ಹೊಸದುರ್ಗ: ರೈತರು ಲಾಭದಾಯಕ ಬೆಳೆಯಾದ ರೇಷ್ಮೆ ಬೆಳೆದು ಆರ್ಥಿಕ ಸಬಲತೆ ಕಾಣಬಹುದಾಗಿದೆ ಎಂದು ಜಿಪಂ ಸದಸ್ಯ ಕೆ.ಅನಂತ್ ಹೇಳಿದರು.
ತಾಲೂಕಿನ ಓಬಳಾಪುರ ಗ್ರಾಮದಲ್ಲಿ ನಡೆದ ರೇಷ್ಮೆ ಕೃಷಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಓಬಳಾಪುರ ಗ್ರಾಮ ಹಾಗೂ ತಾಲೂಕಿನಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಇದು ಲಾಭದಾಯಕ ಬೆಳೆ ಆಗಿರುವುದರಿಂದ ಇನ್ನೂ ಹೆಚ್ಚಿನ ರೈತರು ರೇಷ್ಮೆ ಬೆಳೆಯಬೇಕು. ರೇಷ್ಮೆ ಇಲಾಖೆಯಿಂದ ಬರುವ ಸಾಕಷ್ಟು ಅನುದಾನ ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದರು.
ಚಿತ್ರದುರ್ಗ ಜಿಲ್ಲಾ ರೇಷ್ಮೆ ನಿರ್ದೇಶಕ ವಿಶ್ವನಾಥ್ ಮಾತನಾಡಿ, ರೈತರು ತಂತ್ರಜ್ಞಾನವನ್ನು ಉಪಯೋಗಿಸಿ ಒಬ್ಬ ರೈತ ಒಂದು ಎಕರೆ ಭೂಮಿಯಲ್ಲಿ ರೇಷ್ಮೆ ಬೆಳೆದರೆ ನಮ್ಮ ಸಂಬಳಕ್ಕಿಂತಲೂ ಅಧಿಕ ಸಂಪಾದನೆ ಪಡೆಯಬಹುದು. ಒಂದು ವರ್ಷಕ್ಕೆ ಎಕರೆಗೆ ಕನಿಷ್ಟ 4 ರಿಂದ 5 ಲಕ್ಷ ಆದಾಯ ಗಳಿಸಬಹುದು ಎಂದರು.
ಉತ್ತಮ ಬೆಳೆ ಬೆಳೆದಿರುವ ರೈತರಾದ ಧರ್ಮಸಿಂಗ್, ರೇಣುಕಯ್ಯ, ನಾಗರಾಜಪ್ಪರಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು. ರೈತರು ತಾಲೂಕು ರೇಷ್ಮೆ ಅಧಿಕಾರಿ ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಲಿಂಗರಾಜು, ಶಿವಣ್ಣ, ಪ್ರಗತಿಪರ ರೈತ ಮಲ್ಲೇಶ್ ಹಾಗೂ ಗ್ರಾಮಸ್ಥರಿದ್ದರು.