ಆ್ಯಪ್ನಗರ

ವಿಶ್ವಕ್ಕೆ ಕನ್ನಡ ಪರಿಚಯಿಸಿದ ಸಾಹಿತ್ಯ ಪರಿಷತ್‌

ಇಡೀ ಜಗತ್ತಿಗೆ ಸವಾಲು ಹಾಕುವಂತ ಸಾಹಿತ್ಯ ಕನ್ನಡ ಭಾಷೆಯಲ್ಲಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಜೆ. ಯಾದವರೆಡ್ಡಿ ಹೇಳಿದರು.

Vijaya Karnataka 6 May 2019, 5:00 am
ಚಿತ್ರದುರ್ಗ : ಇಡೀ ಜಗತ್ತಿಗೆ ಸವಾಲು ಹಾಕುವಂತ ಸಾಹಿತ್ಯ ಕನ್ನಡ ಭಾಷೆಯಲ್ಲಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಜೆ. ಯಾದವರೆಡ್ಡಿ ಹೇಳಿದರು.
Vijaya Karnataka Web sahitya parishat introduced by kannada to the world
ವಿಶ್ವಕ್ಕೆ ಕನ್ನಡ ಪರಿಚಯಿಸಿದ ಸಾಹಿತ್ಯ ಪರಿಷತ್‌


ನಗರದ ಎಸ್‌ಆರ್‌ಬಿಎಸ್‌ ರೋಟರಿ ಬಾಲ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭಾನುವಾರ ಆಯೋಜಿಸಿದ್ದ 105ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕನ್ನಡ ಒಂದು ಗ್ರಾಂಥಿಕ ಭಾಷೆ. ಕನ್ನಡ ಭಾಷೆ ವಿಶ್ವಕ್ಕೆ ಪರಿಚಯ ಮಾಡಲು ಸಾಹಿತ್ಯ ಪರಿಷತ್ತು ಪ್ರಾರಂಭವಾಯಿತು. ಇಂದು ನಮಗೆ ನೆಲ, ಜಲದ ಸಮಸ್ಯೆಗಳು ಇವೇ. ಸಂವಿಧಾನದಲ್ಲಿ ಭಾರತದ 22 ಭಾಷೆಗಳಿಗೆ ಸಮಾಜ ಸ್ಥಾನಮಾನ ನೀಡಲಾಗಿದೆ. ಎಲ್ಲ ಭಾಷೆಗಳಿಗೂ ಸಮಾನ ಗೌರವ ಸಿಗಬೇಕು. ಕನ್ನಡ ಕೇವಲ ರಾಜ್ಯ ಭಾಷೆ ಅಲ್ಲ ಹಾಗೆ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಬಹಳಷ್ಟು ಜನ ಹಿಂದಿ ಭಾಷೆ ಉಪಯೋಗಿಸುವ ದೃಷ್ಟಿಯಿಂದ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದೆ. ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಏಕಭಾಷೆ, ಏಕಸಂಸ್ಕೃತಿ, ಏಕ ಧರ್ಮ, ಆಚಾರ-ವಿಚಾರಗಳು ಅಖಂಡ ಭಾರತಕ್ಕೆ ಮಾರಕವಾಗಲಿವೆ. ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ಪ್ರಾದೇಶಿಕ ಭಾಷೆಗಳನ್ನು ಸಹ ದಿಕ್ಕರಿಸಬಾರದು ಎಂದರು.

ಉನ್ನತ ಶಿಕ್ಷ ಣವನ್ನು ಸಹ ಮಾತೃಭಾಷೆಯಲ್ಲಿ ಅಭ್ಯಾಸಿಸಬೇಕು. ಸಿಂಗಾಪುರ, ಉತ್ತರ ಕೋರಿಯಾ, ದಕ್ಷಿಣ ಕೋರಿಯಾ, ಜಪಾನ್‌ ದೇಶಗಳು ಮಾತೃ ಭಾಷೆಯಲ್ಲಿಯೇ ಉನ್ನತ ಶಿಕ್ಷ ಣ ಪಡೆಯುತ್ತಿದ್ದಾರೆ. ಅದೇ ಶ್ರೀಮಂತಿಕೆ ಕನ್ನಡದಲ್ಲಿದೆ. ಹಾಗಾಗಿ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೂ ನೀಡಬೇಕಿದೆ. ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್‌ ಕಲಿಸುವ ಅಕ್ಷ ರ ಮಳಿಗೆಗಳು ಹೆಚ್ಚುತ್ತಿವೆ. ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕರು ಉನ್ನತ ಸ್ಥಾನಮಾನದಲ್ಲಿದ್ದಾರೆ. ಆದ್ದರಿಂದ ರಾಷ್ಟ್ರೀಯ ಹೆಸರಿನಲ್ಲಿ ಪ್ರಾದೇಶಿಕ ಅಸ್ಮಿತೆ ಕಳೆದುಕೊಳ್ಳಬಾರದು ಎಂದರು.

ಪ್ರತಿ ಬಾರಿ ಕೇಂದ್ರ ಸರಕಾರ ರಾಜ್ಯಕ್ಕೆ ಉದ್ಯೋಗ, ನೀರು, ಬರಗಾಲ ನಿರ್ವಹಣೆಯಲ್ಲೂ ತಾರತಮ್ಯ ವೆಸಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ, ಕೇಂದ್ರ ಹಾಗೂ ರಾಜ್ಯ ಸರಕಾರ ಎರಡೂ ಒಗ್ಗೂಡಿ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ವಿಶ್ವದಲ್ಲಿ ಕನ್ನಡ ಭಾಷೆ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಭಾಷೆ ಮತ್ತು ಸಾಹಿತ್ಯದ ಬಗ್ಗೆ ನಿರಂತರ ಅನುಸಂಧಾನ ನಡೆಯುತ್ತಿದೆ. ಸುಮಾರು 6500 ಭಾಷೆಗಳಲ್ಲಿ ಕನ್ನಡ ಸಹ ಅತೀ ಪ್ರಾಚೀನ ಭಾಷೆ. ಕನ್ನಡ ಸಂಸ್ಕೃತಿಯನ್ನು ಪ್ರಬಲವಾಗಿ ಪ್ರತಿಬಿಂಬಿಸುವ ಭಾಷೆ. ಕನ್ನಡ ಸಾಹಿತ್ಯ ಪರಿಷತ್ತಿಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹಾಗಾಗಿ ಯಾವುದೇ ಭಾಷೆಯನ್ನು ಬಳಸಿದರೆ ಮಾತ್ರ ಅದು ಉಳಿಯುವುದು ಇಲ್ಲವಾದರೆ ನಶಿಸುವುದು. ಭಾಷೆ ಕಳೆದುಕೊಂಡರೆ ಎಲ್ಲವೂ ಕಳೆದುಕೊಂಡಂತೆ ಎಂದರು.

ಪದವಿ ಪೂರ್ವ ಶಿಕ್ಷ ಣ ಇಲಾಖೆ ಉಪನಿರ್ದೇಶಕಿ ಎಂ.ಸಿ.ಶೋಭಾ ಮಾತನಾಡಿ, ಮಕ್ಕಳು ಪುಸ್ತಕ ಓದಬೇಕು. ಪುಸ್ತಕಗಳಿಗಿಂತ ಸ್ನೇಹಿತ ಮತ್ತೊಬ್ಬರಿಲ್ಲ, ಒಳ್ಳೆಯ ಪುಸ್ತಕ ಓದಿ ಅದರಲ್ಲಿರುವ ಒಳ್ಳೆಯ ಅಂಶ ಅಳವಡಿಸಿಕೊಳ್ಳಬೇಕು. ಕನ್ನಡಭಾಷೆ ಮಾತನಾಡಿದರೆ ಕೀಳು ಎಂಬ ಭಾವನೆ ಕೈಬಿಡಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಸಕರಾತ್ಮಕ ಚಿಂತನೆ ತುಂಬಬೇಕಿದೆ. ದಿನನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.

ತಾಲೂಕು ಕಸಾಪ ಅಧ್ಯಕ್ಷ ಎಂ.ಆರ್‌.ದಾಸೇಗೌಡ, ಗೌರವ ಕೋಶಾಧ್ಯಕ್ಷ ಎಂ.ಗೋವಿಂದಪ್ಪ, ಗೌರವ ಕಾರ್ಯದರ್ಶಿ ಆರ್‌.ನಾಗರಾಜ್‌, ಕೆ.ಎಂ. ಯೂಸೂಫ್‌, ಸಾಹಿತಿ ಎಸ್‌.ಆರ್‌. ಗುರುನಾಥ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ