ಆ್ಯಪ್ನಗರ

ಎರಡು ತಿಂಗಳಲ್ಲಿ ಬೇಡಿಕೆಗಳು ಈಡೇರದಿದ್ದರೆ ಮತ್ತೆ ಹೋರಾಟ

ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳ ಮಾಡಲು ಸರಕಾರ ಎರಡು ತಿಂಗಳ ಕಾಲಾವಕಾಶ ಕೇಳಿದೆ. ಆ ನಂತರವೂ ನಮ್ಮ ಬೇಡಿಕೆ ಈಡೇರದಿದ್ದರೆ ಸೆ.9ರಿಂದ ನಮ್ಮ ಮುಂದಿನ ನಡೆಗೆ ಕರೆ ಕೊಡಲಾಗುವುದು ಹರಿಹರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.

Vijaya Karnataka 15 Jul 2019, 5:00 am
ಚಿತ್ರದುರ್ಗ : ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳ ಮಾಡಲು ಸರಕಾರ ಎರಡು ತಿಂಗಳ ಕಾಲಾವಕಾಶ ಕೇಳಿದೆ. ಆ ನಂತರವೂ ನಮ್ಮ ಬೇಡಿಕೆ ಈಡೇರದಿದ್ದರೆ ಸೆ.9ರಿಂದ ನಮ್ಮ ಮುಂದಿನ ನಡೆಗೆ ಕರೆ ಕೊಡಲಾಗುವುದು ಹರಿಹರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.
Vijaya Karnataka Web if the demands are not met within two months fight back
ಎರಡು ತಿಂಗಳಲ್ಲಿ ಬೇಡಿಕೆಗಳು ಈಡೇರದಿದ್ದರೆ ಮತ್ತೆ ಹೋರಾಟ


ನಗರದ ಕೋಟೆ ಮುಂಭಾಗವಿರುವ ಮಹಾರಾಣಿ ಕಾಲೇಜಿನ ವಾಲ್ಮೀಕಿ ಸಭಾಂಗಣದಲ್ಲಿ ಜಿಲ್ಲಾ ನಾಯಕ ಸಮಾಜದಿಂದ ಶೇ.7.5ರ ಮೀಸಲಾತಿ ಸಂಬಂಧವಾಗಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಭಾನುವಾರ ಆಯೋಜಿಸಿದ್ದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೇ.3ರಿಂದ 7.5ಕ್ಕೆ ಮೀಸಲಾತಿ ಹೆಚ್ಚಿಸಬೇಕು, ನಕಲಿ ಜಾತಿ ಪ್ರಮಾಣ ಪತ್ರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಬೇಕು, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಆದಿಕವಿ ವಾಲ್ಮೀಕಿ ಹೆಸರಿಡಬೇಕು, ರಾಜ್ಯದಲ್ಲಿ ಯಾವುದೇ ಪಕ್ಷ ದ ಸರಕಾರ ಬರಲಿ ನಮ್ಮ ಸಮುದಾಯದ ಕನಿಷ್ಟ ಮೂವರಿಗೆ ಹಾಗೂ ಕೇಂದ್ರದಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು, ಮದಕರಿ ನಾಯಕರ ಕಂಚಿನ ಪ್ರತಿಮೆಯನ್ನು ಐತಿಹಾಸಿಕ ಕೋಟೆ ಆವರಣದಲ್ಲಿ ಸ್ಥಾಪಿಸಬೇಕು, ಚಿತ್ರದುರ್ಗ ಜಿಲ್ಲೆಗೆ ಆದಷ್ಟು ಬೇಗ ಭದ್ರಾ ಮೇಲ್ದಂಡೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ನಮ್ಮ ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ರಾಜನಹಳ್ಳಿಯಿಂದ ರಾಜಧಾನಿವರೆಗೂ ಪಾದಯಾತ್ರೆ ನಡೆಸಿ, ಕಳೆದ ಜೂನ್‌ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಮ್ಮ ಸಮುದಾಯದ ಸಾವಿರಾರು ಮಂದಿ ಸೇರಿ ಸರಕಾರದ ಕಣ್ಣು ತೆರೆಸಿದಿರಿ. ಇದಕ್ಕೆ ಪೂರಕವಾಗಿ ಸಚಿವರಾದ ಸತೀಶ್‌ ಜಾರಕಿಹೊಳಿ ಮತ್ತು ತುಕರಾಂ ಅವರು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿದ್ದಾರೆ. ನಮ್ಮ ಹೋರಾಟಕ್ಕೆ ಸರಕಾರ ಸ್ಪಂದಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಒಂದು ಸಮಿತಿ ರಚಿಸಿ ವರದಿ ಕೊಡಲು ಸೂಚಿಸಿದ್ದಾರೆ. ಸರಕಾರ ಎರಡು ತಿಂಗಳ ಕಾಲಾವಕಾಶ ಕೇಳಿದೆ. ಅದರ ಜತೆ ನಾವು ಇನ್ನೂ ಹದಿನೈದು ದಿನ ಕಾಲಾವಕಾಶ ಕೊಡುತ್ತೇವೆ. ಆನಂತರವೂ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ನಮ್ಮ ಮುಂದಿನ ಹೋರಾಟ ರೂಪಿಸುತ್ತೇವೆ. ಹೋರಾಟದ ಸಂದರ್ಭದಲ್ಲಿ ನಮ್ಮ ಕೆಲವೊಂದು ಪದ ಬಳಕೆಗೆ ಅಂದೇ ವಿಷಾದ ವ್ಯಕ್ತಪಡಿಸಿದೇವು ಎಂದರು.

ಹರಿಹರದ ರಾಜನಹಳ್ಳಿಯಲ್ಲಿ 1998 ಫೆಬ್ರವರಿ 9ರಂದು ಮಠ ಸ್ಥಾಪನೆಯಾಯಿತು. ಹಾಗಾಗಿ ಶ್ರೀಮಠದ ಅಭಿವೃದ್ಧಿ ಹಾಗೂ ಸಮುದಾಯ ಏಳಿಗೆಗಾಗಿ ನಾವು ಯಾವುದೇ ಕಾರ್ಯಕ್ರಮ ಹಾಗೂ ಹೋರಾಟ ರೂಪಿಸಿದರೂ 9ನೇ ತಾರೀಖಿನಿಂದ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಎಸ್ಟಿ ಅಭಿವೃದ್ಧಿ ನಿಗಮದ ನಿವೃತ್ತ ವ್ಯವಸ್ಥಾಪಕ ಮೃತ್ಯುಜಯಪ್ಪ ಮಾತನಾಡಿ, ಕಳೆದ ಐದು ದಶಕಗಳಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಇಡೀ ಸಮುದಾಯ ಶ್ರೀಗಳ ಬೆಂಬಲಕ್ಕೆ ನಿಲ್ಲಬೇಕು. ಸಮುದಾಯದ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಹೋರಾಟದ ಕಿಚ್ಚು ಹಚ್ಚಿಸಬೇಕು. ಅವರನ್ನು ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್‌.ಜೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ.ಕಾಂತರಾಜ್‌, ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸದಾನಂದ, ತಾಲೂಕು ಅಧ್ಯಕ್ಷ ಡಾ.ಗುಡದೇಶ್ವರಪ್ಪ, ಹರ್ತಿಕೋಟೆ ವೀರೇಂದ್ರಸಿಂಹ, ತಿಪ್ಪೇಸ್ವಾಮಿ, ಸಿ.ಜಿ.ಶ್ರೀನಿವಾಸ್‌, ತಿಪ್ಪಯ್ಯ, ನಗರಸಭೆ ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ಸಿ.ಟಿ.ರಾಜೇಶ್‌, ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಮಧುಪಾಲೇಗೌಡ, ಮುಖಂಡರಾದ ಬೆಳಗಟ್ಟ ಸೋಮೇಂದ್ರ, ಬೆಳಗಟ್ಟ ಅಶೋಕ್‌, ರಾಘವೇಂದ್ರ, ಸುರೇಶ್‌, ಸರ್ವೆ ಬೋರಯ್ಯ, ಕೆ.ಓ.ಪ್ರಹ್ಲಾದ್‌ ಮತ್ತಿತರರಿದ್ದರು.

===

ಜಿಲ್ಲಾವಾರು ಜನಜಾಗೃತಿ ಸಭೆ

ಈಗಾಗಲೇ ಜಿಲ್ಲಾವಾರು ಜನಜಾಗೃತಿ ಸಭೆ ಆಯೋಜಿಸಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ದಾವಣಗೆರೆ, ಇಂದು ಚಿತ್ರದುರ್ಗದಲ್ಲಿ ಸಭೆ ನಡೆಸಲಾಗಿದೆ. ಜು.17ರಂದು ಶಿವಮೊಗ್ಗ, 18ರಂದು ಚಿಕ್ಕಮಗಳೂರು, 19ರಂದು ಹಾಸನ ಮತ್ತು ಕೊಡಗು, 20ರಂದು ಚಾಮರಾಜನಗರ, 21ರಂದು ಮೈಸೂರು, 22ರಂದು ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸಭೆ ಆಯೋಜಿಸಲಾಗುವುದು. ಆಗಸ್ಟ್‌ 2ರಿಂದ ಹಾವೇರಿ, ಗದಗ, ಕಾರವಾರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ