ನಾಯಕನಹಟ್ಟಿ : ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗೆ ಹಾಗೂ ಭದ್ರಾ ಮೇಲಂ್ದಡೆ ಯೋಜನೆ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬರ ಪರಿಹಾರ ವೀಕ್ಷ ಣೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಬೆಳೆದ ಫಸಲಿಗೆ ವೈಜ್ಞಾನಿಕ ಹಾಗೂ ಅದರೆ ಬೆಲೆಗೆ ತಕ್ಕಂತ ಪರಿಹಾರ ನೀಡುವುದಕ್ಕೆ ವಿಶೇಷ ಆದ್ಯತೆ ನೀಡಲಾಗುವುದು. ದೇಶಕ್ಕೆ ಅನ್ನ ನೀಡುವ ರೈತ ಬೀದಿ ಪಾಲಾಗುತ್ತಿರುವುದು ನಿಜಕ್ಕೂ ದುರಂತವಾಗಿದೆ ಎಂದರು.
''ದಿನ ಪತ್ರಿಕೆಗಳಲ್ಲಿ ನಿತ್ಯ ಧಾರಾವಾಹಿಗಳ ರೀತಿಯಲ್ಲಿ ಬರ ಪರಿಸ್ಥಿತಿ ವಿವರಿಸುತ್ತಿವೆ. ಮಾಧ್ಯಮಗಳಲ್ಲಿ ಬರದ ಭೀಕರತೆಯ ದೃಶ್ಯಗಳು ಕಂಡುಬರುತ್ತಿವೆ. ಹೀಗಿದ್ದರೂ ಸರಕಾರ ಬರವನ್ನು ನಿರ್ಲಕ್ಷಿಸುತ್ತಿದೆ. ರಾಜ್ಯದಲ್ಲಿ ಬರವಿಲ್ಲ ಕೇವಲ ಬಿಸಿಲು. ಯಾವುದೇ ಬೆಳೆ ಹಾನಿಯಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದ್ದಾರೆ. ಇದಕ್ಕೆ ಅವರದೇ ಪಕ್ಷ ದ ಜನಾರ್ಧನ ಪೂಜಾರಿ ಛೀಮಾರಿ ಹಾಕಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಇಲ್ಲಿಗೆ ಕಾಂಗ್ರೆಸ್ನ ನಿಯೋಗ ಬರ ಅಧ್ಯಯನಕ್ಕೆ ಬರಲಿದೆ. ಅವರಿಗೆ ಒಣಗಿದ ತೋಟಗಳನ್ನು ತೋರಿಸಿ, ವಾಸ್ತವ ಸ್ಥಿತಿಯ ಅರಿವು ಮೂಡಿಸಿ,'' ಎಂದು ರೈತರಿಗೆ ತಿಳಿಸಿದರು.
ಕೇಂದ್ರದಿಂದ ನೂತನ ಕೃಷಿ ನೀತಿ: ಕೇಂದ್ರ ಸರಕಾರ ಮುಂದಿನ ವರ್ಷದಿಂದ ನೂತನ ಕೃಷಿ ನೀತಿಯನ್ನು ಜಾರಿಗೊಳಿಸಲಿದೆ. ರೈತರು ಪಾವತಿಸಿರುವ ಪ್ರೀಮಿಯಂನಷ್ಟು ಪೂರ್ಣ ಪ್ರಮಾಣದ ಹಣವನ್ನು ನೀಡಲಿದೆ. ಹೋಬಳಿ ಮಟ್ಟದಲ್ಲಿ ಪರಿಹಾರ ನೀಡುವ ಪದ್ಧತಿ ಕೊನೆಯಾಗಲಿದೆ. ಇದಕ್ಕೆ ಬದಲಾಗಿ ಪ್ರತಿ ಸರ್ವೇ ನಂಬರ್ಗೆ ತಕ್ಕಂತೆ ಬೆಳೆಯ ಪೂರ್ಣ ಪ್ರಮಾಣದ ಪರಿಹಾರ ನೀಡಲಾಗುವುದು ಎಂದರು.
ಶಾಸಕರಾದ ಎಸ್.ತಿಪ್ಪೇಸ್ವಾಮಿ, ಜೆ.ಎಚ್.ತಿಪ್ಪಾರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ನರೇಂದ್ರನಾಥ್, ಕ್ಷೇತ್ರಾಧ್ಯಕ್ಷ ಆರ್.ಜಿ.ಗಂಗಾಧರಪ್ಪ, ಮುಖಂಡರಾದ ಎಂ.ವೈ.ಟಿ. ಸ್ವಾಮಿ, ಸೈಯದ್ ಅನ್ವರ್, ಸಿದ್ದೇಶ್ ಯಾದವ್, ವೆಂಕಟಸ್ವಾಮಿ, ರತ್ನಮ್ಮ, ಕೌನ್ಸಿಲರ್ಗಳಾದ ಮಹಾಂತೇಶ್, ಗಿರಿಜಮ್ಮ, ದೇವಾಲಯದ ಇಒ ಹಾಲಪ್ಪ ಮತ್ತಿತರರಿದ್ದರು.
-----------
ಅಧಿಕಾರಕ್ಕೆ ಬಂದರೆ ಭದ್ರಾ ನಿಶ್ಚಿತ : ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರಾತಿ ನೀಡಲಾಗಿದೆ. ಆದರೆ, ಇದರ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದೆ. ಜನರ ಆಶೀರ್ವಾದದಿಂದ ಮುಂದಿನ ಎರಡು ವರ್ಷದ ನಂತರ ಅಧಿಕಾರಕ್ಕೆ ಬಂದ ನಂತರ ಪೂರ್ಣಗೊಳಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ನೀರಾವರಿ ಯೋಜನೆಗಳ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಕೆರೆ ಕಟ್ಟೆಗಳಿಗೆ ನೀರು ಒದಗಿಸಿ ಜೀವ ನೀಡುವ ಉದ್ದೇಶ ಹೊಂದಿದ್ದಾರೆ. ನದಿಗಳ ಜೋಡಣೆಗಳ ಬಗ್ಗೆ ಪ್ರಧಾನಿ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂದು ಬಿಎಸ್ವೈ ತಿಳಿಸಿದರು.