ಆ್ಯಪ್ನಗರ

ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ ವಿರೋಧ

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಬ್ಯಾಂಕ್‌ ನೌಕರರ, ಅಧಿಕಾರಿ ಸಂಘಟನೆಗಳ ಒಕ್ಕೂಟ ಹಾಗೂ ಕೆನರಾ ಬ್ಯಾಂಕ್‌ ಸ್ಟಾಫ್‌ ಫೆಡರೇಷನ್‌ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

Vijaya Karnataka 27 Dec 2018, 5:00 am
ಚಿತ್ರದುರ್ಗ : ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಬ್ಯಾಂಕ್‌ ನೌಕರರ, ಅಧಿಕಾರಿ ಸಂಘಟನೆಗಳ ಒಕ್ಕೂಟ ಹಾಗೂ ಕೆನರಾ ಬ್ಯಾಂಕ್‌ ಸ್ಟಾಫ್‌ ಫೆಡರೇಷನ್‌ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
Vijaya Karnataka Web opposition to the merger process of banks
ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ ವಿರೋಧ


ನಗರದ ಬಿ.ಡಿ ರಸ್ತೆಯಲ್ಲಿರುವ ಎಸ್‌ಬಿಐ ಶಾಖಾ ಕಚೇರಿ ಮುಂಭಾಗ ಜಮಾಯಿಸಿದ ಬ್ಯಾಂಕ್‌ ಅಧಿಕಾರಿಗಳು ಹಾಗೂ ನೌಕರರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರದಲ್ಲಿ ಎನ್‌ಡಿಎ ಸರಕಾರ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದ ಒಂದಲ್ಲಾ ಒಂದು ಕಾರಣಕ್ಕಾಗಿ ಬ್ಯಾಂಕಿಂಗ್‌ ವಲಯ ವಕ್ರದೃಷ್ಟಿಗೆ ಗುರಿಯಾಗುತ್ತಿದೆ. ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವುದಕ್ಕಾಗಿ ಹಾಗೂ ಕೇಂದ್ರ ಸರಕಾರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬ್ಯಾಂಕಿಂಗ್‌ ವಲಯವನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿರುವ ಎಲ್ಲ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳನ್ನು ಒಗ್ಗೂಡಿಸಿದರೂ ಜಾಗತಿಕ ಮಟ್ಟದ ಬ್ಯಾಂಕ್‌ಗಳ ಸಮಾನವಾಗಿ ನಿಲ್ಲಲು ಆಗುವುದಿಲ್ಲ. ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತು ಅದರ ಆರು ಅಧೀನ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದು ಆ ಬ್ಯಾಂಕಿಗೆ ಯಾವುದೇ ಲಾಭ ಆಗಲಿಲ್ಲ. ಪರಿಣಾಮ ನಾನಾ ಶಾಖೆಗಳನ್ನು ಮುಚ್ಚಲಾಯಿತು. ಅದರ ಮತ್ತು ಅವುಗಳ ಸುಸ್ತಿಸಾಲ ಅಧಿಕಗೊಂಡು ಭಾರತೀಯ ಸ್ಟೇಟ್‌ಬ್ಯಾಂಕ್‌ ನಷ್ಟ ಅನುಭವಿಸುವಂತೆ ಆಯಿತು ಎಂದು ಆಕ್ಷೇಪಿಸಿದರು.

ಬ್ಯಾಂಕ್‌ ನಷ್ಟದಿಂದ ಸಾವಿರಾರು ಬ್ಯಾಂಕ್‌ ನೌಕರರು, ಅಧಿಕಾರಿಗಳಿಗೆ ಉದ್ಯೋಗಕ್ಕೆ ಕುತ್ತು ಒದಗಿದೆ. ಮುಂದಿನ ಹಂತದಲ್ಲಿ ಬ್ಯಾಂಕ್‌ ಆಫ್‌ ಬರೋಡಾ, ದೇನಾ ಬ್ಯಾಂಕ್‌ ಮತ್ತು ಲಾಭದಲ್ಲಿರುವ ವಿಜಯ ಬ್ಯಾಂಕ್‌ಗಳ ವಿಲೀನ ಕೂಡ ಆರ್ಥಿಕತೆಯಲ್ಲಿ ತೊಡಕು ಅನುಭವಿಸಬೇಕಾಗಿ ಬರಬಹುದು. ನಿಧಾನವಾಗಿ ಕೇಂದ್ರ ಸರಕಾರ ಬ್ಯಾಂಕ್‌ಗಳ ನಷ್ಟದ ನೆಪವೊಡ್ಡಿ ಖಾಸಗಿಯವರಿಗೆ ವಹಿಸಿಕೊಡುವ ರಹಸ್ಯ ಕಾರ್ಯಕ್ರಮ ಹೊರತು ಬೇರೆನಿಲ್ಲ ಎಂದು ಆರೋಪಿಸಿದರು.

ಬ್ಯಾಂಕ್‌ಗಳ ನಷ್ಟ ಹಾಗೂ ಸುಸ್ತಿ ಸಾಲ ಹೆಚ್ಚಳಕ್ಕೆ ಕೇಂದ್ರ ಸರಕಾರದ ಅವೈಜ್ಞಾನಿಕ ಆರ್ಥಿಕ ನೀತಿಗಳು ಕಾರಣವೆ ಹೊರತು ಬ್ಯಾಂಕ್‌ ಅಧಿಕಾರಿ, ನೌಕರರು ಹೊಣೆಗಾರರಲ್ಲ. ಬ್ಯಾಂಕ್‌ಗಳ ಉನ್ನತ ಮಟ್ಟದ ಅಧಿಕಾರಿಗಳು ಆರ್ಥಿಕ ಅಪರಾಧಗಳನ್ನು ಮಾಡಿ ಸಾವಿರಾರು ಕೋಟಿ ಕೆಟ್ಟ ಸಾಲಗಳನ್ನು ಕೊಟ್ಟು ಬ್ಯಾಂಕ್‌ಗಳು ನಷ್ಟ ಅನುಭವಿಸಲು ಕಾರಣರಾಗಿದ್ದಾರೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕ ಬ್ಯಾಂಕ್‌ಗಳಿಗೆ ಅಗತ್ಯ ಬಂಡವಾಳ ಒದಗಿಸಬೇಕು ಎಂದು ಒತ್ತಾಯಿಸಿದರು.

ಬಲಿಷ್ಟ ಕಾನೂನುಗಳನ್ನು ಜಾರಿಗೊಳಿಸಿ ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದ ಶ್ರೀಮಂತ ಉದ್ಯಮಿಗಳಿಂದ ಸಾಲ ವಸೂಲಾತಿ ಮಾಡಬೇಕು. ತಪ್ಪಿದಲ್ಲಿ ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸಬೇಕು. ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯ ಒದಗಿಸಲು ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಇತರೆ ಬ್ಯಾಂಕ್‌ಗಳ ಆಯ - ವ್ಯಯ (ಬ್ಯಾಲೆನ್‌ ಶೀಟ್‌) ಪಟ್ಟಿಯನ್ನು ಸಿಎಜಿ ಆಡಿಟ್‌ಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ಬ್ಯಾಂಕ್‌ಗಳಿಗೆ ಬೇಸಲ್‌ (ಆಉಖಉಔ) ನಿಯಮ ಅನ್ವಯಿಸುವುದನ್ನು ನಿಲ್ಲಿಸಬೇಕು. ರಾಷ್ಟ್ರೀಕೃತ ಸಾರ್ವಜನಿಕ ಬ್ಯಾಂಕ್‌ಗಳನ್ನು ಸುಭದ್ರಗೊಳಿಸಬೇಕು. ಬ್ಯಾಂಕ್‌ಗಳು ಜನ ಸಾಮಾನ್ಯರಿಗೋಸ್ಕರ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ದೇಶದಲ್ಲಿ ಹೆಚ್ಚು ಹೆಚ್ಚು ಬ್ಯಾಂಕ್‌ ಶಾಖೆಗಳನ್ನು ತೆರೆದು ದೇಶದ ಜನರು ಬ್ಯಾಂಕ್‌ ಖಾತೆ ಹೊಂದುವುದು ಪ್ರಜೆಗಳ ಮೂಲಭೂತ ಹಕ್ಕಾಗಬೇಕು. ಬ್ಯಾಂಕ್‌ ಸಾಲ-ಸೌಲಭ್ಯ, ಕೃಷಿ, ಕೃಷಿಯೇತರ, ಸಣ್ಣ ಕೈಗಾರಿಕೆಗಳು ಮತ್ತು ಆದ್ಯತಾ ವಲಯಗಳಿಗೆ ಹೆಚ್ಚು ದೊರಕುವಂತಾಗಬೇಕು. ಕೃಷಿಕರು ಬ್ಯಾಂಕ್‌ಗಳ ಸಹಾಯದಿಂದ ಆರ್ಥಿಕವಾಗಿ ಸಧೃಡರಾಗಬೇಕು ಎಂದು ಒತ್ತಾಯಿಸಿದರು.

ಶ್ರೀಧರನಾಯಕ, ಡಿ.ಟಿ.ಮಂಜುನಾಥ್‌, ಟಿ.ಸಿ.ಪಿ. ವೀರೇಶ್‌, ಕೆ.ಎಸ್‌.ಪ್ರಕಾಶ್‌, ಜೆ.ಎಸ್‌.ವಿಶ್ವನಾಥ್‌, ದುಗ್ಗಪ್ಪ, ಅರುಣ್‌ ಸೇರಿದಂತೆ ನಾನಾ ಬ್ಯಾಂಕ್‌ ಅಧಿಕಾರಿ, ನೌಕರರು ಪ್ರತಿಭಟನೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ