ಚಿತ್ರದುರ್ಗ: ಜನಸ್ಪಂದನದಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದಂತೆ ಬರುವ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಾಲಬದ್ಧ ಮಿತಿಯಲ್ಲಿ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು. ಯಾರೊಬ್ಬರೂ ಹೊಣೆಗಾರಿಕೆ ಯಿಂದ ನುಣುಚಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಸಭೆಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳಿಗೆ ಇಲ್ಲಿಂದ ಸ್ವೀಕೃತಿಯನ್ನು ನೀಡಲಾಗುತ್ತದೆ. ಇಲ್ಲಿಗೆ ಸಲ್ಲಿಸಲಾಗಿದೆ ನನಗೇನು ಸಂಬಂಧ ಎನ್ನುವ ರೀತಿಯಲ್ಲಿ ವರ್ತಿಸದೆ ತಮ್ಮ ಇಲಾಖೆಗಳಿಗೆ ಸಂಬಂಧಿಸಿಂತೆ ಯಾವುದೇ ಅರ್ಜಿಗಳು ಬೇರೆ ಇಲಾಖೆಗಳಿಂದಲೂ ಬಂದರೆ ಅದರ ಮೇಲೆ ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದರು.
ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳಲ್ಲಿ ್ಲ 80 ಅರ್ಜಿಗಳು ಬಾಕಿುದ್ದು ಯಾವ ಇಲಾಖೆಯಲ್ಲಿ ಹೆಚ್ಚು ಅರ್ಜಿಗಳು ಬಾಕಿ ಇವೆ ಅವುಗಳನ್ನು ಅದ್ಯತೆ ಮೇಲೆ ವಿಲೇಪಡಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಮಾ.13 ರಂದು ಜರುಗಿದ ಜನಸ್ಪಂದನ ಸಭೆಗೆ ನಗರ, ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಭೂಮಾಪನ ಇಲಾಖೆ, ಕೃಷಿ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಪಂ, ಗ್ರಾಪಂಗಳಿಗೆ ಸಂಬಂಧಿಸಿದಂತೆ ಒಟ್ಟು 55 ಅರ್ಜಿಗಳು ಸಲ್ಲಿಕೆಯಾಗಿದ್ದು ಅವುಗಳಿಗೆ ಸ್ವೀಕೃತಿ ಪತ್ರ ನೀಡಿ ಕಳುಹಿಸಿ ಕೊಡಲಾಗಿದೆ.
ಅನುದಾನ ಬಳಕೆಯಾಗುತ್ತಿಲ್ಲ: ಗ್ರಾಪಂಗಳಲ್ಲಿ ವಿಕಲಚೇತನರಿಗಾಗಿ ಮೀಸಲಿರುವ ಶೇ 3 ರ ಅನುದಾನವನ್ನು ವಿಕಲಚೇತನರ ಕಲ್ಯಾಣಕ್ಕೆ ಬಳಸುತ್ತಿಲ್ಲ. ಬಹುತೇಕ ಗ್ರಾಪಂಗಳಲ್ಲಿ ಈ ಅನುದಾನದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅನುದಾನ ಮೀಸಲಿಟ್ಟಿರುವ ಉದ್ದೇಶವೇ ಈಡೇರುತ್ತಿಲ್ಲ...,
ಇದು ಜಿಲ್ಲಾ ವಿಕಲಚೇತನರ ಒಕ್ಕೂಟದ ಉಪಾಧ್ಯಕ್ಷ ಗೌರಸಮುದ್ರ ಮಂಜುನಾಥ್ ಅನಿಸಿಕೆ. ಎಸ್ಟಿ ಕಾರ್ಪೋರೇಶನ್ನಲ್ಲಿ ಎರಡು ವರ್ಷ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿಯೂ ಆಯ್ಕೆಯಾಗದ ಕಾರಣ ಮಂಗಳವಾರ ಜನಸ್ಪಂದನದಲ್ಲಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ಆಗಮಿಸಿದ್ದ ಮಂಜುನಾಥ್ ವಿಕದೊಂದಿಗೆ ತನ್ನ ಅಸಮಾಧಾನ ತೋಡಿಕೊಂಡರು.
ರೇಷÜನ್ ಅಂಗಡಿ ಇಟ್ಟುಕೊಳ್ಳಲು ಸಾಲ ಬೇಕೆಂದು ಕಳೆದ ವರ್ಷವೇ ಅರ್ಜಿ ಸಲ್ಲಿಸಿದ್ದೆ. ಆಗ ಆಯ್ಕೆ ಯಾಗಲಿಲ್ಲ. ಈ ಬಾರಿ ಕೂಡಾ ಸಲ್ಲಿಸಿದ್ದೆ. ಈಗಲೂ ಅದೇ ಸ್ಥಿತಿ. ಜಿಲ್ಲಾ ಅಧಿಕಾರಿ ಆಗಿದ್ದ ವೆಂಕಟೇಶ್ ಸಾಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು. ಈಗ ಅವರು ವರ್ಗಾವಣೆ ಆಗಿದ್ದಾರೆ. ಹೊಸಬರ ಬಳಿ ಮತ್ತೆ ಎಲ್ಲ ಹೊಸದಾಗಿ ಹೇಳಬೇಕು. ಅದಕ್ಕಾಗಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಬಂದಿದ್ದೇನೆ ಎಂದರು.
ಹದಿನಾಲ್ಕನೇ ಹಣಕಾಸಿನಲ್ಲಿ ವಿಕಲ ಚೇತನರ ಕಲ್ಯಾಣಕ್ಕೆಂದು ಕೋಟ್ಯಂತ ಹಣ ಬರುತ್ತದೆ. ಅದನ್ನು ಸಮಪರ್ಕವಾಗಿ ನಮಗಾಗಿಯೇ ಬಳಸಿದರೆ ನಮಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ, ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಕಾಳಜಿವಹಿಸುತ್ತಿಲ್ಲ. 'ನೋಡಿ, ಎರಡೂ ಕಣ್ಣು ಕಾಣುವುದಿಲ್ಲ. ಅಷ್ಟು ದೂರದಿಂದ ಬಂದಿದ್ದೇನೆ' ಎಂದು ಬೇಸರ ವ್ಯಕ್ತಪಡಿಸಿದರು.
ಚಿಕ್ಕಪ್ಪನಹಳ್ಳಿಯ ರಮೇಶ್, ಮಾರಪ್ಪ, ಚಂದ್ರಪ್ಪ ಮತ್ತಿತರರು ಸಾಗುವಳಿ ಚೀಟಿ ಕೊಡುವಂತೆ ಕೋರಿ ಅರ್ಜಿ ಹಿಡಿದು ಬಂದಿದ್ದರು. ಎಲ್ಲರಿಗೂ ಅರ್ಜಿ ಕೊಟ್ಟಿದ್ದೇವೆ. ನಮ್ಮಪ್ಪಂದಿರ ಕಾಲದಿಂದ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಆದರೆ, ಹಕ್ಕುಪತ್ರ ಮಾತ್ರ ಸಿಗುತ್ತಿಲ್ಲ. ಹಕ್ಕುಪತ್ರ ಸಿಕ್ಕಲ್ಲಿ ಜಮೀನು ಅಭಿವೃದ್ದಿಗೆ ಅನುಕೂಲ ಆಗುತ್ತದೆ ಎಂದರು.
'ನಾವು ಸಕಾಲದಲ್ಲಿ ಸೊಸೈಟಿ, ಬ್ಯಾಂಕ್ಗಳಿಗೆ ಫಸಲ್ ಬಿಮಾ ಯೋಜನೆಯಡಿ ಪ್ರೀಮಿಯಂ ಕಟ್ಟಿದ್ದರೂ ವಿಮೆ ಹಣ ಬಂದಿಲ್ಲ. ಇನ್ಶೂರೆನ್ಸ್ ಕಂಪನಿಗಳು ವಿಳಂಬವಾಗಿ ಪ್ರೀಮಿಯಂ ಹಣ ಪಾವತಿಸಿದ್ದರಿಂದ ವಿಮೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಬ್ಯಾಂಕ್ನ ಅಧಿಕಾರಿಗಳು ಮಾಡಿದ ತಪ್ಪಿಗೆ ನಮಗೇಕೇ ಶಿಕ್ಷೆ?' ಎಂದು ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕಾಲುವೆ ರಗಳೆ: ನಗರದಲ್ಲಿರುವ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕೆಂದು 2015 ರಲ್ಲೇ ಮನವಿ ಕೊಟ್ಟಿದ್ದೆವು. ಇದುವರೆಗೂ ಆ ಕೆಲಸ ಆಗಿಲ್ಲ. ಕೆಲವು ಕಡೆ ರಾಜಕಾಲುವೆಗಳನ್ನು ಒತ್ತುವರಿ ಮಾಡಿ ನಿವೇಶನಗಳನ್ನು ವಿಂಗಡಿಸಿ, ಮಾರಾಟ ಮಾಡಲಾಗಿದೆ. ಖಾತೆ ಸಹಾ ಮಾಡಿಕೊಟ್ಟಿ ದ್ದಾರೆ. ಇದು ಗಂಭೀರ ಅಪರಾಧ. ಹದಿನಾರು ಅಡಿ ಇರಬೇಕಾದ ರಾಜಕಾಲುವೆ ಒತ್ತುವರಿ ಮಾಡಿ ನಾಲ್ಕು ಅಡಿ ರಾಜಕಾಲುವೆ ಮಾಡಲಾಗಿದೆ. ಹೊಸದಾಗಿ ಕಟ್ಟಿಸಿರುವ ಮನೆಗಳ ಕೆಡವಲು ಸಾಧ್ಯವೇ? ಮೊನ್ನೆ ಮಳೆಬಂದಾಗ ಏನೆಲ್ಲ ಅದ್ವಾನ ಆಯಿತು. ಅಧಿಕಾರಿಗಳೇಕೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಜೈ ಹಿಂದ್ ರಕ್ಷಣಾ ವೇದಿಕೆಯ ಸೈಯದ್ ಅಶ್ವಾಕ್ ಪ್ರಶ್ನಿಸಿದರು.
ಏನು ವ್ಯತ್ಯಾಸ?: ಅರ್ಜಿಯನ್ನು ಟಪಾಲ್ನಲ್ಲಿ ಕೊಟ್ಟು ಹೋಗುವುದಕ್ಕೂ, ನೇರವಾಗಿ ಜಿಲ್ಲಾಧಿಕಾರಿಗಳಿಗೆ ಕೊಡುವುದಕ್ಕೂ ಏನು ವ್ಯತ್ಯಾಸ? ಎಂಬುದು ನಮಗೆ ತಿಳಿಯುತ್ತಿಲ್ಲ. ಜನಸ್ಪಂದನ ಅಂದರೆ ತಕ್ಷಣ ಪರಿಹಾರ ಸಿಗುವಂತಿರಬೇಕು. ಅದೇ ಟೇಬಲ್ ಸುತ್ತಾಡೋದಾದ್ರೆ ಏನು ಪ್ರಯೋಜನ ಎಂಬುದು ಬುರುಜನಹಟ್ಟಿ ನಾಗಭೂಷಣ್ ಪ್ರಶ್ನೆ. ಸಿಟಿಯಲ್ಲಿ ಜಾಹಿರಾತುದಾರರು ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ನಗರಸಭೆಗೆ ಅರ್ಜಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.