ಆ್ಯಪ್ನಗರ

ಅಡಗಿದ ಗಣಿ ಲಾರಿ ಸದ್ದು ಇಳಿದ ಆ್ಯಕ್ಸಿಡೆಂಟ್‌ ಗುದ್ದು

ಇಲ್ಲಿ ಹಾದು ಹೋಗಿರುವ 150ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುತಿಸಿರುವ ಅಪಘಾತ ವಲಯದಲ್ಲಿ ಅಪಘಾತಗಳು ಇಳಿಮುಖವಾಗಿವೆ. ವಾಹನ ಸವಾರರು ನಿಟ್ಟುಸಿರು ಬಿಡುತ್ತಿದ್ದಾರೆ. ಪೊಲೀಸರು ಕೂಡ ನಿರಾಳರಾಗುತ್ತಿದ್ದಾರೆ.

Vijaya Karnataka 27 Jun 2019, 5:00 am
ಮೊಳಕಾಲ್ಮುರು : ಇಲ್ಲಿ ಹಾದು ಹೋಗಿರುವ 150ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುತಿಸಿರುವ ಅಪಘಾತ ವಲಯದಲ್ಲಿ ಅಪಘಾತಗಳು ಇಳಿಮುಖವಾಗಿವೆ. ವಾಹನ ಸವಾರರು ನಿಟ್ಟುಸಿರು ಬಿಡುತ್ತಿದ್ದಾರೆ. ಪೊಲೀಸರು ಕೂಡ ನಿರಾಳರಾಗುತ್ತಿದ್ದಾರೆ.
Vijaya Karnataka Web a hidden mine lorry is a landed oxidant buffet
ಅಡಗಿದ ಗಣಿ ಲಾರಿ ಸದ್ದು ಇಳಿದ ಆ್ಯಕ್ಸಿಡೆಂಟ್‌ ಗುದ್ದು


ಬಿ.ಜಿ.ಕೆರೆ ಸಮೀಪದ ಹೊಸಕೆರೆ, ಬಿಎಸ್‌ಎನ್‌ಎಲ್‌ ಟವರ್‌ ಸಮೀಪ, ಬೈರಾಪುರ ಸಮೀಪ(ಮಾರಮ್ಮ ದೇವಸ್ಥಾನ) ದೇವಸಮುದ್ರ ಕ್ರಾಸ್‌, ದಿದ್ದಿ ಕಣಿವೆ, ಬೊಮ್ಮಕ್ಕನಹಳ್ಳಿ ಕ್ರಾಸ್‌, ತಮ್ಮೇನಹಳ್ಳಿ ಸಮೀಪ ಸೇರಿ ಒಟ್ಟು ಏಳು ಸ್ಥಳಗಳನ್ನು ಅಪಘಾತ ವಲಯಗಳು ಎಂದು ಗುರುತಿಸಿದೆ.

ಅನೇಕ ವರ್ಷಗಳಿಂದಲೂ ಈ ಸ್ಥಳದಲ್ಲಿ ನೂರಾರು ಜನರು ಅಪಘಾತಕ್ಕೆ ಬಲಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅಂಕಿ ಅಂಶ ಗಮನಿಸಿದಾಗ ಈ ಎಲ್ಲಾ ಸ್ಥಳಗಳಲ್ಲಿಯೂ ಅಪಘಾತಗಳು ನಾನಾ ಕಾರಣಗಳಿಗೆ ಇಳಿಮುಖವಾಗಿರುವುದು ಕಂಡು ಬರುತ್ತದೆ.

ಕಳೆದ ಎಂಟ್ಹತ್ತು ವರ್ಷಗಳ ಹಿಂದೆ ಬಳ್ಳಾರಿ ಮೈನ್ಸ್‌ ಲಾರಿಗಳ ಅಬ್ಬರದ ಓಡಾಟದಲ್ಲಿ ಹೆಚ್ಚಿನ ಅಪಘಾತ ನಡೆದದ್ದವು. ಹೆದ್ದಾರಿಯಲ್ಲಿ ಗಣಿ ಲಾರಿಗಳ ಸದ್ದು ಕಡಿಮೆಯಾದ ಮೇಲೆ ಆ್ಯಕ್ಸಿಡೆಂಟ್‌ ಇಳಿಮುಖವಾಗಿ ಸಾವು, ನೋವು ಸಹಜವಾಗಿಯೇ ಕಡಿಮೆಯಾಗಿದೆ.

2016ರಲ್ಲಿ 113 ಅಪಘಾತಗಳು ನಡೆದು 51 ಜನ ಮೃತರಾಗಿ 192 ಜನ ಗಾಯಗೊಂಡಿದ್ದರು. 2017ರಲ್ಲಿ ದೇವಸಮುದ್ರ ಸಮೀಪದಲ್ಲಿ ನಡೆದ ಲಾರಿ, ಆಟೋ ಹಾಗೂ ಟೆಂಪೋ ಟ್ರ್ಯಾವಲ್‌ಗಳ ಮಧ್ಯೆ ನಡೆದ ಭೀಕರ ಅಪಘಾತವೊಂದರಲ್ಲಿಯೇ 14 ಜನ ಬಲಿಯಾಗಿ ರಾಜ್ಯದ ಗಮನ ಸೆಳೆದಿತ್ತು. ಇದೇ ವರ್ಷ ಒಟ್ಟು 99 ಅಪಘಾತ ನಡೆದು 45 ಮಂದಿ, 2018ರಲ್ಲಿ ನಡೆದ 86 ಅಪಘಾತಗಳಲ್ಲಿ 34 ಮಂದಿ, 2019ರ ಮೇ ಅಂತ್ಯಕ್ಕೆ 8 ಮಂದಿ ಪ್ರಾಣ ಬಲಿ ಕೊಟ್ಟಿದ್ದಾರೆ.

ಈ ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣವನ್ನು ಕಂಡು, ಮಾಹಿತಿ ತಿಳಿದ ಪೊಲೀಸ್‌ ಅಧಿಕಾರಿಗಳೇ ಇಲ್ಲಿ ಕರ್ತವ್ಯಕ್ಕೆ ಆಗಮಿಸಲು ಹಿಂದೇಟು ಹಾಕುವಂತಿತ್ತು. ಗಣಿ ಲಾರಿಗಳ ಓಡಾಟ ಸ್ಥಗಿತ, ಪೊಲೀಸ್‌ ಇಲಾಖೆಯಿಂದ ಅಪಘಾತ ವಲಯದ ಫಲಕ ಪ್ರದರ್ಶನ, ಹೆದ್ದಾರಿ ಗಸ್ತು ವಾಹನದ ಓಡಾಟ ಇನ್ನಿತರೆ ಕಾರಣಗಳಿಂದ ಇತ್ತೀಚೆಗೆ ಅಪಘಾತಗಳು ಕಡಿಮೆಯಾಗಿವೆ.

ಈ ಹಿಂದೆ ನಡೆದಿದ್ದ ಅಪಘಾತಗಳಿಗೆ ಹೆದ್ದಾರಿಯಲ್ಲಿನ ತಿರುವು, ಇಳಿಜಾರು ಹಾಗೂ ಅವೈಜ್ಞಾನಿಕತೆ ಪ್ರಮುಖ ಕಾರಣ ಎನ್ನಲಾಗಿತ್ತು. ಕಳೆದ ಎರಡ್ಮೂರು ತಿಂಗಳಿನಿಂದ ಹಿರಿಯೂರಿನಿಂದ ಬಳ್ಳಾರಿವರೆಗೂ ಚತುಷ್ಪಥ ಕಾಮಗಾರಿ ಭರದಿಂದ ನಡೆಯುತ್ತಿದೆ. ಅನೇಕ ತಿರುವುಗಳನ್ನು ತೆರವುಗೊಳಿಸಿ ನೇರ ರಸ್ತೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಇನ್ನಷ್ಟು ಇಳಿಮುಖವಾಗಲಿದೆ ಎನ್ನುತ್ತಾರೆ ಚಾಲಕರು.

======

ಕೋಟ್‌

ಉತ್ತಮ ರಸ್ತೆ ನಿರ್ಮಾಣದಿಂದ ಅನೇಕ ಅಪಘಾತಗಳು ತಪ್ಪಲಿವೆ. ಇಲಾಖೆಯು ಈಗಾಗಲೇ ಈ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ನಿರ್ಮಿಸಿದೆ. ಪ್ರತಿ ವರ್ಷ ನಡೆಸುವ ರಸ್ತೆ ಸುರಕ್ಷ ತಾ ಸಪ್ತಾಹ ಕಾರ್ಯಕ್ರಮವೂ ಅಪಘಾತ ತಡೆಯಲು ಪ್ರಮುಖ ಪಾತ್ರವಹಿಸಿದೆ.

-ಎಂ.ಗೋಪಾಲನಾಯ್ಕ, ಸಿಪಿಐ, ಮೊಳಕಾಲ್ಮುರು.

=====

ಮೊದಲಿಗಿಂತ ಇತ್ತೀಚೆಗೆ ಅಪಘಾತಗಳು ಕಡಿಮೆಯಾಗಿವೆ. ಗಣಿ ಲಾರಿಗಳ ಯದ್ವಾತದ್ವಾ ಓಡಾಟದಿಂದ ಹೆಚ್ಚಿನ ಅಪಘಾತಗಳು ನಡೆಯುತ್ತಿದ್ದವು. ಆ ಭರಾಟೆ ಈಗ ಇಲ್ಲ. ನಾನು ಕಂಡಂತೆ ಪೊಲೀಸ್‌ ಇಲಾಖೆ ಪ್ರಚಾರ ನಡೆಸಿ ಅಪಘಾತ ತಡೆಗಟ್ಟಲು ಶ್ರಮಿಸಿದೆ.

-ದೊಡ್ಡೋಬಯ್ಯ, ರಾಯಪುರ(ಹೆದ್ದಾರಿ) ನಿವಾಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ