ಚಿತ್ರದುರ್ಗ: ಮುರುಘಾ ಶರಣರ (Murugha Sharana) ವಿರುದ್ಧ ದಾಖಲಾಗಿದ್ದ ಎರಡನೇ ಪೋಕ್ಸೋ ಪ್ರಕರಣಕ್ಕೆ (POCSO case)ಸಂಬಂಧಿಸಿದಂತೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಿತ್ರದುರ್ಗ (Chitradurga) ಗ್ರಾಮಾಂತರ ಪೊಲೀಸರು ಜ.10ರಂದೇ ಚಾರ್ಜ್ ಶೀಟ್ ಸಲ್ಲಿಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಒಂದನೇ ಪೋಕ್ಸೋ ಪ್ರಕರಣದಲ್ಲಿ ಚಾರ್ಚ್ ಶೀಟ್ ಲೀಕ್ ಆಗಿದೆ ಎಂದು ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ಗೆ ಕೋರ್ಟ್ ನೋಟೀಸ್ ನೀಡಿತ್ತು. ಹೀಗಾಗಿ ಚಾರ್ಜ್ ಶೀಟ್ ನಂಬರ್ ಆದ ಬಳಿಕವೇ ಅಧಿಕೃತ ಮಾಹಿತಿ ಸಿಗಲಿದೆ. ಸಂತ್ರಸ್ತ ಪೋಷಕರೊಬ್ಬರಿಗೆ ಪೊಲೀಸರು ಕಳುಹಿಸಿದ ಪತ್ರ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿರುವ ಅಂಶ ಬಯಲಾಗಿದೆ.
ಮಠಾಧಿಪತಿ ಮಠದ ಆಸ್ತಿಯ ಮಾಲೀಕನಲ್ಲ: ಸರಕಾರದ ವಾದ
ಬೆಂಗಳೂರು: ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಅಧಿಕಾರಿ ಪಿ.ಎಸ್.ವಸ್ತ್ರದ್ ನೇಮಕವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಸರಕಾರ, ಮಠಾಧಿಪತಿ ಮಠದ ಆಸ್ತಿಯ ಮಾಲೀಕನಾಗಲು ಸಾಧ್ಯವಿಲ್ಲ. ಹಾಗಾಗಿ, ಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಿತ್ತು ಎಂದು ಹೇಳಿದೆ.
ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವ ಆದೇಶ ರದ್ದು ಕೋರಿ ಎಸ್ಜೆಎಂ ವಿದ್ಯಾಪೀಠದ ಅಧ್ಯಕ್ಷ ಹಾಗೂ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ಅರ್ಜಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ''ಮಧಿಠಾಧಿಪತಿ ಬಂಧನದಲ್ಲಿರುವುದರಿಂದ ಮಠದ ಆಡಳಿತ ನಿರ್ವಹಣೆ ಸಾಧ್ಯವಿಲ್ಲ. ಮುರುಘಾ ಶರಣರಿಗೆ ಜಾಮೀನು ಸಿಕ್ಕರೆ ಆನಂತರ ಸರಕಾರ ಆಡಳಿತಾಧಿಕಾರಿ ನೇಮಕ ನಿರ್ಧಾರ ಮರುಪರಿಶೀಲನೆ ಮಾಡಬಹುದು,’’ ಎಂದರು.
''ಮಠಾಧಿಪತಿ ಎಂದಿಗೂ ಮಠದ ಆಸ್ತಿಯ ಮಾಲೀಕನಾಗಲು ಸಾಧ್ಯವಿಲ್ಲ. ಮಠದ ಆಸ್ತಿಯ ನಿರ್ವಹಣೆ ಮಾತ್ರ ಮಠಾಧಿಪತಿಯ ಕರ್ತವ್ಯವಾಗಿರುತ್ತದೆ. ಮಠಾಧಿಪತಿ ಅನುಪಸ್ಥಿತಿಯಲ್ಲಿ ಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಿತ್ತು,'' ಎಂದು ಹೇಳಿದರು. ಸರಕಾರದ ವಾದ ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜ.25 ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲರು, ''ಒಂದು ವೇಳೆ ಮಠ ಮತ್ತು ಟ್ರಸ್ಟ್ ವ್ಯವಹಾರಗಳು ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲಎಂದಾದರೆ ಸಿವಿಲ್ ಪ್ರಕ್ರಿಯಾ ಸಂಹಿತೆ-1908ರ (ಸಿಪಿಸಿ) ಸೆಕ್ಷನ್ 92ರ ಅನುಸಾರ ಪರಿಹಾರ ಪಡೆಯಲು ಮುಕ್ತ ಅವಕಾಶಗಳಿತ್ತು. ಅದು ಬಿಟ್ಟು ಏಕಾಏಕಿ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಸಂವಿಧಾನಬಾಹಿರ,'' ಎಂದರು.