ಆ್ಯಪ್ನಗರ

ದಲಿತರ ಗುಡಿಸಲಲ್ಲಿ ಶ್ರೀರಾಮುಲು ವಾಸ್ತವ್ಯ

ಚಿತ್ರದುರ್ಗ ಜಿಲ್ಲೆಯ ನಲಗೇತನಹಟ್ಟಿ ಗ್ರಾಮದ ಗುಡಿಸಲಲ್ಲಿ ಶಾಸಕ ಶ್ರೀರಾಮಲು ಗ್ರಾಮ ವಾಸ್ತವ್ಯ ಮಾಡಿ ಹೊಸ ಪರಂಪರೆ ಆರಂಭಿಸಿದ್ದಾರೆ. ಬುಧವಾರ ರಾತ್ರಿ ಅವರು ದುರುಗಪ್ಪ ಮತ್ತು ಮಂಜಮ್ಮ ಎಂಬ ದಲಿತರ ಮನೆಯಲ್ಲಿ ದಿನಕಳೆದರು.

Vijaya Karnataka 29 Jun 2018, 9:30 am
ನಾಯಕನಹಟ್ಟಿ: ಚಿತ್ರದುರ್ಗ ಜಿಲ್ಲೆಯ ನಲಗೇತನಹಟ್ಟಿ ಗ್ರಾಮದ ಗುಡಿಸಲಲ್ಲಿ ಶಾಸಕ ಶ್ರೀರಾಮಲು ಗ್ರಾಮ ವಾಸ್ತವ್ಯ ಮಾಡಿ ಹೊಸ ಪರಂಪರೆ ಆರಂಭಿಸಿದ್ದಾರೆ. ಬುಧವಾರ ರಾತ್ರಿ ಅವರು ದುರುಗಪ್ಪ ಮತ್ತು ಮಂಜಮ್ಮ ಎಂಬ ದಲಿತರ ಮನೆಯಲ್ಲಿ ದಿನಕಳೆದರು.
Vijaya Karnataka Web sriramulu village stay


ಮನೆ ಯಜಮಾನಿ ಮಂಜಮ್ಮ ಅವರು ಶ್ರೀರಾಮುಲು ಅವರಿಗೆ ಉಪಚರಿಸಿದರು. ‘ಎಲ್ಲರೂ ಒಟ್ಟಿಗೆ ಊಟ ಮಾಡೋಣ, ನೀವು ಕೂತ್ಕೊಳ್ಳಿ ’ ಎಂದ ಶ್ರೀರಾಮುಲು ಆ ದಂಪತಿಗೆ, ಮಗಳು ಮಾನ್ಯಗೆ ತಾವೇ ಬಡಿಸಿದರು. ಆನಂತರ ಎಲ್ಲರ ಜತೆ ಊಟ ಮಾಡಿದರು. ಬರೀ ರೊಟ್ಟಿ, ಪಲ್ಯ ಸವಿದ ಅವರು, ಅನ್ನ ಮುಟ್ಟಲಿಲ್ಲ. ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಪಲ್ಯ, ಚಟ್ನಿ ಮಾಡಲಾಗಿತ್ತು. ಈ ಬಗ್ಗೆ ರಾಮುಲು ಆಪ್ತರು ಮೊದಲೇ ಸೂಚನೆ ನೀಡಿದ್ದರು.

ಕಣ್ಣೀರಿಟ್ಟ ಮಹಿಳೆ:ಊಟದ ನಂತರ ಶ್ರೀರಾಮುಲು ಬಳಿ ಮಂಜಮ್ಮ ತಮ್ಮ ಅಳಲು ತೋಡಿಕೊಂಡರು. ‘‘ನಮಗೆ ಸ್ವಂತ ನಿವೇಶನಬಾಗಲಿ, ಮನೆಯಾಗಲಿ ಇಲ್ಲ. ಈಚಲ ಪೊರಕೆ ಕಟ್ಟಿ ಮಾರಾಟ ಮಾಡುತ್ತಿದ್ದೇವೆ. ಸರಕಾರದ ಯಾವುದೇ ಸವಲತ್ತುಗಳಿಲ್ಲ. ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಮೊರಾರ್ಜಿ ಶಾಲೆಯಲ್ಲಿ ಓದುತ್ತಿದ್ದಾನೆ. ಮತ್ತೊಬ್ಬ ಮಗಳು ಗ್ರಾಮದ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಸರಕಾರದಿಂದ ಮನೆ, ದುಡಿಯಲು ಒಂದಷ್ಟು ಜಮೀನು ಕೊಡಿಸಿ,’’ಎಂದು ಬೇಡಿಕೊಳ್ಳುತ್ತಾ ಕಣ್ಣೀರಿಟ್ಟರು. ಇದಕ್ಕೆ ಸ್ಪಂದಿಸಿದ ಶಾಸಕ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವೆ ಎಂದು ಹೇಳಿದರು.

ಯೋಗ, ಶಿವ ಪೂಜೆ: ಗುರುವಾರ ಮುಂಜಾನೆ 5.30ಕ್ಕೆ ಎದ್ದ ಅವರು ಎರಡು ಕಿ.ಮೀ ವಾಕ್‌ ನಡೆಸಿದರು. ದಾರಿಗುಂಟ ಕುರಿ ದೊಡ್ಡಿಗಳಿಗೆ ಭೇಟಿ ನೀಡಿ ಕುರಿಗಾಹಿಗಳ ಸಮಸ್ಯೆ ಆಲಿಸಿದರು. ಬಳಿಕ ಗುಡಿಸಲ ಮುಂದೆ ಚಾಪೆ ಮೇಲೆ ಕುಳಿತು ಅರ್ಧ ಗಂಟೆ ಯೋಗಾಭ್ಯಾಸ ಮಾಡಿದರು. ಗುಡಿಸಲಿನ ಒಳಗೆ 50 ನಿಮಿಷ ತಾವೇ ಶಿವ ಪೂಜೆ ನಡೆಸಿದರು.

ಬಡವರ ಕಷ್ಟ ಅರಿಯಲು ಗ್ರಾಮ ವಾಸ್ತವ್ಯ
‘‘ಸಂಸತ್‌ ಸದಸ್ಯನಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡುತ್ತಿದ್ದೆ. ಇದೀಗ ಇಲ್ಲಿಯೂ ಮುಂದುವರಿಸಿದ್ದೇನೆ. ಮೊಳಕಾಲ್ಮುರು ಕ್ಷೇತ್ರ ಬರಪೀಡಿತ. ನೀರಿನ ಸಮಸ್ಯೆಯಿದೆ. ಎಸ್ಸಿ, ಎಸ್ಟಿ ಕಾಲೋನಿಗಳಲ್ಲಿ ಗುಡಿಸಲುಗಳು ಇನ್ನೂ ಜೀವಂತವಾಗಿವೆ. ಸರಕಾರ ಗುಡಿಸಲುರಹಿತ ಗ್ರಾಮ ರೂಪಿಸಲು ಕ್ರಮ ಕೈಗೊಂಡಿದ್ದರೂ, ಸರಕಾರದ ಸವಲತ್ತು ಜನರಿಗೆ ತಲುಪುತ್ತಿಲ್ಲ. ಕುಡಿವ ನೀರು, ಮನೆ, ಚರಂಡಿ ಸವಲತ್ತು ಕೂಡ ದೊರೆಯುತ್ತಿಲ್ಲ. ಗ್ರಾಮ ವಾಸ್ತವ್ಯ ಹೂಡಿ ಅವರ ಸಮಸ್ಯೆ ಅರಿತು ಪರಿಹರಿಸಲು ಪ್ರಯತ್ನ ನಡೆಸಲಾಗುವುದು,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ