ಆ್ಯಪ್ನಗರ

Agriculture Success Story: ಯುವ ಕೃಷಿಕನ ಬದುಕನ್ನು ರಂಗಾಗಿಸಿದ ಸೇವಂತಿ ಹೂ

Agriculture Success Story: ಬಿಬಿಎಂ ಪದವೀಧರನಾಗಿರುವ ದರ್ಶನ್ ಸೇವಂತಿಗೆ ಹೂವುಗಳನ್ನು ಬೆಳೆದು ಬದುಕನ್ನು ರಂಗಾಗಿಸಿದ್ದಾರೆ. ಸೇವಂತಿಗೆ ವರ್ಷದಲ್ಲಿ ಮೂರು ಬಾರಿ ಹೂವು ನೀಡುತ್ತದೆ. ಮೂರು ತಿಂಗಳಲ್ಲಿ ಇಳುವರಿ ಲಭ್ಯ. ಆಗಸ್ಟ್‌ನಿಂದ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಅಧಿಕ ಹೂ ನೀಡುತ್ತದೆ. ಡಿಸೆಂಬರ್, ಜನವರಿ ಮಾಸದಲ್ಲಿ ಮೂರನೇ ಬೆಳೆ ಲಭಿಸುತ್ತದೆ. ಒಮ್ಮೆ ನೆಟ್ಟ ಗಿಡ ಮತ್ತೆ ಸಸಿ ನೀಡಿ ಹೂವನ್ನು ನೀಡುವುದು ಇದರ ವಿಶೇಷ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 28 Nov 2022, 10:35 am

ಹೈಲೈಟ್ಸ್‌:

  • ದರ್ಶನ್ ಮೂರು ಎಕರೆಯಲ್ಲಿ ಸೇವಂತಿ ಬೆಳೆದಿದ್ದು, ಪ್ರತಿ ದಿನ ಮೂರರಿಂದ ನಾಲ್ಕು ಕ್ವಿಂಟಾಲ್ ಹೂ ಕೀಳುತ್ತಾರೆ.
  • ಕಡಿಮೆ ಖರ್ಚಿನಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಅಧಿಕ ಇಳುವರಿಯನ್ನು ಸೇವಂತಿ ನೀಡುತ್ತದೆ.
  • ತಿಂಗಳಿಗೆ ಮೂವತ್ತು ಸಾವಿರದಿಂದ ನಲವತ್ತು ಸಾವಿರ ತನಕ ದುಡಿಮೆ ಮಾಡುತ್ತಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Chitradurga Farmer
ಚಿತ್ರದುರ್ಗ : ಚಿತ್ರದುರ್ಗ ತಾಲೂಕಿನ ಕಲ್ಲಹಳ್ಳಿಯಲ್ಲಿ ಯುವ ರೈತನೊಬ್ಬ ಸೇವಂತಿಗೆ ಹೂವುಗಳನ್ನು ಬೆಳೆದು ಬದುಕನ್ನು ರಂಗಾಗಿಸಿದ್ದಾರೆ. ಬಿಬಿಎಂ ಪದವೀಧರನಾಗಿರುವ ಈತ ತಾಯಿ ಲತಾ ಹಾಕಿಕೊಟ್ಟ ತಳಪಾಯದಲ್ಲಿ ಮುನ್ನಡೆಯುತ್ತಿರುವ ಯುವ ಕೃಷಿಕ.
ಹೌದು.. ದರ್ಶನ್ ಎಂಬ ಯುವ ರೈತ ಹೂ ಕೃಷಿ ಕೈಗೊಂಡು ಬದುಕನ್ನು ಹಸನಾಗಿಸಿಕೊಂಡಿದ್ದಾನೆ. ಇವರ ಹೂವಿನ ತೋಟಕ್ಕೆ ಕಾಲಿಟ್ಟರೆ ಸಾಕು, ಹೂವುಗಳು ಸ್ವಾಗತಿಸಲಿದ್ದು, ನೋಡುಗರ ಮನ ಸೆಳೆಯುತ್ತಿದೆ. ಅವುಗಳನ್ನು ನೋಡುವುದೇ ಒಂದು ಚೆಂದವಾಗಿದ್ದು, ಸೇವಂತಿ ಹೂ ಯುವ ರೈತನ ಕೈ ಹಿಡಿದಿದೆ.


ಮುಂಜಾನೆ ಮಂಜಿನಲ್ಲಿ ನಗುತ್ತಿರುವ ಹೂಗಳ ಮಧ್ಯೆ ಕಾಣುವ ಕೂಲಿ ಕಾರ್ಮಿಕರು ಹೂಗಳನ್ನು ಕತ್ತರಿಸುವುದನ್ನು ನೋಡುವುದೇ ಚೆಂದ. ತಮಿಳುನಾಡಿನಿಂದ ಒಂದೂವರೆ ರೂಪಾಯಿ ಕೊಟ್ಟು ಪರಿಮಳ ಎಂಬ ಹೂ ಸಸಿಯನ್ನು ತಂದಿದ್ದಾರೆ. ಮೂರು ಎಕರೆಯಲ್ಲಿ ಸೇವಂತಿ ಬೆಳೆದಿದ್ದು, ಪ್ರತಿ ದಿನ ಮೂರರಿಂದ ನಾಲ್ಕು ಕ್ವಿಂಟಾಲ್ ಹೂ ಕೀಳುತ್ತಾರೆ. ಒಂದು ಎಕರೆಗೆ ಮೂವತ್ತರಿಂದ ನಲವತ್ತು ಸಾವಿರ ಖರ್ಚು ಮಾಡಿದ್ದಾರೆ. ಮೂರು ತಿಂಗಳ ಬೆಳೆ ಇದಾಗಿದ್ದು, ಜೀವನಕ್ಕೊಂದು ದಾರಿ ಮಾಡಿ ಕೊಟ್ಟಿದೆ.


Agriculture Census: ಮೊದಲ ಬಾರಿಗೆ ಡಿಜಿಟಲ್‌ ಕೃಷಿ ಗಣತಿ: ಮೊಬೈಲ್‌ ಆ್ಯಪ್‌ ಮೂಲಕ ದತ್ತಾಂಶ ಸಂಗ್ರಹ

ಪುಷ್ಪ ಕೃಷಿಗಳಲ್ಲೇ ಅತ್ಯಧಿಕ ಲಾಭದಾಯಕ ಕೃಷಿ ಇದಾಗಿದೆ. ಕಡಿಮೆ ಖರ್ಚಿನಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಅಧಿಕ ಇಳುವರಿಯನ್ನು ಸೇವಂತಿ ನೀಡುತ್ತದೆ. ತೋಟದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಹೂ, ಪ್ರತಿ ದಿನವೂ ದೊರೆಯಲಿದ್ದು, ಬೆಂಗಳೂರಿಗೆ ಹೂಗಳನ್ನು ಕಳುಹಿಸಲಾಗುತ್ತದೆ. ಕೂಲಿ ಕಾರ್ಮಿಕರ ಕೊರತೆ ಇದ್ದು, ಅವರು ಬರುವ ಆಧಾರದ ಮೇಲೆ ಹೂಗಳನ್ನು ಕಟಾವು ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಹೂ ಮಾರುಕಟ್ಟೆ ಇದ್ದಿದ್ದರೆ ನಮ್ಮಲ್ಲಿನ ಸೇವಂತಿಗೆ ಇನ್ನೂ ಹೆಚ್ಚಿನ ಬೆಲೆ ದೊರೆಯುತ್ತಿತ್ತು. ಆದರೆ ಇಲ್ಲಿ ಸೂಕ್ತ ಹೂ ಮಾರುಕಟ್ಟೆ ಸಿಗುತ್ತಿಲ್ಲ. ಬೆಂಗಳೂರಿಗೆ ಕಳುಹಿಸಿದರೆ ಉತ್ತಮ ಬೆಲೆ ಸಿಗುತ್ತದೆ. ಆದ್ದರಿಂದ ಹೂಗಳನ್ನು ರಾಜದಾನಿಗೆ ಕಳುಹಿಸಲಾಗುತ್ತದೆ. ಆದರೆ ಅಲ್ಲಿಯೂ ಮಧ್ಯವರ್ತಿಗಳು ಒಂದಿಷ್ಟು ವೇಸ್ಟ್ ಎಂದು ಹೂ ತೆಗೆಯುತ್ತಾರೆ. ಕೆ.ಜಿ.ಯೊಂದಕ್ಕೆ ಪ್ರಸ್ತುತ 60 ರೂ.ಇದೆ. ಹಬ್ಬ, ಹರಿದಿನಗಳು ಬಂದ ವೇಳೆ ದರ ಹೆಚ್ಚಾಗುತ್ತದೆ. ಆಗ ಮಾತ್ರ ಒಂದಿಷ್ಟು ಹಣ ನೋಡುತ್ತೇವೆ ಎನ್ನುತ್ತಾರೆ ಯುವ ರೈತ ದರ್ಶನ್.

ಎಲ್ಲ ಗಿಡಗಳಿಗೂ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಇದರಿಂದ ದಿನಕ್ಕೊಮ್ಮೆ ನೀರು, ವಾರಕ್ಕೊಮ್ಮೆ ಗೊಬ್ಬರ ಹಾಕುತ್ತಾರೆ. ಹೂ ಕತ್ತರಿಸಿದ ನಂತರ ಔಷಧಿ ಸ್ಪ್ರೇ ಮಾಡುತ್ತಾರೆ. ತಿಂಗಳಿಗೆ ಮೂವತ್ತು ಸಾವಿರದಿಂದ ನಲವತ್ತು ಸಾವಿರ ತನಕ ದುಡಿಮೆ ಮಾಡುತ್ತಾರೆ. ಸೇವಂತಿಗೆ ಗಿಡಗಳನ್ನು ಬೀಜ, ಕಾಂಡ ಮತ್ತು ಕಂದುಗಳಿಂದ ಬೆಳೆಸಬಹುದಾಗಿದೆ. 30 ಸೆಂಮೀ ಅಂತರದಲ್ಲಿ ಸಾಲು ಬಿಟ್ಟು 22 ಸೆಂಮೀ ದೂರದಲ್ಲಿ ಸಸಿಗಳನ್ನು ನಾಟಿ ಮಾಡಬಹುದು.

Agriculture Success story: ಯೂಟ್ಯೂಬ್ ಸಹಕಾರದೊಂದಿಗೆ ಕೃಷಿಯಲ್ಲಿ ಸಕಸ್ಸ್ ಕಂಡ ರೈತ
ಆರಂಭದಲ್ಲಿ ಹಾಗೂ ಬಳಿಕ ಅಧಿಕ ಕವಲುಗಳನ್ನು ಪಡೆಯಲು ತುದಿಗಳನ್ನು ಚಿವುಟಿ ಹಾಕುವುದು ಸೂಕ್ತ. ಎಷ್ಟು ಬೇಕೋ ಅಷ್ಟು ಮಾತ್ರ ನೀರು ಕೊಡಬೇಕು. ಇಲ್ಲದಿದ್ದರೆ ಸಸಿಗಳನ್ನು ಬೇರು ಕೊಳೆ ರೋಗ ಕಾಡುವ ಅಪಾಯವಿದೆ. ನಾಟಿ ಮಾಡಿದ ಮೂರು ತಿಂಗಳಲ್ಲಿ ಗಿಡಗಳು ಹೂವು ಬಿಡಲು ಆರಂಭಿಸುತ್ತವೆ. ಹೂವು ಬಿಟ್ಟ ನಂತರ ಸತತ ಒಂದೂವರೆ ತಿಂಗಳವರೆಗೆ ಹೂವು ಕೊಯಿಲಿಗೆ ಸಿಗುತ್ತದೆ.

ಮೂರು ಬಾರಿ ಹೂವು :
ಈ ಸೇವಂತಿಗೆ ವರ್ಷದಲ್ಲಿ ಮೂರು ಬಾರಿ ಹೂವು ನೀಡುತ್ತದೆ. ಮೂರು ತಿಂಗಳಲ್ಲಿ ಇಳುವರಿ ಲಭ್ಯ. ಆಗಸ್ಟ್‌ನಿಂದ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಅಧಿಕ ಹೂ ನೀಡುತ್ತದೆ. ಡಿಸೆಂಬರ್, ಜನವರಿ ಮಾಸದಲ್ಲಿ ಮೂರನೇ ಬೆಳೆ ಲಭಿಸುತ್ತದೆ. ಒಮ್ಮೆ ನೆಟ್ಟ ಗಿಡ ಮತ್ತೆ ಸಸಿ ನೀಡಿ ಹೂವನ್ನು ನೀಡುವುದು ಇದರ ವಿಶೇಷ.

'ನಾನು ಬಿಬಿಎಂ ಓದಿದ್ದೇನೆ, ಎಂಬಿಎ ಮಾಡಬೇಕೆಂದಿದ್ದೇನೆ. ಸ್ವಲ್ಪ ದಿನ ಮನೆಯಲ್ಲಿ ಕೆಲಸ ಮಾಡಬೇಕೆಂದು ಹೂ ಬೆಳೆದಿದ್ದೇನೆ. ಸೇವಂತಿಗೆ ಹೂ ಲಾಭ ಬಾರದೇ ಹೋದರೂ ಅಷ್ಟೊಂದು ನಷ್ಟವಾಗುವುದಿಲ್ಲ. ಬೆಂಗಳೂರು ಮಾರುಕಟ್ಟೆಗೆ ಹೂ ಕಳಿಸಲಾಗುತ್ತದೆ. ದರ ಹೆಚ್ಚಾದರೆ ಮಾತ್ರ ಲಾಭ ಸಿಗುತ್ತದೆ' ಎನ್ನುತ್ತಾರೆ ರೈತ ದರ್ಶನ್.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ