ಆ್ಯಪ್ನಗರ

ಮಾರಿ ಕಣಿವೆಗೆ ಭದ್ರೆ ನೀರಿಗಾಗಿ ರೈತರ ಪ್ರತಿಭಟನೆ

ತಾಲೂಕಿನ ವಾಣಿ ವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಸ್ಥಗಿತಗೊಂಡಿರುವುದನ್ನು ಖಂಡಿಸಿ ಚಿಕ್ಕಮಗಳೂರಿನ ಬೆಟ್ಟದ ತಾವರೆಕೆರೆಯ 2ನೇ ಪಂಪ್‌ ಹೌಸ್‌ ಮುಂಭಾಗದಲ್ಲಿಹಿರಿಯೂರಿನ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 12 Oct 2019, 5:00 am
ಹಿರಿಯೂರು: ತಾಲೂಕಿನ ವಾಣಿ ವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಸ್ಥಗಿತಗೊಂಡಿರುವುದನ್ನು ಖಂಡಿಸಿ ಚಿಕ್ಕಮಗಳೂರಿನ ಬೆಟ್ಟದ ತಾವರೆಕೆರೆಯ 2ನೇ ಪಂಪ್‌ ಹೌಸ್‌ ಮುಂಭಾಗದಲ್ಲಿಹಿರಿಯೂರಿನ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web farmers protest for maree valley
ಮಾರಿ ಕಣಿವೆಗೆ ಭದ್ರೆ ನೀರಿಗಾಗಿ ರೈತರ ಪ್ರತಿಭಟನೆ


ವಾಣಿ ವಿಲಾಸ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್‌ ಮಾತನಾಡಿ, ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ವಾರ ಕಳೆದರೂ ಭದ್ರಾ ನೀರು ಇನ್ನೂ ವಿವಿ ಸಾಗರ ತಲುಪುತ್ತಿಲ್ಲ. ಅ.4ರ ಮಧ್ಯಾಹ್ನ ಆರಂಭವಾಗಿ ಇಂದಿನವರೆಗೂ ಕೇವಲ 24 ಗಂಟೆ ಮಾತ್ರ ನೀರು ಪಂಪ್‌ ಮಾಡಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ನಿರಂತರವಾಗಿ ನೀರು ಪಂಪ್‌ ಮಾಡಲಾಗಿದೆಎಣದು ಸುಳ್ಳು ಹೇಳುತ್ತಾರೆ. ವಾಸ್ತವವಾಗಿ ನೀರೆತ್ತಲು ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ಭದ್ರಾದಲ್ಲಿಸಾಕಷ್ಟು ನೀರಿದ್ದು, ವಿವಿ ಸಾಗರ ಜಲಾಶಯ ಸೇರದೆ ಡ್ಯಾಂನ ಹೆಚ್ಚುವರಿ ನೀರು ಸಮುದ್ರ ಸೇರುತ್ತಿದೆ. ವಿದ್ಯುತ್‌ ಸಂಪರ್ಕ, ಸರಬರಾಜು ನಿರಂತರವಾಗಿದೆ. ಯಂತ್ರಗಳು ಸಹ ಸುಸ್ಥಿತಿಯಲ್ಲಿವೆ. ಆದರೂ ಯಾವ ಕಾರಣಕ್ಕೆ ನೀರು ಎತ್ತುತ್ತಿಲ್ಲ? ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸುತ್ತಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯೂರು ತಾಲೂಕಿನಿಂದ ಅ.4ರಿಂದಲೂ ಸಾಕಷ್ಟು ಜನರು ತಂಡೋಪತಂಡವಾಗಿ ಬಂದು ಹೋಗುತ್ತಿದ್ದಾರೆ. ಆದರೂ ನೀರು ಮಾತ್ರ ಸರಿಯಾಗಿ ಹರಿಸುತ್ತಿಲ್ಲ. ಜತೆಗೆ ಯಾವುದೇ ಸ್ಪಷ್ಟ ಕಾರಣಗಳನ್ನು ತಿಳಿಸದೇ ರೈತರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಸುಳ್ಳು ಭರವಸೆ

ಭದ್ರಾ ನೀರು ವಿವಿ ಸಾಗರ ಜಲಾಶಯಕ್ಕೆ ಹರಿಸುವ ಸಂಬಂಧ ಅಧಿಕಾರಿಗಳ ನಡೆ ನೋಡಿದರೆ ನೀರು ತಲುವುದೇ ಕಷ್ಟವಾಗುವಂತಿದೆ. ಅವರು ಹೇಳಿದಂತೆ ಒಂದು ಬಾರಿಯೂ ನಡೆದುಕೊಂಡಿರುವ ಇತಿಹಾಸವೇ ಇಲ್ಲ. ಪ್ರಾಯೋಗಿಕವಾಗಿ ನೀರು ಹರಿಸುವುದಕ್ಕೆ ಈ ರೀತಿ ಸುಳ್ಳು ಭರವಸೆ ನೀಡಿ ಜನರ ದಿಕ್ಕು ತಪ್ಪಿಸುತ್ತಿರುವ ಇವರು ಮುಂದೆ ನಿಜವಾಗಿಯೂ ಮಾರ್ಚ್ವರೆಗೂ ನೀರು ಹರಿಸುತ್ತಾರೆ ಎಂಬ ನಂಬಿಕೆಯೇ ಇಲ್ಲದಂತಾಗಿದೆ. ಹೀಗಾದರೇ ಭದ್ರಾ ಯೋಜನೆಯ ಸಂಪೂರ್ಣ ಕಾಮಗಾರಿ ಮುಗಿಯುವುದಕ್ಕೇ ಎಷ್ಟು ವರ್ಷಗಳು ಕಳೆಯುತ್ತವೆಯೋ ಗೊತ್ತಿಲ್ಲಎಂದು ದೂರಿದರು.

ರೈತ ಮುಖಂಡರಾದ ಆರ್‌.ಕೆ.ಗೌಡ, ರಾಜೇಂದ್ರ, ರಘುನಾಯ್ಕ, ನಿವೃತ್ತ ಎಂಜಿನಿಯರ್‌ ಜಗನ್ನಾಥ್‌, ತಾಳವಟ್ಟಿ ಸುನಿಲ್‌, ಜಗದೀಶ್‌, ಕೃಷ್ಣಮೂರ್ತಿ, ಶಾಂತಕುಮಾರ, ಗೋಪಿ, ಷಣ್ಮುಗಂ, ವಿಜಯಕುಮಾರ್‌, ಲಕ್ಷತ್ರ್ಮಣ ನಾಯ್ಕ ಇತರರು ಭಾಗವಹಿಸಿದ್ದರು.

ಬಾಕ್ಸ್‌/ ತಾಂತ್ರಿಕ ತೊಡಕೇ ಕಾರಣ?

ಚಿತ್ರದುರ್ಗ:
ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಪಂಪಿಂಗ್‌ ಮಾಡುವಲ್ಲಿಕೆಲ ತಾಂತ್ರಿಕ ತೊಡಕುಗಳು ಉದ್ಭವಿಸಿದ್ದು, ಅವುಗಳ ಪರಿಹರಿಸಿಕೊಂಡು ನೀರು ಹರಿಸಲು ಯೋಜನಾ ಎಂಜಿನಿಯರ್‌ಗಳು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ವಿವಿ ಸಾಗರಕ್ಕೆ ನೀರು ಹರಿಸುವ ಕಾರ್ಯ ಪ್ರಯೋಗಾರ್ಥವಾಗಿದೆ. ಈ ಪ್ರಯೋಗ ಯಶಸ್ವಿಯಾದ ನಂತರವೇ ನಿರಂತರವಾಗಿ ನೀರು ಹರಿಯಲಿದೆ. ನೀರು ಪಂಪಿಂಗ್‌ ಮಾಡುವ ಬೃಹತ್‌ ಯೋಜನೆಗಳಲ್ಲಿಆರಂಭಿಕ ವ್ಯತ್ಯಯಗಳು ಸಾಮಾನ್ಯ. ಶುಕ್ರವಾರ ಮಧ್ಯಾಹ್ನದಿಂದ ಪುನಃ ನೀರನ್ನು ಪಂಪ್‌ ಮಾಡಲಾಗುತ್ತಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ