರ, ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ್‌, ಸರಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಚಿದಾನಂದ, ಬಿ.ಸಿ.ಎಂ.ಅಧಿಕಾರಿ ಮಹೇಶ್‌, ಜಿಲ್ಲಾ ವಾರ್ತಾಧಿಕಾರಿ ಧನಂಜಯ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಇಲಾಖೆಯಿಂದ ಗಾಂಧೀ ಜಯಂತಿ ಅಂಗವಾಗಿ ಸರಕಾರ ಕೈಗೊಂಡಿರುವ ನಮ್ಮ ಗ್ರಾಮ, ನಮ್ಮ ಯೋಜನೆ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕ 100 ಸೇವೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು 20 ದಿನಗಳ ಕಾಲ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದು ವಿಶೇಷ ಪ್ರಚಾರ ಕಾರ್ಯಕ್ರಮದ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ಉದ್ಘಾಟಿಸಿದರು.

-------

ಪ್ರಾರ್ಥನಾ ಗೀತೆ : ಸೆಂಟ್‌ ಜೋಸೆಫ್‌ ಕಾನ್ವೆಂಟ್‌ ಶಾಲೆ ವಿದ್ಯಾರ್ಥಿಗಳಾದ ಸುರಭಿ ಮತ್ತು ತಂಡದವರು ರಘುಪತಿ ರಾಘವ ರಾಜಾರಾಂ ಗೀತೆ, ವೈಷ್ಣವೋ ಜನತೋ, ನಿನಗಿಂತ ಆದರ್ಶ ಬೇಕೇನು ಬಾಪು ಸೇರಿದಂತೆ ನಾನಾ ಪ್ರಾರ್ಥನಾ ಗೀತೆಗಳನ್ನು ಹಾಡಿದರು. ಭಗವದ್ಗೀತೆಯನ್ನು ಕುಸುಮ, ಬೈಬಲ್‌ ಕೃಪಾಂಜಲಿ ಮತ್ತು ಕುರಾನ್‌ ಪಠಣವನ್ನು ಸುಹಾಸ್‌ ನೆರವೇರಿಸಿದರು.

ಕಿರು ಪುಸ್ತಕ ಬಿಡುಗಡೆ : ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆಯಿಂದ ಮುದ್ರಿಸಿದ ಗಾಂಧೀ ಜಯಂತಿ ಪ್ರಯುಕ್ತ ನಮ್ಮ ಗ್ರಾಮ, ನಮ್ಮ ಯೋಜನೆ, ಬಾಪೂಜಿ ಸೇವಾ ಕೇಂದ್ರ, ನಮ್ಮ ಗಾಂಧೀ ತಾತ, ನನ್ನ ಜೀವನವೇ ನನ್ನ ಸಂದೇಶ ಎಂಬ ನಾಲ್ಕು ಕಿರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ