ಆ್ಯಪ್ನಗರ

ನೀರು ಪೂರೈಕೆಗೆ ಖಾಲಿ ಕೊಡದ ಸದ್ದು

ಬೆಳಗಟ್ಟ ಗ್ರಾಪಂಗೆ ಸೇರಿದ ಹಾಯ್ಕಲ್‌, ಕೋಟೆಹಟ್ಟಿ, ಚಿನ್ನೂರು ತಿಪ್ಪಯ್ಯನಹಟ್ಟಿ, ಹಾಯ್ಕಲ್‌ ಗೊಲ್ಲರಹಟ್ಟಿ, ಹಳೆಚೂರಿ ಪಾಪಯ್ಯನಹಟ್ಟಿ, ಹೊಸ ಚೂರಿ ಪಾಪಯ್ಯನಹಟ್ಟಿಯ ನೂರಾರು ಮಹಿಳೆಯರು ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 28 Apr 2019, 5:00 am
ಚಿತ್ರದುರ್ಗ : ಬೆಳಗಟ್ಟ ಗ್ರಾಪಂಗೆ ಸೇರಿದ ಹಾಯ್ಕಲ್‌, ಕೋಟೆಹಟ್ಟಿ, ಚಿನ್ನೂರು ತಿಪ್ಪಯ್ಯನಹಟ್ಟಿ, ಹಾಯ್ಕಲ್‌ ಗೊಲ್ಲರಹಟ್ಟಿ, ಹಳೆಚೂರಿ ಪಾಪಯ್ಯನಹಟ್ಟಿ, ಹೊಸ ಚೂರಿ ಪಾಪಯ್ಯನಹಟ್ಟಿಯ ನೂರಾರು ಮಹಿಳೆಯರು ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web do not empty the water supply
ನೀರು ಪೂರೈಕೆಗೆ ಖಾಲಿ ಕೊಡದ ಸದ್ದು


ಇಡೀ ಪಂಚಾಯಿತಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಮೊದಲು ಟ್ಯಾಂಕರ್‌ನಲ್ಲಿ ಸರಬರಾಜು ಮಾಡುತ್ತಿದ್ದರು. ಕಳೆದ ಮೂರು ದಿನಗಳಿಂದ ಸರಬರಾಜು ನಿಲ್ಲಿಸಿದ್ದು, ಮಹಿಳೆಯರು ಪ್ರತಿ ಕ್ಷಣ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಂದ ಆಗಮಿಸಿದ್ದ ಮಹಿಳೆಯರು ಖಾಲಿಕೊಡಗಳನ್ನು ಪ್ರದರ್ಶಿಸಿ, ನೀರಿನ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೊಳವೆಬಾವಿಗಳಲ್ಲಿಯೂ ನೀರು ಬತ್ತಿ ಹೋಗಿರುವುದರಿಂದ ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಉಲ್ಬಣಿಸಿ, ಬಿರುಬೇಸಿಗೆಯ ದಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳು ಪರಿತಪಿಸುತ್ತಿವೆ. ಒಂದು ಕಡೆ ಕುಡಿಯುವ ನೀರಿನ ಸಮಸ್ಯೆ ಮತ್ತೊಂದು ಕಡೆ ಬಳಕೆ ನೀರಿನ ಸಮಸ್ಯೆಯಿಂದ ಮಹಿಳೆಯರು ಹೈರಾಣಾಗಿದ್ದಾರೆ ಎಂದರು.

ಇರುವ ಬೋರ್‌ವೆಲ್‌ಗಳಲ್ಲಿ ಅರ್ಧಗಂಟೆ, ಹತ್ತು ನಿಮಿಷ, ಐವತ್ತು ನೂರು ಕೊಡ ಮಾತ್ರ ನೀರು ಬರುತ್ತವೆ. ಇಷ್ಟು ನೀರು ಜನರ ಎಲ್ಲ ಅಗತ್ಯಗಳಿಗೆ ಸಾಲುವುದಿಲ್ಲ. ಹನಿ ಹನಿ ನೀರಿಗೂ ಪರದಾಡುವಂತಾಗಿದೆ. ಇಷ್ಟು ಎಲೆಕ್ಷನ್‌ ಭರಾಟೆಯಲ್ಲಿ ನಮ್ಮ ಸಮಸ್ಯೆ ಯಾರೂ ಕೇಳಿಸಿಕೊಳ್ಳೋದಿಲ್ಲ ಎಂದು ಸುಮ್ಮನಿದ್ದೆವು. ಈಗ ನಮಗೆ ನೀರು ಕೊಡಲೇಬೇಕು ಎಂದು ಪಟ್ಟು ಹಿಡಿದರು.

ಹೊಲ, ತೋಟದ ಜಮೀನುಗಳಿಗೆ ಹೋಗಿ ನೀರು ತರಬೇಕು. ಅದು ಕರೆಂಟ್‌ ಇದ್ದಾಗ ಹೋಗಬೇಕು. ಅದು ಯಾವಾಗ ಬರುತ್ತದೆಯೋ, ಯಾವಾಗ ಹೋಗುತ್ತದೆಯೋ ತಿಳಿಯುವುದಿಲ್ಲ. ರೈತರು ಸಹ ನೀರು ಬಳಕೆ ಮಾಡಿಕೊಳ್ಳಲು ಆಕ್ಷೇಪಿಸುತ್ತಾರೆ. ಗಂಡು ಮಕ್ಕಳು ಇರುವವರು ಹೋಗಿ ನೀರು ತರುತ್ತಾರೆ. ಆದರೆ, ಹೆಣ್ಣು ಮಕ್ಕಳೇ ಹೋಗಿ ನೀರು ತರುವುದು ಕಷ್ಟವಾಗಿದೆ ಎಂದರು.

ಮೂರು ನಾಲ್ಕು ತಿಂಗಳಿನಿಂದ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವವರಿಗೆ ಬಿಲ್‌ಪಾವತಿ ಮಾಡದ ಕಾರಣ, ಏಕಾಏಕಿ ನೀರು ಸರಬರಾಜು ನಿಲುಗಡೆ ಮಾಡಿದ್ದಾರೆ. ಇದರಿಂದ ಐದಾರು ಹಳ್ಳಿಗಳಲ್ಲಿ ಅಂತರ್ಜಲ ತೀವ್ರ ಕುಸಿದಿದ್ದು, ಕುಡಿಯುವ ನೀರೇ ಸಿಗುತ್ತಿಲ್ಲ' ಎಂದು ತಿಳಿಸಿದರು.

ಹಲವು ಬಾರಿ ಗ್ರಾಪಂಗೆ ಮನವಿ ಮಾಡಿದ್ದೇವೆ. ಫೆ.26, ಏ.2ರಂದು ಪ್ರತಿಭಟನೆ ಮಾಡಿದ್ದೇವೆ. ಇದನ್ನು ನೆನಪು ಮಾಡಿ ಜಿಪಂ ಸಿಇಒಗೂ ಮನವಿ ಸಲ್ಲಿಸಿದ್ದೇವೆ. ಇಷ್ಟಾದರೂ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯ ಸೂರಯ್ಯ, ರವಿಚಂದ್ರ, ಬೋರಯ್ಯ, ಹರೀಶ್‌, ಸುರೇಂದ್ರ, ರಾಧಮ್ಮ, ಬೋರಮ್ಮ, ಪಾಪಮ್ಮ, ಮೀನಾಕ್ಷ ಮ್ಮ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಪುರುಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

**

ಬಾಕ್ಸ್‌/-

ಕಿಡಿಗೇಡಿಗಳು ಕಾರಣ...


ಎಲ್ಲ ಗ್ರಾಮಗಳಲ್ಲಿ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಡಿಸಿ ಹಾಯ್ಕಲ್‌ಗೆ ಭೇಟಿ ನೀಡಿದಾಗ ಕೆಲವರು ಊರಿನಲ್ಲಿ ನೀರು ಬರುತ್ತಿದ್ದರೂ ಟ್ಯಾಂಕರ್‌ನಲ್ಲಿ ಬೋಗಸ್‌ ಸರಬರಾಜು ತೋರಿಸುತ್ತಿದ್ದಾರೆ ಎಂದು ದೂರು ನೀಡಿದ್ದರೆನ್ನಲಾಗಿದೆ. ಈ ಕುರಿತು ಪರಿಶೀಲಿಸುವಂತೆ ಡಿಸಿ ಹೇಳಿದ್ದರಿಂದ ಟ್ಯಾಂಕರ್‌ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ವಿಕಗೆ ತಿಳಿಸಿದರು.

15 ಲಕ್ಷ ಬಾಕಿ ಬರಬೇಕು...

ಟ್ಯಾಂಕರ್‌ ನೀರು ಸರಬರಾಜುದಾರ ವಿಶ್ವನಾಥರೆಡ್ಡಿಯವರನ್ನು ವಿಕ ಸಂಪರ್ಕಿಸಿದಾಗ 'ಇತ್ತೀಚೆಗೆ ಡಿಸಿ ಭೇಟಿ ನೀಡಿದಾಗ ಯಾರೂ ದೂರು ಸಲ್ಲಿಸಿದ್ದರು. ಡಿಸಿ ಜಿಪಿಎಸ್‌ ಅಳವಡಿಸಬೇಕು ಅಂಥ ಹೇಳಿದ್ದರು. ಇಷ್ಟೆಲ್ಲ ರಗಳಗೆ ಮಾಡಿಕೊಂಡು ನೀರು ಸರಬರಾಜು ಸ್ಥಗಿತಗೊಳಿಸಿದೆವು' ಎಂದು ಹೇಳಿದರು.

'ಈಗ ಜಿಲ್ಲಾಧಿಕಾರಿ ಕಚೇರಿಯಿಂದ ಕರೆ ಮಾಡಿ ನೀರು ಸರಬರಾಜು ಮಾಡಲು ಹೇಳಿದ್ದಾರೆ. ನನಗೆ ಡಿಸೆಂಬರ್‌ನಿಂದು ಇದುವರೆಗೂ ಟ್ಯಾಂಕರ್‌ ನೀರು ಸರಬರಾಜು ಮಾಡಿದ ಬಾಬ್ತು 12 ರಿಂದ 15 ಲಕ್ಷ ಹಣ ಬರಬೇಕು. ಖುದ್ದು ಡಿಸಿಯವರನ್ನೇ ಭೇಟಿ ಮಾಡಿ, ನಂತರ ಸರಬರಾಜು ಮಾಡುತ್ತೇವೆ' ಎಂದು ವಿವರಣೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ