ಆ್ಯಪ್ನಗರ

110 ಗ್ರಾಮಕ್ಕೆ ಹೈಮಾಸ್ಟ್‌ ದೀಪದ ಭರವಸೆ

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 110 ಗ್ರಾಮಗಳಿಗೆ 1.75 ಕೋಟಿ ವೆಚ್ಚದಲ್ಲಿ ಮಿನಿ ಹೈಮಾಸ್ಟ್‌ ದೀಪ ಅಳವಡಿಸಲಾಗುವುದು ಎಂದು ಸಂಸದ ಬಿ.ಎನ್‌. ಚಂದ್ರಪ್ಪ ತಿಳಿಸಿದ್ದಾರೆ.

Vijaya Karnataka 7 Jan 2019, 5:00 am
ನಾಯಕನಹಟ್ಟಿ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 110 ಗ್ರಾಮಗಳಿಗೆ 1.75 ಕೋಟಿ ವೆಚ್ಚದಲ್ಲಿ ಮಿನಿ ಹೈಮಾಸ್ಟ್‌ ದೀಪ ಅಳವಡಿಸಲಾಗುವುದು ಎಂದು ಸಂಸದ ಬಿ.ಎನ್‌. ಚಂದ್ರಪ್ಪ ತಿಳಿಸಿದ್ದಾರೆ.
Vijaya Karnataka Web 110 hygust light lamps to the village
110 ಗ್ರಾಮಕ್ಕೆ ಹೈಮಾಸ್ಟ್‌ ದೀಪದ ಭರವಸೆ


ಅವರು ಭಾನುವಾರ ಇಲ್ಲಿನ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊಳಕಾಲ್ಮೂರು ಕ್ಷೇತ್ರದಲ್ಲಿ 220 ಹಳ್ಳಿಗಳಿವೆ. ಇವುಗಳಲ್ಲಿ 110 ಗ್ರಾಮಗಳಿಗೆ ಮಿನಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಎಲ್ಲ ಗ್ರಾಮಗಳಲ್ಲಿ ನಿರಂತರ ವಿದ್ಯುತ್‌ ವ್ಯವಸ್ಥೆ ಇದೆ. ಮಿನಿ ಹೈಮಾಸ್ಟ್‌ ದೀಪಗಳಿಂದಾಗಿ ಎಲ್ಲ ಗ್ರಾಮಗಳು ರಾತ್ರಿಯಲ್ಲಿಯೂ ಝಗಮಗಿಸಲಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹಾವು, ಚೇಳು ಸೇರಿದಂತೆ ನಾನಾ ವಿಷಜಂತುಗಳ ಕಾಟಕ್ಕೆ ಬೆಳಕು ಪರಿಹಾರವಾಗಲಿದೆ. ಜತೆಗೆ ಮಹಿಳೆ, ಮಕ್ಕಳು ರಾತ್ರಿ ವೇಳೆ ನಿರಾತಂಕವಾಗಿ ಸಂಚರಿಸಲು ಅನುಕೂಲವಾಗುತ್ತದೆ ಎಂದರು.

ಇದೀಗ ನೀರಿನ ಸಮಸ್ಯೆ ಹೆಚ್ಚಾಗಿದೆ. ಕಳೆದ ವರ್ಷ ನೀರಿನ ಸಮಸ್ಯೆಗೆ ಪರಿಹಾರವಾಗಿ 18 ಟ್ಯಾಂಕರ್‌ ಒದಗಿಸಲಾಗಿತ್ತು. ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಈಗಾಗಲೇ ರಾಜ್ಯ ಸರಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದೆ. ಆದ್ದರಿಂದ ರಾಂಪುರ, ಹಾನಗಲ್‌ಗಳಿಗೆ ಟ್ಯಾಂಕರ್‌ ಹಾಗೂ ಟ್ರ್ಯಾಕ್ಟರ್‌ ನೀಡಲಾಗುವುದು. ಪ್ರತಿ ವರ್ಷ ಸಂಸತ್‌ ಅನುದಾನದಲ್ಲಿ ಬಹುಪಾಲು ಹಣವನ್ನು ವಿದ್ಯುತ್‌ ದೀಪ ಹಾಗೂ ಕುಡಿವ ನೀರಿನ ಸೌಲಭ್ಯಕ್ಕಾಗಿ ಮೀಸಲಿಟ್ಟಿದ್ದೇನೆ. ಇವುಗಳ ಜತೆಗೆ ಗ್ರಾಮೀಣ ಪ್ರದೇಶಗಳ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ಕಳೆದ ಬಾರಿ 5.7 ಲಕ್ಷ ಮತಗಳನ್ನು ನೀಡಿ ಸಂಸತ್‌ ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ. ಇಡೀ ಅವಧಿಯಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಕುಡಿವ ನೀರು, ವಿದ್ಯುತ್‌ ದೀಪ, ಸಮುದಾಯ ಭವನ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಿದ್ದೇನೆ. ಜಿಲ್ಲೆಯಲ್ಲಿ 6 ಬಿಜೆಪಿ ಶಾಸಕರಿದ್ದರೂ ಈ ಹಿಂದೆ ಮತ ನೀಡಿದ ಮತದಾರರು ಈ ಬಾರಿ ಮತ್ತೊಮ್ಮೆ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಗೆದ್ದಿರುವುದರಿಂದ ಈ ಬಾರಿ ಹೈ ಕಮಾಂಡ್‌ ಟಿಕೆಟ್‌ ನೀಡಲಿದೆ. ಹೀಗಾಗಿ ಸಂಸತ್‌ ಕ್ಷೇತ್ರದ ಪ್ರತಿ ಹಳ್ಳಿಗಳ ಜತೆಗೆ ಉತ್ತಮ ಸಂಪರ್ಕ ಹೊಂದಿದ್ದೇನೆ ಎಂದರು.

ಜಿಪಂ ಸದಸ್ಯ ಡಾ. ಯೋಗೀಶ್‌ ಬಾಬು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗೇಶ್‌ ರೆಡ್ಡಿ, ಜಿ.ತಿಪ್ಪೇಸ್ವಾಮಿ, ಕೌನ್ಸಿಲರ್‌ಗಳಾದ ಮನ್ಸೂರ್‌, ಜಿಟಿಎಸ್‌ ತಿಪ್ಪೇಸ್ವಾಮಿ, ಜೆ.ಆರ್‌. ರವಿಕುಮಾರ್‌, ಎಸ್‌. ಉಮಾಪತಿ, ಯೂಸೂಫ್‌, ಜಿ.ಬಿ.ಮುದಿಯಪ್ಪ, ವಕೀಲ ಚಂದ್ರಣ್ಣ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ