ಆ್ಯಪ್ನಗರ

ನಾರಾಯಣಸ್ವಾಮಿಗೆ ಭರ್ಜರಿ ಗೆಲುವು

ಕೋಟೆನಾಡು ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿಯ ಅಭ್ಯರ್ಥಿ ಎ. ನಾರಾಯಣಸ್ವಾಮಿ, ಕಾಂಗ್ರೆಸ್‌ನ ಸಂಸದ ಬಿ.ಎನ್‌. ಚಂದ್ರಪ್ಪರನ್ನು ಎಂಬತ್ತು ಸಾವಿರಕ್ಕೂ ಅಧಿಕ ಮತಗಳಿಂದ ಪರಾಭವ ಗೊಳಿಸಿದ್ದಾರೆ.

Vijaya Karnataka 24 May 2019, 5:00 am
ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿಯ ಅಭ್ಯರ್ಥಿ ಎ. ನಾರಾಯಣಸ್ವಾಮಿ, ಕಾಂಗ್ರೆಸ್‌ನ ಸಂಸದ ಬಿ.ಎನ್‌. ಚಂದ್ರಪ್ಪರನ್ನು ಎಂಬತ್ತು ಸಾವಿರಕ್ಕೂ ಅಧಿಕ ಮತಗಳಿಂದ ಪರಾಭವ ಗೊಳಿಸಿದ್ದಾರೆ.
Vijaya Karnataka Web narayanaswamy is the biggest win
ನಾರಾಯಣಸ್ವಾಮಿಗೆ ಭರ್ಜರಿ ಗೆಲುವು


ಮೈತ್ರಿಯ ಬಲದ ಕಾರಣಕ್ಕೆ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ನ ಸಂಸದ ಬಿ.ಎನ್‌.ಚಂದ್ರಪ್ಪ ಅನಿರೀಕ್ಷಿತ ಸೋಲು ಕಂಡಿದ್ದಾರೆ. ಬಿ.ಎನ್‌.ಚಂದ್ರಪ್ಪ 5,45,948 ಮತ ಪಡೆದರೆ, ಬಿಜೆಪಿಯ ಎ.ನಾರಾಯಣಸ್ವಾಮಿ 6,26,015 ಲಕ್ಷ ಮತ ಪಡೆದು 80,067 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಎ.ನಾರಾಯಣಸ್ವಾಮಿ 1815 ಅಂಚೆ ಮತ ಪಡೆದರೆ, ಚಂದ್ರಪ್ಪ 789 ಅಂಚೆ ಮತ ಪಡೆದರು. 32 ಅಂಚೆ ಮತಗಳು ಕುಲಗೆಟ್ಟಿದ್ದವು. ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ಪಕ್ಷಗಳು ಹಾಗೂ ಪಕ್ಷೇತರರು ಒಟ್ಟು 73,588 ಮತ ಪಡೆದಿದ್ದಾರೆ. ಒಟ್ಟು 12,43,269 ಮತ ಚಲಾವಣೆಯಾಗಿದ್ದವು.

ಮುನ್ನಡೆದ ಬಿಜೆಪಿ:


ಅಂಚೆ ಮತಗಳ ಎಣಿಕೆಯಿಂದ ಆರಂಭಿಸಿ ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೆ ಬಿಜೆಪಿಯ ಎ. ನಾರಾಯಣಸ್ವಾಮಿ ನಿರಂತರವಾಗಿ ಮುನ್ನಡೆ ಸಾಧಿಸುತ್ತಲೇ ಹೊರಟರು. ಕೆಲವೊಂದು ಸುತ್ತುಗಳಲ್ಲಿ ಲೀಡ್‌ ಓಟುಗಳ ಪ್ರಮಾಣ ಕೊಂಚ ವ್ಯತ್ಯಯವಾದದ್ದು ಹೊರತುಪಡಿಸಿದರೆ ನಿರಂತರವಾಗಿ ಮುನ್ನಡೆ ಸಾಧಿಸುತ್ತಲೇ ಬಂದರು.

ಆರಂಭಿಕ ಎಂಟು, ಹತ್ತು ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೂ, ಪಾವಗಡ ಮತ್ತು ಸಿರಾ ವಿಧಾನಸಭೆ ಕ್ಷೇತ್ರದ ಹಲವು ಸುತ್ತುಗಳ ಮತ ಎಣಿಕೆಯ ವಿವರ ಕಾಲಕಾಲಕ್ಕೆ ಅಪ್‌ಡೇಟ್‌ ಆಗದ ಕಾರಣ, ಒಂದಷ್ಟು ಅನಿಶ್ಚಿತತೆ ಇತ್ತು. ಪಾವಗಡ ಮತ್ತು ಸಿರಾ ತಾಲೂಕಿನ ಲೀಡ್‌, ಬಿಜೆಪಿಯ ಲೀಡ್‌ನ್ನು ಹಿಂದಿಕ್ಕ ಬಹುದೇನೋ ಎನ್ನುವ ಅಳುಕು ಇತ್ತು. ಆದರೆ, ಎಲ್ಲ ಕ್ಷೇತ್ರಗಳ ಹಲವು ಸುತ್ತುಗಳ ಎಣಿಕೆ ವಿವರ ದಾಖಲಾಗುತ್ತಾ ಹೋದಂತೆ ಬಿಜೆಪಿಯ ಗೆಲುವಿನ ದಾರಿ ಇನ್ನಷ್ಟು ಖಚಿತವಾಗುತ್ತಾ ಹೋಯಿತು.

ಮತ ಎಣಿಕೆಗೆ ವ್ಯವಸ್ಥೆ:

ಜಿಲ್ಲಾಡಳಿತದಿಂದ ಮತ ಎಣಿಕೆಗೆ ಸೂಕ್ತ ಬಂದೋಬಸ್ತ್‌ ನೀಡಿಲಾಗಿತ್ತು. ಮತ ಎಣಿಕೆ ಕೇಂದ್ರದ ಸುತ್ತಲೂ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಏಜೆಂಟರು ಹಾಗೂ ಅಧಿಕಾರಿಗಳಿಗೆ ಮೂರು ಹಂತದ ತಪಾಸಣೆ ನಡೆಸಿ, ಬಿಡುತ್ತಿದ್ದರು. ಭದ್ರತೆಗೆ ಸಿಆರ್‌ಪಿಎಫ್‌ನ ಮಹಿಳಾ ಯೋಧರನ್ನು ನಿಯೋಜಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

**

ಆರಂಭಿಕ ವಿಳಂಬ

ಬೆಳಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸ್ಟ್ರಾಂಗ್‌ ರೂಂನ್ನು ಓಪನ್‌ ಮಾಡಿಸಿದರು. ನಂತರ ಅಂಚೆ ಹಾಗೂ ಇವಿಎಂ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು. ಆರಂಭಿಕ ಮತ ಎಣಿಕೆ ಪ್ರಕ್ರಿಯೆ ಸುಗಮವಾಗಿ ನಡೆದರೂ, ಮತಗಳ ವಿವರ ಕ್ರೋಢೀಕರಿಸುವ ಪ್ರಕ್ರಿಯೆ ಆರಂಭಿಕ ಹಂತದಲ್ಲಿ ವಿಳಂಬವಾಯಿತು. ನಂತರದ ಹಂತಗಳಲ್ಲಿ ಸುಗಮವಾಗಿ ನಡೆಯಿತು. ಪಾವಗಡ ಮತ್ತು ಶಿರಾ ವಿಧಾನಸಭೆ ಕ್ಷೇತ್ರದ ಸುತ್ತಿನ ವಿವರ ಮಾತ್ರ ಕಾಲಕಾಲಕ್ಕೆ ಆನ್‌ಲೈನ್‌ಗೆ ಅಫ್‌ಡೇಟ್‌ ಆಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ