ಆ್ಯಪ್ನಗರ

​ ಕುಡಿಯಲು ನೀರಿಲ್ಲದ ತಾಂಡದಲ್ಲಿ ಹೆಂಡದ ಹೊಳೆ...!

ಅದು ನೋಡೋಕೆ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಯಾವ ಮನೆಗೂ ಕುಡಿಯೋಕೆ ನೆಟ್ಟಗೆ ಎರಡು ಕೊಡ ನೀರು ಸಿಗುತ್ತಿಲ್ಲ. ಆದರೆ ಅಲ್ಲಿ ಅಕ್ರಮ ಮದ್ಯ ಮಾತ್ರ ಇಪ್ಪತ್ನಾಲ್ಕು ಗಂಟೆಯೂ ಧಾರಾಳವಾಗಿ ಸಿಗುತ್ತದೆ..!

ವಿಕ ಸುದ್ದಿಲೋಕ 3 Mar 2017, 9:27 pm
ಭರಮಸಾಗರ : ಅದು ನೋಡೋಕೆ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಯಾವ ಮನೆಗೂ ಕುಡಿಯೋಕೆ ನೆಟ್ಟಗೆ ಎರಡು ಕೊಡ ನೀರು ಸಿಗುತ್ತಿಲ್ಲ. ಆದರೆ ಅಲ್ಲಿ ಅಕ್ರಮ ಮದ್ಯ ಮಾತ್ರ ಇಪ್ಪತ್ನಾಲ್ಕು ಗಂಟೆಯೂ ಧಾರಾಳವಾಗಿ ಸಿಗುತ್ತದೆ..!
Vijaya Karnataka Web
​ ಕುಡಿಯಲು ನೀರಿಲ್ಲದ ತಾಂಡದಲ್ಲಿ ಹೆಂಡದ ಹೊಳೆ...!


ಆ ಊರಲ್ಲಿ ಹೆಂಡದ ಮಾರಾಟ ದಂಧೆ ಮಾತ್ರ ಎಗ್ಗಿಲ್ಲದೆ ನಡೆಯುತ್ತದೆ. ಇಲ್ಲಿನ ಮಹಿಳೆಯರು ಈ ಕುಡುಕರ ಹಾವಳಿಗೆ ರೋಸಿ ಹೋಗಿದ್ದಾರೆ. ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿವರೆಗೂ ದೂರು ಹೊತ್ತು ಹೋಗಿದ್ದಾರೆ. ಆದರೇನು ಕಿಮ್ಮತ್ತು ಇಲ್ಲ..!

ಹೀಗೆ ಕುಡಿಯುವ ನೀರಿಲ್ಲದಿದ್ದರೂ ಅಕ್ರಮ ಮದ್ಯ ಸಮೃದ್ಧವಾಗಿರುವ ಆ ಪುಟ್ಟ ಗ್ರಾಮ ಚಿತ್ರದುರ್ಗ ತಾಲೂಕಿನ ಹಳವುದರ ಲಂಬಾಣಿಹಟ್ಟಿ.

ನೀರಿಗಾಗಿ ಅಲೆದಾಟ: ಇಡೀ ಊರಿನ ಹೆಣ್ಣುಮಕ್ಕಳು ಹನಿ ನೀರಿಗಾಗಿ ಕೊಡ ಹಿಡಿದು ಅಲೆಯುತ್ತಾರೆ. ಆದರೆ ಮದ್ಯ ವ್ಯಸನಿಗಳು ಹನಿ ವಿಸ್ಕಿಗೆ ಮದ್ಯದಂಗಡಿ ಹುಡುಕಿ ತಿರುಗುತ್ತಾರೆ. ಇದರ ವಿರುದ್ಧ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸಿಡಿದೆದ್ದು ಪೋಲಿಸರ ಮೋರೆ ಹೋಗಿದ್ದರು. ಆದರೂ ಮದ್ಯ ಮಾರಾಟ ನಿಂತಿಲ್ಲ. ಮತ್ತಷ್ಟು ಬಲಗೊಂಡಿದೆ.

ಮದ್ಯ ಮಾರಾಟ: ಗ್ರಾಮದ ಹತ್ತಕ್ಕೂ ಹೆಚ್ಚು ಅಂಗಡಿ, ಮನೆಗಳಲ್ಲಿ ಅಕ್ರಮ ಮದ್ಯ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಮದ್ಯ ಮಾರುವವರ ಸರಕನ್ನು ಅಕ್ಕಪಕ್ಕದ ಮನೆಗಳಲ್ಲಿ ಅಬ್ಕಾರಿ ಇಲಾಖೆ ಸಿಬ್ಬಂದಿ ರೇಡ್‌ಗೂ ಸಿಗದಂತೆ ಸಂರಕ್ಷಿಸಿ ಇಡಲಾಗುತ್ತಿದೆ. ಹಳ್ಳಿಯ ಓಣಿ ಓಣಿಗಳಲ್ಲಿ ಕುಡುಕರಿಂದಾಗಿ ಮಹಿಳೆ ಮಕ್ಕಳಿಗೆ ನೆಮ್ಮದಿ ಇಲ್ಲದಂತಾಗಿದೆ.

ನೆಪ ಮಾತ್ರಕ್ಕೆ ಬೀಟ್‌ ಪೊಲೀಸರು ಬರುತ್ತಾರೆ. ಏನೂ ಇಲ್ಲ ಅಂತ ವಾಪಾಸ್‌ ಹೋಗುತ್ತಾರೆ ಎಂದು ಮಹಿಳೆಯರು ಗಂಭೀರ ಆರೋಪ ಮಾಡುತ್ತಿದ್ದಾರೆ. ಯಾರಾದರೂ ಮಾಧ್ಯಮದವರು, ಅಧಿಕಾರಿಗಳು ಬಂದ್ರೇ ಏನೂ ತಿಳಿಯದಂತೆ ಯಾಮಾರಿಸಿ ಕಳುಹಿಸುವ ಪ್ರಯತ್ನವೂ ನಡೆಯುತ್ತದೆ. ಕುಡಿದು ಸಂಸಾರಗಳು ಒಡೆದು ಬೀದಿಗೆ ಬಿದ್ದರೂ ನಮ್ಮೂರಿನಲ್ಲಿ ಕುಡಿತ ನಿಲ್ಲಿಸೋ ಗೋಜಿಗೆ ಯಾರೂ ಹೋಗುತ್ತಿಲ್ಲ ಎನ್ನುತ್ತಾರೆ ಮಹಿಳೆಯರು.

ಈ ಬಗ್ಗೆ ವಿಜಯ ಕರ್ನಾಟಕದಲ್ಲಿ ಸುದ್ದಿ ಬರಲಿ ಎಂದು ಕಾಯುತ್ತೇವೆ. ಆ ಬಳಿಕ ನಮ್ಮ ಹೋರಾಟವನ್ನು ಜಿಲ್ಲಾ ಕೇಂದ್ರಕ್ಕೆ ವಿಸ್ತಿರಿಸುತ್ತೇವೆ. ಕೆಲ ಪುರುಷರ ಬೆಂಬಲದೊಂದಿಗೆ ಜಿಲ್ಲೆಯಲ್ಲೇ ದೊಡ್ಡ ಜನಾಂದೋಲನ ನಡೆಸೋದು ಶತಸಿದ್ಧ. ಅಲ್ಲದೆ ಜಿಲ್ಲೆಯ ಜನಪರ ಸಂಘಟನೆಗಳು ನಮ್ಮ ಮದ್ಯ ಮಾರಾಟ ಮುಕ್ತ ಹಳ್ಳಿಯನ್ನಾಗಿಸುವ ಹೋರಾಟವನ್ನು ಬೆಂಬಲಿಸಬೇಕು ಎಂದು ಗ್ರಾಮದ ಮಹಿಳೆಯರು ವಿಕ ಜತೆ ಹೇಳಿಕೊಂಡಿದ್ದಾರೆ.

---------------

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ಬಗ್ಗೆ ಮಹಿಳೆಯರು ಚರ್ಚೆ ನಡೆಸಿದ್ದೇವೆ. ಭರಮಸಾಗರ ಪೊಲೀಸರ ಮೇಲೆ ನಮಗೆ ವಿಶ್ವಾಸ ಹೋಗಿದೆ. ಜಿಲ್ಲಾ ಕೇಂದ್ರಕ್ಕೆ ನಮ್ಮ ಸಮಸ್ಯೆ ತೆಗೆದುಕೊಂಡು ಹೋಗುತ್ತೇವೆ. ಮಾದ್ಯಮಗಳು ನಮ್ಮ ಹೋರಾಟ ಬೆಂಬಲಿಸಬೇಕು.

-ನೊಂದ ಮಹಿಳೆಯರು, ಹಳವುದರ ಲಂಬಾಣಿಹಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ