ಆ್ಯಪ್ನಗರ

ವೈದ್ಯರ ಸೇವೆಗೆ ಚಿರಋಣಿ.. ಆದ್ರೆ, ಸಮಾಜ ನಿಷ್ಕರುಣಿ..! ಕೊರೊನಾ ಗೆದ್ದವರ ಮನದ ಮಾತು..

ಕೊರೊನಾ ವೈರಸ್‌ ಸೋಂಕನ್ನು ಗೆದ್ದ ಚಿತ್ರದುರ್ಗದ ಯುವಕರೊಬ್ಬರು ವಿಜಯ ಕರ್ನಾಟಕ ವೆಬ್‌ನೊಂದಿಗೆ ತಮ್ಮ ಅನುಭವವನ್ನು ವಿವರಿಸಿದ್ದಾರೆ. ವೈದ್ಯರ, ನರ್ಸ್‌ಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಜೊತೆಯಲ್ಲೇ, ಸಮಾಜದ ಧೋರಣೆಯನ್ನೂ ನೆನೆದು ನೊಂದುಕೊಂಡಿದ್ದಾರೆ.

Vijaya Karnataka Web 10 Jul 2020, 11:15 pm
ಚಿತ್ರದುರ್ಗ: 'ಕೊರೊನಾ ಸೋಂಕಿಗೆ ತುತ್ತಾದ ಬಳಿಕ ಸಮಾಜ ನಡೆದುಕೊಂಡ ರೀತಿಯ ಬಗ್ಗೆ ನಮಗೆ ಬೇಸರವಿದೆ. ಸಮಾಜ ತಿಳಿದುಕೊಳ್ಳಬೇಕಾದ ವಿಷಯವೆಂದರೆ, ಯಾವ ವ್ಯಕ್ತಿ ಕೂಡ ಉದ್ದೇಶಪೂರ್ವಕವಾಗಿ ಸೋಂಕು ಅಂಟಿಸಿಕೊಳ್ಳುವುದಿಲ್ಲ ಹಾಗೂ ಬೇರೆಯವರಿಗೆ ಹರಡುವುದಿಲ್ಲ. ಸೋಂಕಿತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು' ಹೀಗೆ ಮಾತು ಆರಂಭಿಸಿದರು ಕೋವಿಡ್‌ ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಬಂದ ಕಾರ್ತಿಕ್‌..
Vijaya Karnataka Web coronavirus survivor describes his experience doctor nurse service and society mindset revealed
ವೈದ್ಯರ ಸೇವೆಗೆ ಚಿರಋಣಿ.. ಆದ್ರೆ, ಸಮಾಜ ನಿಷ್ಕರುಣಿ..! ಕೊರೊನಾ ಗೆದ್ದವರ ಮನದ ಮಾತು..


ಕೋವಿಡ್‌–19 ಸೋಂಕಿನಿಂದ ಗುಣಮುಖರಾಗಿ ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಚಿತ್ರದುರ್ಗದ ಹಿರಿಯೂರು ನಿವಾಸಿ ಕಾರ್ತಿಕ್‌ಗೆ ಸೋಂಕು ತಗುಲಿದ ಬಗ್ಗೆ ಅರಿವಿರಲಿಲ್ಲ. ತಮ್ಮದೇ ಆದ ಮೊಬೈಲ್‌ ಅಂಗಡಿ ಹೊಂದಿರುವ ಅವರ ಕುಟುಂಬದ ಎಲ್ಲರಿಗೂ ಕೋವಿಡ್‌ - 19 ಕಾಣಿಸಿಕೊಂಡಿತ್ತು. ತಂದೆ, ತಾಯಿ, 96 ವರ್ಷದ ಅಜ್ಜಿ ಹಾಗೂ ಯುವಕ ಕಾರ್ತೀಕ್‌.. ಎಲ್ಲರಿಗೂ ಕೊರೊನಾ ಕಾಣಿಸಿಕೊಂಡಿತ್ತು. ಇದೀಗ ಎಲ್ಲರೂ ಗುಣಮುಖರಾಗಿ ಸದ್ಯ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ಈ ನಡುವೆ, ತಮ್ಮ ಅನುಭವವನ್ನು ವಿಜಯ ಕರ್ನಾಟಕ ವೆಬ್‌ನೊಂದಿಗೆ ಹಂಚಿಕೊಂಡಿದ್ದಾರೆ. ವಿಜಯ ಕರ್ನಾಟಕ ವೆಬ್‌ನ ಮೈಸೂರು ವರದಿಗಾರ್ತಿ ಯಶಸ್ವಿನಿ ಎಂ.ಕೆ ನಡೆಸಿದ ಆನ್‌ಲೈನ್ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

​ಕಾರ್ತೀಕ್‌ ಅವರ ಕೊರೊನಾ ಅನುಭವ

'ಜಿಲ್ಲಾ ಆಸ್ಪತ್ರೆಯಲ್ಲಿ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ತಕ್ಷಣದಲ್ಲೇ ಒದಗಿಸುತ್ತಿದ್ದರು. ಬಿಸಿ ನೀರು, ಆಹಾರವನ್ನು ಕೇಳಿ, ಕೇಳಿ ಪೂರೈಸುತ್ತಿದ್ದರು. ವೈದ್ಯರು, ನರ್ಸ್‌ಗಳು ನಮ್ಮ ಜೀವ ಉಳಿಸಲು ಪಡುತ್ತಿರುವ ಕಷ್ಟ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮಗಾಗಿ ಅವರು ರಕ್ಷಣಾ ಕವಚ ಧರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನಮ್ಮನ್ನು ಉಳಿಸಲು ಕಷ್ಟಪಡುತ್ತಿರುವ ಅವರಿಗೆ ಒಳ್ಳೆಯದನ್ನು ಬಯಸಲು ನಾವೆಲ್ಲಾ ಪ್ರಾರ್ಥಿಸಬೇಕಿದೆ. ನಮಗೆ ಯಾವ ತೊಂದರೆಯೂ ಆಗಿಲ್ಲ. ನಮಗೆ ಕ್ವಾರಂಟೈನ್ ಶಿಕ್ಷೆ ಅಲ್ಲ. ಮುಂಜಾಗ್ರತೆ. ಹೊಸ ಜೀವನದ ಚೈತನ್ಯ ನೀಡಿದ ಸಮಯ ಅಷ್ಟೇ.'

​'ಮಾನಸಿಕ ಸ್ಥೈರ್ಯ ತುಂಬಾ ಮುಖ್ಯ'

'ನಾನು ಜೀವನದಲ್ಲೇ ಮೊದಲ ಬಾರಿಗೆ ಸರಿಯಾದ ಸಮಯಕ್ಕೆ ಊಟ ಮಾಡಿದೆ. ಅದೂ ಪೌಷ್ಟಿಕ ಆಹಾರ ಸೇವಿಸಿದೆ. ಪ್ರತ್ಯೇಕ ವಾಸದ ಮೂಲಕ ನಾನು ಕೊರೊನಾವನ್ನು ಸಮಾಜದಿಂದ ದೂರ ಇಡಬಹುದಾದರೆ, ಇದೊಂದು ದೊಡ್ದ ಸಾಮಾಜಿಕ–ಧರ್ಮ ಕಾರ್ಯ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಔಷಧಕ್ಕಿಂತ ಮಾನಸಿಕ ಸ್ಥೈರ್ಯವೇ ಮುಖ್ಯ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ನನಗೆ ವೈದ್ಯರು ಹಾಗೂ ನರ್ಸ್‌ಗಳು, ಸ್ನೇಹಿತರು ಕಾಳಜಿ ಹಾಗೂ ಪ್ರೀತಿ ತೋರಿಸಿದರು. ಬದುಕಿನಲ್ಲಿ ಜೀವನೋತ್ಸಾಹ ತುಂಬಿದರು. ಪರಿಣಾಮವಾಗಿ ನಾನಿಂದು ಸೋಂಕಿನಿಂದ ಗೆದ್ದು ಬಂದಿದ್ದೇನೆ. ಹೋರಾಡಿ ಜಯ ಸಾಧಿಸಿದ್ದೇನೆ.'

​'ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಾರೆ'

'ನನಗೆ ಸೋಂಕು ಕಾಣಿಸಿಕೊಂಡಾಗಿನಿಂದಲೂ ಸಮಯಕ್ಕೆ ಸರಿಯಾಗಿ ಊಟ ಮಾಡಿ, ಯೋಗ - ಧ್ಯಾನ ಮಾಡಿ, ಗೆಳೆಯರು ಸಂಬಂಧಿಕರ ಜತೆಗೆ ಮಾತನಾಡುತ್ತಿದ್ದೆ.. ಅವರೆಲ್ಲರ ಧೈರ್ಯ ನನ್ನನ್ನು ಇಂದು ಗುಣಮುಖನನ್ನಾಗಿಸಿದೆ. ಸೋಂಕಿಗೆ ತುತ್ತಾದ ಎಲ್ಲರಿಗೂ ಔಷಧ ನೀಡುವುದಿಲ್ಲ. ದೇಹಸ್ಥಿತಿ ಹಾಗೂ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಾರೆ. ನನಗೆ ಡಿಸ್ಚಾರ್ಜ್ ಆಗುವವರೆಗೂ ಇದೇ ರೀತಿ ಕ್ರಮವಿತ್ತು. ಈಗ ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ, ಮನೆಯಲ್ಲಿದ್ದೇನೆ. ಎಲ್ಲಿಯೂ ಕೂಡ ಕ್ವಾರಂಟೈನ್ ಅವಧಿ ಮುಗಿಯುವವರೆಗೂ ಹೊರಗೆ ತೆರಳುವಂತಿಲ್ಲ.'

​'ಸಮಾಜ ನೋಡಿದ ರೀತಿ ಸರಿಯಿರಲಿಲ್ಲ'

'ಸಮಾಜ ಮಾತ್ರ ನಮ್ಮನ್ನು ನೋಡುವ ರೀತಿ ಭಿನ್ನವಾಗಿತ್ತು. ನಾವಾಗಿ ಈ ಸೋಂಕನ್ನು ಕರೆದು ಬರೆಸಿಕೊಂಡಿರಲಿಲ್ಲ. ಅದು ಹೇಗೆ ಬಂತು ಅನ್ನೋದೇ ಗೊತ್ತಿಲ್ಲ. ಇದೀಗ ನಾವು ಸಂಪೂರ್ಣ ಗುಣಮುಖರಾಗಿದ್ದೇವೆ. ಹೀಗಾಗಿ, ಎಲ್ಲರಂತೆಯೇ ನಮ್ಮನ್ನೂ ಕಾಣಿ. ತಪ್ಪಿತಸ್ಥರನ್ನಾಗಿ ನೋಡಬೇಡಿ' ಎನ್ನುತ್ತಾರೆ ಕಾರ್ತೀಕ್..

ಸಂದರ್ಶನದ ವೇಳೆ ಕಾರ್ತೀಕ್‌ ಅವರು ಕಣ್ಣೀರಿಟ್ಟರು. ಗದ್ಗದಿತರಾಗಿ ತಮ್ಮ ಅನುಭವಗಳನ್ನು ಭಾವನಾತ್ಮಕವಾಗಿ ನಮ್ಮೊಂದಿಗೆ ಹಂಚಿಕೊಂಡರು. ವೈದ್ಯರು, ನರ್ಸ್‌ಗಳಿಗೆ ಕೃತಜ್ಞತೆ ಸಲ್ಲಿಸುವ ಜೊತೆಯಲ್ಲೇ, ಸಮಾಜದ ದೃಷ್ಟಿಕೋನಕ್ಕೂ ಬೇಸರ ವ್ಯಕ್ತಪಡಿಸಿದರು. ಇದೀಗ ಅವರ ಕುಟುಂಬ ಕೊರೊನಾ ಮುಕ್ತವಾಗಿದೆ. ಎಲ್ಲರೂ ನೂರ್ಕಾಲ ಸುಖವಾಗಿ ಬಾಳಲಿ ಅನ್ನೋದೇ ನಮ್ಮ ಆರೈಕೆ..

Video-ವೈದ್ಯರ ಸೇವೆಗೆ ಚಿರಋಣಿ.. ಆದ್ರೆ, ಸಮಾಜ ನಿಷ್ಕರುಣಿ..! ಕೊರೊನಾ ಗೆದ್ದವರ ಮನದ ಮಾತು..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ