ಆ್ಯಪ್ನಗರ

ವಾಲ್ಮೀಕಿ ಸಮಾಜ ನಿರ್ಲಕ್ಷಿಸಿದರೆ ಪ್ರತಿಭಟನೆ ಅನಿವಾರ್ಯ: ಸರಕಾರಕ್ಕೆ ಸ್ವಾಮೀಜಿ ಎಚ್ಚರಿಕೆ

ಜನಾಂಗವನ್ನು ಪ್ರತಿನಿಧಿಸುವ 15 ಶಾಸಕರು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರನ್ನು ಭೇಟಿ ಮಾಡಿ ಈಗಿರುವ ಶೇ. 3ರ ಮೀಸಲಾತಿಯನ್ನು ಶೇ. 7.5 ಕ್ಕೆ ಹೆಚ್ಚಿಸುವುದು ಆದ್ಯತೆಯ ವಿಷಯವಾಗಿದೆ ಎಂದು ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.

Vijaya Karnataka 14 Dec 2022, 2:26 pm
ನಾಯಕನಹಟ್ಟಿ (ಚಿತ್ರದುರ್ಗ): ನಾಯಕ ಜನಾಂಗವನ್ನು ಸರಕಾರಗಳು ನಿರ್ಲಕ್ಷಿಸಿದರೆ ಪ್ರತಿಭಟನೆ ಅನಿವಾರ್ಯ ಎಂದು ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
Vijaya Karnataka Web Prasannananda Swamiji


ಪಟ್ಟಣದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ 50 ರಿಂದ 60 ಲಕ್ಷ ವಾಲ್ಮೀಕಿ ಜನಾಂಗದ ಜನರಿದ್ದಾರೆ. ವಿಧಾನಸಭೆಗೆ 15 ಶಾಸಕರು ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ. ಆದರೆ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿನ ಜನಾಂಗದ ಜನರು ಮೂರು ರಾಜಕೀಯ ಪಕ್ಷಗಳಲ್ಲಿ ಹಂಚಿಕೆಯಾಗಿದ್ದಾರೆ. ಹೀಗಾಗಿ ಒಗ್ಗಟ್ಟು ಕಷ್ಟವಾಗಿದೆ. ಜನಾಂಗದ ಹೆಸರಿನಲ್ಲಿ ಆಯ್ಕೆಯಾಗಿರುವ ಶಾಸಕರು ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ. ಹೀಗಾಗಿ ವೈಯಕ್ತಿಕವಾಗಿ ಇಡೀ ರಾಜ್ಯಾದ್ಯಾಂತ ಓಡಾಟ ನಡೆಸಿ, ಸಂಘಟನೆಯನ್ನು ಮುಂದುವರಿಸಿದ್ದೇನೆ. ಮೊದಲನೆಯ ವಾಲ್ಮೀಕಿ ಜಾತ್ರೆಗೆ ಜನಪ್ರತಿನಿಧಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನಾಂಗದ ಜನರು ಹಣ ನೀಡಿದ್ದಾರೆ. ಕಳೆದ ವರ್ಷದ ಜಾತ್ರೆಗೆ ರಾಜ್ಯದ ಜನಾಂಗದ ಜನರು ಉದಾರವಾಗಿ 3 ಕೋಟಿ ರೂ.ಗಳನ್ನು ನೀಡಿದ್ದಾರೆ. ಚಳ್ಳಕೆರೆ ತಾಲೂಕಿನಿಂದ 5 ಲಕ್ಷ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ವಾಲ್ಮೀಕಿ ಜನಾಂಗದಲ್ಲಿ ಕೇವಲ ಶೇ. 10ರಷ್ಟು ಜನರು ಮಾತ್ರ ಸ್ಥಿತಿವಂತರಾಗಿದ್ದಾರೆ. ಉಳಿದ ಶೇ. 90ರಷ್ಟು ಜನರು ಅತ್ಯಂತ ಕಷ್ಟದಲ್ಲಿದ್ದಾರೆ," ಎಂದರು.

ಬೇಡಿಕೆಗಳು

ಜನಾಂಗವನ್ನು ಪ್ರತಿನಿಧಿಸುವ 15 ಶಾಸಕರು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರನ್ನು ಭೇಟಿ ಮಾಡಿ ಈಗಿರುವ ಶೇ. 3ರ ಮೀಸಲಾತಿಯನ್ನು ಶೇ. 7.5 ಕ್ಕೆ ಹೆಚ್ಚಿಸುವುದು ಆದ್ಯತೆಯ ವಿಷಯವಾಗಿದೆ. ಹಂಪಿ ವಿಶ್ವವಿದ್ಯಾನಿಲಯಕ್ಕೆ ವಾಲ್ಮೀಕಿ ಹೆಸರಿಡಬೇಕು. ಜನಾಂಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಅಯೋಧ್ಯೆಯಲ್ಲಿ ಶ್ರೀರಾಮನ ಜತೆಗೆ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಮುಖಂಡರಾದ ಪಟೇಲ್‌ ಜಿ.ಎಂ., ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಜಿ. ತಿಪ್ಪೇಸ್ವಾಮಿ, ಕೌನ್ಸಿಲರ್‌ಗಳಾದ ಎನ್‌. ಮಹಾಂತಣ್ಣ, ನಾಗರಾಜ್‌, ಟಿ. ಬಸಣ್ಣ, ಮುಖಂಡರಾದ ಹರ್ತಿಕೋಟೆ ವೀರೇಂದ್ರ ಸಿಂಹ, ಸಿಪಿಐ ಉಮೇಶ್‌ ನಾಯಕ, ಪಿಎಸ್‌ಐ ರಘುನಾಥ್‌, ಓಬಣ್ಣ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ