ಆ್ಯಪ್ನಗರ

ಮೂಲ ವಿಜ್ಞಾನದತ್ತ ಹೆಚ್ಚುತ್ತಿರುವ ಒಲವು

ಪಿಯು ಸೈನ್ಸ್‌ ಓದಿದ ಬಹುತೇಕ ವಿದ್ಯಾರ್ಥಿಗಳು ಮೆಡಿಕಲ್‌, ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಆದ್ಯತೆ ನೀಡಿ ಮೂಲ ವಿಜ್ಞಾನ ಕೋರ್ಸ್‌ಗೆ ಬೇಡಿಕೆ ಕಡಿಮೆ ಆಗುತ್ತಿದೆ ಎನ್ನುವ ಆತಂಕದ ನಡುವೆಯೇ ಭರವಸೆ ಮೂಡಿಸುವ ಬೆಳವಣಿಗೆಯೊಂದು ನಗರದ ಸರಕಾರಿ ವಿಜ್ಞಾನ ಪದವಿ ಕಾಲೇಜಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

ವಿಕ ಸುದ್ದಿಲೋಕ 24 May 2017, 7:30 pm
ಎಂ.ಎನ್‌.ಅಹೆ ೂೕಬಳಪತಿ ಚಿತ್ರದುರ್ಗ : ಪಿಯು ಸೈನ್ಸ್‌ ಓದಿದ ಬಹುತೇಕ ವಿದ್ಯಾರ್ಥಿಗಳು ಮೆಡಿಕಲ್‌, ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಆದ್ಯತೆ ನೀಡಿ ಮೂಲ ವಿಜ್ಞಾನ ಕೋರ್ಸ್‌ಗೆ ಬೇಡಿಕೆ ಕಡಿಮೆ ಆಗುತ್ತಿದೆ ಎನ್ನುವ ಆತಂಕದ ನಡುವೆಯೇ ಭರವಸೆ ಮೂಡಿಸುವ ಬೆಳವಣಿಗೆಯೊಂದು ನಗರದ ಸರಕಾರಿ ವಿಜ್ಞಾನ ಪದವಿ ಕಾಲೇಜಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.
Vijaya Karnataka Web
ಮೂಲ ವಿಜ್ಞಾನದತ್ತ ಹೆಚ್ಚುತ್ತಿರುವ ಒಲವು


ರಾಜ್ಯದಲ್ಲೇ ಪ್ರತಿಷ್ಟಿತ ವಿಜ್ಞಾನ ಕಾಲೇಜುಗಳಲ್ಲೊಂದಾಗಿರುವ ಸರಕಾರಿ ವಿಜ್ಞಾನ ಪದವಿ ಕಾಲೇಜಿಗೆ ವರ್ಷದಿಂದ ವರ್ಷಕ್ಕೆ ಮೂಲ ವಿಜ್ಞಾನ ಅಧ್ಯಯನ ಆಸಕ್ತಿಯಿಂದ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಬೇಡಿಕೆ ಇರುವ ಕೋರ್ಸ್‌ಗಳ ವ್ಯಾಪ್ತಿಯಿಂದ ಹೊರಗಿದ್ದ ಜಿಯಾಲಜಿ ವಿಭಾಗದಲ್ಲೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ.

ಸೈನ್ಸ್‌ ಕಾಲೇಜಿನಲ್ಲಿ ಇರುವ ಒಂಬತ್ತು ಕಾಂಬಿನೇಶನ್‌ಗಳಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 1300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಸಿಬಿಝಡ್‌, ಪಿಸಿಎಂನತ್ತ ಒಲವು ತೋರಿಸಿ ಪ್ರವೇಶ ಪಡೆದಿದ್ದರು. ಪಿಎಂಜಿ, ಸಿಬಿಜಿ ವಿಭಾಗದಲ್ಲಿ 90 ಜನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಬಾರಿ ಶೇ.10ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಜಿಯಾಲಜಿ ವಿಭಾಗದ ಪ್ರಾಧ್ಯಾಪಕರು.

ಜಿಯಾಲಜಿಗೆ ಬೇಡಿಕೆ ಏಕೆ?: ಜಿಯಾಲಜಿ(ಭೂ ವಿಜ್ಞಾನ)ಯಲ್ಲಿ ಉದ್ಯೋಗಾವಶಕಾಶ ಸಾಧ್ಯತೆ ಕಡಿಮೆ ಎನ್ನುವ ಪ್ರಚಾರದಿಂದಾಗಿ ಕೆಲ ವರ್ಷಗಳ ಕಾಲ ಈ ಕೋರ್ಸ್‌ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಜತೆಗೆ ಭೂ ವಿಜ್ಞಾನದ ಸಂಶೋಧನೆಯ ಸಾಧ್ಯತೆಗಳು, ಅಪರಿಮಿತ ಉದ್ಯೋಗಾವಕಾಶ ಒದಗಿಸುವ ಕ್ಷೇತ್ರಗಳ ಕುರಿತು ಹೆಚ್ಚಿನ ಮಾಹಿತಿಯೂ ಸಿಗುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ.

ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುತ್ತಿರುವವರು ಹೆಚ್ಚಾಗಿ ಜಿಯಾಲಿಜಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಿಎಸ್ಸಿ ಮಾಡಿದವರಿಗೆ ಬಿಇಡಿಗೂ ಅವಕಾಶ ಇದೆ. ಜಿಯಾಲಜಿ ಎಂದರೆ ಭೂ ಸಂಪನ್ಮೂಲಗಳ ನಿರ್ವಹಣೆ ಎನ್ನುವಂತಾಗಿದೆ. ಕಚ್ಚಾ ಖನಿಜ ಸಂಶೋಧನೆ, ಸಂಸ್ಕರಣೆ, ಮೌಲ್ಯವರ್ಧನೆಯಲ್ಲಿ ಜಿಯಾಲಜಿ ವಿಭಾಗದಲ್ಲಿ ಅಧ್ಯಯನ ಮಾಡಿದವರಿಗೆ ಅಪಾರ ಬೇಡಿಕೆ ಇದೆ.

ಜಿಯೋ ಫಿಸಿಕ್ಸ್‌, ಜಿಯೋ ಕೆಮಿಸ್ಟ್ರಿ, ಗ್ರಾನೈಟ್‌ ಟೆಕ್ನಾಲಜಿ, ಕ್ರಷಿಂಗ್‌ ಮೆಟೀರಿಯಲ್ಸ್‌, ಜೆಮ್‌ ಕಟಿಂಗ್‌, ಜಿಯಾಲಜಿಕಲ್‌ ಸರ್ವೇ ಆಫ್‌ ಇಂಡಿಯಾ, ಆಟಾಮಿಕ್‌ ಎನರ್ಜಿ ಕಮೀಷನ್‌, ಒಎನ್‌ಜಿಸಿ, ಪೆಟ್ರೋಲಿಯಂ ಜಿಯಾಲಜಿ, ಕಾಸ್ಮಿಕ್‌ ಜಿಯಾಲಜಿ, ನ್ಯೂಕ್ಲಿಯರ್‌ ಜಿಯಾಲಜಿ, ಮೇರಿನ್‌ ಜಿಯಾಲಜಿ, ಹೈಡ್ರೋ ಜಿಯಾಲಜಿ, ರಿಮೂಟ್‌ ಸೆನ್ಸಿಂಗ್‌, ಹವಾಮಾನ ಬದಲಾವಣೆ, ಬಿಸಿಗಾಳಿ ಅಧ್ಯಯನ ಹೀಗೆ ನಾನಾ ಕಡೆ ಜಿಯಾಲಜಿ 'ಬಹುಶಿಸ್ತೀಯ ತಾಂತ್ರಿಕ ಕೋರ್ಸ್‌' ಆಗಿ ತನ್ನ ಮಹತ್ವ ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಬಗೆಯ ಉದ್ಯೋಗಗಳಲ್ಲಿ ಕನ್ನಡಿಗರ ಪಾಲು ತೀರಾ ಕಡಿಮೆ ಇದೆ. ಬಹುತೇಕ ಅವಕಾಶಗಳು ಕೇರಳ, ತಮಿಳುನಾಡು, ಈಶಾನ್ಯ ಭಾರತ, ಉತ್ತರ ಭಾರತದವರ ಪಾಲಾಗುತ್ತಿವೆ ಎಂಬುದು ಔದ್ಯೋಗಿಕ ವಿಶ್ಲೇಷಕರ ಅಭಿಪ್ರಾಯ.

'ಇಂದಿನ ತಲೆಮಾರಿನ ವಿದ್ಯಾರ್ಥಿಗಳು ಆಧುನಿಕ ಸಂಪರ್ಕ ಸಾಧನಗಳಲ್ಲಿ ನಿಸ್ಸೀಮರಾಗಿದ್ದಾರೆ. ಆದರೆ, ಜಿಯಾಲಜಿ ಕುರಿತ ಸಾಂಪ್ರದಾಯಿಕ ಗ್ರಹಿಕೆಯಿಂದ ಹೊರಬಂದಿಲ್ಲ. ಜಿಯಾಲಜಿ ಎಂದರೆ ಕೇವಲ ಕಲ್ಲು, ಮಣ್ಣಲ್ಲ. ಅದೊಂದು ಅಗಣಿತ ಅವಕಾಶಗಳ ಹೆಬ್ಬಾಗಿಲು. ಈ ನಿಟ್ಟಿನಲ್ಲಿ ಜಿಯಾಲಜಿ ವಿಷಯ ಅಧ್ಯಯನದ ಆಯ್ಕೆ ಸೂಕ್ತವಾದುದು' ಎನ್ನುತ್ತಾರೆ ಭೂ ವಿಜ್ಞಾನಿ, ಅಂತರ್ಜಲ ತಜ್ಞ ದೇವರಾಜರೆಡ್ಡಿ.

**

ಸೈನ್ಸ್‌ ಕಾಲೇಜ್‌ ವಿದ್ಯಾರ್ಥಿಗಳಿಗೆ ಉತ್ತಮ ಮನ್ನಣೆ : ನಗರದ ಸರಕಾರಿ ವಿಜ್ಞಾನ ಕಾಲೇಜು ಆರಂಭವಾದ ಎರಡೇ ವರ್ಷದಲ್ಲಿ ಆರಂಭವಾದ ಜಿಯಾಲಜಿ ವಿಭಾಗಕ್ಕೆ ತುಂಬಾ ಮಹತ್ವ ಇದೆ. 1950ರಲ್ಲಿ ಆರಂಭವಾಗಿರುವ ಈ ಕೋರ್ಸ್‌ ಆರಂಭವಾಗಿತ್ತು. ಸುಸಜ್ಜಿತ ಪ್ರಯೋಗಾಲಯ, ಸಾವಿರಕ್ಕೂ ಹೆಚ್ಚು ಖನಿಜ ಮಾದರಿಗಳು, ಉತ್ತಮ ಬೋಧಕರು ಸೇರಿದಂತೆ ರಚನಾತ್ಮಕ ಅಧ್ಯಯನಕ್ಕೆ ಪೂರಕವಾದ ಎಲ್ಲ ಸೌಲಭ್ಯ ಸೈನ್ಸ್‌ ಕಾಲೇಜಿನಲ್ಲಿವೆ. ನಿಜ ಹೇಳಬೇಕೆಂದರೆ ಅದೊಂದು ಭೂ ವಿಜ್ಞಾನ ಮತ್ತು ನಾನಾ ಖನಿಜ ಮಾದರಿಗಳ ಮಾಹಿತಿಯ ಆಗರ ಎಂದರೂ ತಪ್ಪಲ್ಲ.

ಇಲ್ಲಿನ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಜಿಯಾಲಜಿ ಓದಿದ ವಿದ್ಯಾರ್ಥಿಗಳಿಗೆ ಹಿಂದೆ ತುಂಬಾ ಮಹತ್ವ ಇತ್ತು. ಈಗಲೂ ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ ಪದವಿ ಹಂತದಲ್ಲಿ ಜಿಯಾಲಜಿ ಅಧ್ಯಯನಕ್ಕೆ ಅವಕಾಶ ಇರುವುದು ಇಲ್ಲಿನ ವಿಜ್ಞಾನ ಕಾಲೇಜಿನಲ್ಲಿ ಮಾತ್ರ. 2006 ನಂತರ ಕೆಲ ವರ್ಷಗಳ ಕಾಲ ದಾಖಲಾತಿ ಕಡಿಮೆ ಆಗಿತ್ತು. ಕಳೆದ ವರ್ಷದಿಂದ ಪ್ರವೇಶ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ