ಆ್ಯಪ್ನಗರ

ಮೀಸಲಾತಿಗಾಗಿ ಮಾದಿಗರ ಸರ್ವಪಕ್ಷ ಸಭೆ ಕರೆದ ಎಚ್‌.ಆಂಜನೇಯ, ಸಂಸದ ಎ.ನಾರಾಯಣಸ್ವಾಮಿ

ಸದಾಶಿವ ವರದಿ ಜಾರಿಗೆ ಒತ್ತಡ ಹಾಕುವ ಸಲುವಾಗಿ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಿ ಎಂದು ಒತ್ತಾಯಿಸುವ ಸಲುವಾಗಿ ಬಿಜೆಪಿ ಕಾಂಗ್ರೆಸ್‌ ಧುರೀಣರು ಒಂದಾಗಿ ಮಾದಿಗರ ಸರ್ವಪಕ್ಷ ಸಭೆ ಕರೆದಿದ್ದಾರೆ.

Vijaya Karnataka Web 3 Sep 2020, 1:35 pm
ಚಿತ್ರದುರ್ಗ: ಒಳ ಮೀಸಲು ಕುರಿತ ಸುಪ್ರೀಂ ಕೋರ್ಟ್‌ ಅಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸದಾಶಿವ ವರದಿ ಕೂಡಲೇ ಜಾರಿಗೆ ತರಲು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅಧಿವೇಶನಕ್ಕೂ ಮೊದಲೇ ಮಾದಿಗ ಸಮುದಾಯದ ಸರ್ವ ಪಕ್ಷದ ಮುಖಂಡರ ಸಭೆ ಆಯೋಜಿಸಲಾಗಿದೆ.
Vijaya Karnataka Web Narayanaswamy  h anjaneya


ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಾಜಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹಾಗೂ ಸಂಸದ ಎ.ನಾರಾಯಣಸ್ವಾಮಿ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿಈ ವಿಷಯ ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಅಭಿಪ್ರಾಯಗಳಿಗೆ ಪೂರಕವಾಗಿ ರಾಜ್ಯದಲ್ಲಿ ಸದಾಶಿವ ವರದಿ ಜಾರಿಗೆ ಒತ್ತಡ ಹಾಕಬೇಕು ಎನ್ನುವ ಅಂಶವನ್ನು ನಾವು ಚರ್ಚಿಸಿದ್ದೇವೆ. ಸರ್ವ ಪಕ್ಷದ ಮುಖಂಡರ ಸಭೆ ಕರೆದು ಸಮಾಲೋಚನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ಅಧಿವೇಶನಕ್ಕೆ ಮುನ್ನ ಬಿಜೆಪಿ ಶಾಸಕರ ಸಭೆಗೆ ಒತ್ತಡ, ಕುಂದುಕೊರತೆಗಳ ಬಗ್ಗೆ ಚರ್ಚೆ ಸಾಧ್ಯತೆ

ಈಗ ಇಬ್ಬರು ಸಂಸದರು, ಇಬ್ಬರು ಮಾಜಿ ಸಂಸದರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು, ಹದಿನೆಂಟು ಜನ ಮಾಜಿ ಶಾಸಕರು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಇದ್ದಾರೆ. ಎಲ್ಲರೂ ಸಭೆ ಸೇರಿ ಒಮ್ಮತದಿಂದ ಸಮಾಜದ ಹಿತ ಕಾಯಬೇಕು. ರಾಜಕೀಯ ಬೇರೆ, ಸಮಾಜದ ಹಿತ ಬಂದಾಗ ಎಲ್ಲರೂ ಒಂದಾಗಬೇಕು ಎನ್ನುವ ನಿಲುವಿಗೆ ಬಂದಿದ್ದೇವೆ. ಐತಿಹಾಸಿಕ ಒಗ್ಗಟ್ಟು ಪ್ರದರ್ಶಿಸಬೇಕಾದ ಸಂದರ್ಭ ಬಂದಿದೆ ಎಂದು ತಿಳಿಸಿದರು.

ಕೊರೊನಾ ಭೀತಿ: ವಿಧಾನ ಮಂಡಲ ಅಧಿವೇಶನಕ್ಕೂ 3 ದಿನ ಮೊದಲೇ ಸದಸ್ಯರಿಗೆ ಟೆಸ್ಟ್‌ ಕಡ್ಡಾಯ

ಪರಿಶಿಷ್ಟ ಜಾತಿಯಲ್ಲಿ ಮಾದಿಗರು ಸಿಂಹ ಪಾಲು ಇದ್ದೇವೆ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಬೇಕು ಎಂದು ಕಾಲು ಶತಮಾನದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಎಲ್ಲಪಕ್ಷಗಳಿಗೆ ನಮ್ಮ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಕನಿಕರ ಇದೆ. ಬೆಂಬಲ ನೀಡುವ ಭರವಸೆ ಸಹ ನೀಡಿವೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ನಮ್ಮ ಜನಾಂಗದ ಮೇಲೆ ಕರುಣೆ ತೋರಿ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿಸಂಸದ ಎ.ನಾರಾಯಣಸ್ವಾಮಿ, ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು, ಸದಸ್ಯ ಬಿ.ಪಿ.ಪ್ರಕಾಶ್‌ ಮೂರ್ತಿ ಇದ್ದರು.

ವಿಧಾನಸೌಧದಲ್ಲೇ ವಿಧಾನಮಂಡಲ ಅಧಿವೇಶನ, ಸಾರ್ವಜನಿಕರಿಗೆ ಪ್ರವೇಶ ಇಲ್ಲ

ಮಾದಿಗ ಜನರು ಹೆಚ್ಚಿದ್ದರೆ ಶೇ.6 ಮೀಸಲು ಕೊಡಿ
ಒಳ ಮೀಸಲಿಗೆ ಹೋರಾಟ ನಡೆಯುವ ಸಂದರ್ಭಗಳಲ್ಲಿ ಮಾದಿಗ ಸಮುದಾಯದ ಪರವಾಗಿ ಬೆಂಬಲಿಸುವ ಪಕ್ಷಗಳು ಅಧಿಕಾರ ಸಿಕ್ಕ ನಂತರ ಏನೂ ಕ್ರಮ ಜರುಗಿಸದೇ ಇರುವುದನ್ನು ನೋಡಿದ್ದೇವೆ. ಯಾವ ಪಕ್ಷವೂ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸುವ ಸಂಕಲ್ಪ ಮಾಡಿಲ್ಲ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ರಾಜ್ಯದಲ್ಲಿ ಎಡಗೈ ನವರಿಗಿಂತ ಬಲಗೈನವರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ ಎನ್ನುವ ತಪ್ಪು ಕಲ್ಪನೆ ಇದೆ. ಜನಸಂಖ್ಯೆ ಪ್ರಮಾಣ ಖಚಿತ ಪಡಿಸಿಕೊಳ್ಳಲು ಪೂರಕವಾಗಿರುವ ಅಧ್ಯಯನ ವರದಿಗಳನ್ನು ಪರಿಶೀಲಿಸಲಿ. ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆ ಇದ್ದರೆ ನಮಗೆ ಶೇ.6 ರಷ್ಟು ಕೊಡಲಿ. ಇಲ್ಲಅಂದರೆ ಶೇ.6 ರಷ್ಟು ಅವರೇ ತೆಗೆದುಕೊಳ್ಳಲಿ. ಉದ್ಯೋಗ, ಶಿಕ್ಷಣದಲ್ಲೂಅಷ್ಟೇ ನಾವು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಶೇ.6 ರಷ್ಟು ಮೀಸಲು ಬೇಡ ಎಂದರು.

ಮೀಸಲು ಹಂಚಿಕೆ ವಿಷಯದ ಕಾರಣಕ್ಕೆ ಪರಿಶಿಷ್ಟಜಾತಿ ಸಮುದಾಯಗಳ ನಡುವೆ ವಿನಾ ಕಾರಣದ ವೈಷಮ್ಯ, ಪೂರ್ವಾಗ್ರಹ ಬೇಡ ಎಂದು ನಾವು ಸ್ಪಷ್ಟ ನಿಲುವು ತಳೆದಿದ್ದೇವೆ. ಸದಾಶಿವ ವರದಿ ಜಾರಿಗೆ ಬಲಗೈ ಸಮುದಾಯದ ಬೆಂಬಲ ಪಡೆಯಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ