ಆ್ಯಪ್ನಗರ

ಬೇಸ್‌ಲೈನ್‌ ಸರ್ವೇ ಪೂರ್ಣಗೊಳಿಸದಿದ್ದರೆ ಸಸ್ಪೆಂಡ್‌

ಬೇಸ್‌ಲೈನ್‌ ಸರ್ವೇಯಲ್ಲಿರುವ ಶೌಚಾಲಯಗಳನ್ನು ಏ.15ರೊಳಗೆ ಪೂರ್ಣಗೊಳಿಸದಿದ್ದಲ್ಲಿ ಸಮೂಹಿಕವಾಗಿ ಅಮಾನತು ಮಾಡಲಾಗುವುದು ಎಂದು ಪಿಡಿಒಗಳಿಗೆ ಜಿಪಂ ಸಿಇಒ ಸಿ. ಸತ್ಯಭಾಮ ಎಚ್ಚರಿಸಿದರು.

Vijaya Karnataka 5 Apr 2019, 5:00 am
ಚಳ್ಳಕೆರೆ : ಬೇಸ್‌ಲೈನ್‌ ಸರ್ವೇಯಲ್ಲಿರುವ ಶೌಚಾಲಯಗಳನ್ನು ಏ.15ರೊಳಗೆ ಪೂರ್ಣಗೊಳಿಸದಿದ್ದಲ್ಲಿ ಸಮೂಹಿಕವಾಗಿ ಅಮಾನತು ಮಾಡಲಾಗುವುದು ಎಂದು ಪಿಡಿಒಗಳಿಗೆ ಜಿಪಂ ಸಿಇಒ ಸಿ. ಸತ್ಯಭಾಮ ಎಚ್ಚರಿಸಿದರು.
Vijaya Karnataka Web suspend if the baseline survey is not complete
ಬೇಸ್‌ಲೈನ್‌ ಸರ್ವೇ ಪೂರ್ಣಗೊಳಿಸದಿದ್ದರೆ ಸಸ್ಪೆಂಡ್‌


ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಶೌಚಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಿಡಿಒಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.

ಶೌಚಾಲಯಗಳನ್ನು ಕಟ್ಟಿಸಿದ ನಂತರ ಜಿಯೋ ಟ್ಯಾಗ್‌ ಮಾಡಬೇಕೆಂದಾಗ ಜಿಪಂ ಯೋಜನಾಧಿಕಾರಿ ಪ್ರತಿಕ್ರಿಯಿಸಿ, ಶೌಚಾಲಯ ನಿರ್ಮಿಸದೆ ಜಿಯೋ ಟ್ಯಾಗ್‌ ಮಾಡಿದ್ದಾರೆ ಎಂಬ ಮಾಹಿತಿಗೆ ಜಿಪಂ ಸಿಇಒ ಶೌಚಾಲಯ ನಿರ್ಮಿಸದೆ ರಾಜ್ಯಕ್ಕೆ ಸುಳ್ಳು ಮಾಹಿತಿ ನೀಡಿದ್ದೀರಾ, ಹೀಗೆ ಮಾಡಲು ನಿಮಗೆ ನಾಚಿಕೆಯಾಗಬೇಕು ಎಂದರು.

2012-13ನೇ ಸಾಲಿನಲ್ಲಿ ಬೇಸ್‌ಲೈನ್‌ ಸರ್ವೇ ನಡೆಸಿ ಈವರೆಗೆ ಒಂದೊಂದು ಪಂಚಾಯಿತಿಗಳಲ್ಲೂ 400ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಬೇಕಿದೆ. ಆದರೆ ಕಟ್ಟಿಸದೆ ಬಯಲು ಬಹಿರ್ದೆಸೆ ಮುಕ್ತವೆಂದು ಹೇಗೆ ಘೋಷಣೆ ಮಾಡಿದ್ದೀರಾ, ಉತ್ತರ ಹೇಳಿ ಎಂದಾಗ ಯಾವ ಪಿಡಿಒಗಳೂ ಬಾಯಿ ಬಿಡಲಿಲ್ಲ.

ತಾಪಂ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಸತೀಶ್‌ಕುಮಾರ್‌ ಮಾತನಾಡಿ, ಐಎಂಎಸ್‌ ಡಾಟ ಬೇಸ್‌ಲೈನ್‌ ಸರ್ವೇಯಲ್ಲಿ ಸರಿಪಡಿಸಲಾರದಷ್ಟು ಕೆಡಿಸಲಾಗಿದೆ. ಇದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ ಇದರ ಜತೆಗೆ 40 ಸಾವಿರ ಶೌಚಾಲಯ ಕಟ್ಟಿಸದೆ ಜಿಯೋ ಟ್ಯಾಗ್‌ ಮಾಡಿದ್ದಾರೆ ಎಂದರು.

ನನ್ನಿವಾಳ ಪಿಡಿಒ ಇನಾಹಿತ್‌ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ 36 ಹಟ್ಟಿಗಳು ಬರುತ್ತಿದ್ದು, ಬೇಸ್‌ಲೈನ್‌ ಸರ್ವೇ ಸಂದರ್ಭದಲ್ಲಿ 1500ಕ್ಕೂ ಹೆಚ್ಚು ಶೌಚಾಲಯಗಳಿಲ್ಲವೆಂದು ಸರ್ವೇಯಲ್ಲಿ ತಿಳಿಸಲಾಗಿತ್ತು. ಈಗಾಗಲೇ 700 ಕಟ್ಟಿಸಲಾಗಿದೆ. ಇನ್ನೂ 800 ನಿರ್ಮಿಸಬೇಕಿದೆ. ಆದರೆ 550ಕ್ಕೂ ಹೆಚ್ಚು ಫಲಾನುಭವಿಗಳ ವಿಳಾಸವೇ ಇಲ್ಲ. ತಪ್ಪು ಸರ್ವೇ ನಡೆಸಿದ್ದಾರೆ ಎಂದಾಗ ಜಿಪಂ ಸಿಇಒ ನೀವೇ ತಾನೇ ಅಂದು ಸರ್ವೇ ಮಾಡಲಾಗಿದೆ ಎಂದು ಹೇಳಿದ್ದು ಎಂದರು.

ಪಿ.ಮಹದೇವಪುರ ಪಿಡಿಒ ಮಲ್ಲೇಶಪ್ಪ ಮಾತನಾಡಿ, ಪಂಚಾಯಿತಿಯಲ್ಲಿ ಲಂಬಾಣಿ ಸಮುದಾಯವೇ ಇಲ್ಲ, ಆದರೂ 389 ಕುಟುಂಬಗಳಿವೆ ಎಂದು ಸರ್ವೇಯಲ್ಲಿ ತೊರಿಸಲಾಗಿದೆ. ಬೇಸ್‌ಲೈನ್‌ ಸರ್ವೇ ಪ್ರಕಾರ 171 ಮಾತ್ರ ಶೌಚಾಲಯ ಕಟ್ಟಿಸಬೇಕಿದೆ ಎಂದರು.

ಸಿಇಒ ಮಾತನಾಡಿ, ಎಲ್ಲರೂ ಸೇರಿಕೊಂಡು ಅಧ್ವಾನಗೊಳಿಸಿದ್ದೀರಾ, ಆದರೆ ಜಿಲ್ಲೆಯ 1040 ಹಳ್ಳಿಗಳಲ್ಲಿ ಬೇಸ್‌ಲೈನ್‌ ಸರ್ವೇಯಂತೆ ಶೌಚಾಲಯ ಪೂರ್ಣಗೊಳಿಸಿ ಬಯಲು ಬಹಿರ್ದೆಸೆ ಮುಕ್ತ ಮಾಡಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರು ಕೆಲಸ ಮಾಡಬೇಕು, ಇಲ್ಲವೇ ಹೊರ ನಡೆಯಬೇಕು. ಇಂದಿನ ಸಭೆಯ ಗೈರಾದ ಪಿಡಿಒಗಳಿಗೆ ನೋಟಿಸ್‌ ಜಾರಿ ಮಾಡಿ ಎಂದು ಇಒ ಚಂದ್ರಶೇಖರ್‌ಗೆ ಸೂಚಿಸಿದರು.

ಬಿಎಸ್‌ಎನ್‌ಎಲ್‌ ಕೇಬಲ್‌ ಸಮಸ್ಯೆಯಿಂದ ಅನೇಕ ಪಂಚಾಯಿತಿಗಳಲ್ಲಿ ಸಮಸ್ಯೆಯಾಗುತ್ತಿದೆ. ಕೂಡಲೇ ಸರಿಪಡಿಸಬೇಕೆಂಬ ಮಾಹಿತಿಗೆ ಬಿಎಸ್‌ಎನ್‌ಎಲ್‌ ಎಂಜಿನಿಯರ್‌ ಗಣೇಶ್‌ ಬಳ್ಳಾರಿ-ಚಳ್ಳಕೆರೆ ಮಾರ್ಗವಾಗಿ ಹೈವೇ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಕೇಬಲ್‌ ಕಟ್‌ ಆಗುತ್ತಿವೆ, ಪಂಚಾಯಿತಿ ವ್ಯಾಪ್ತಿಯಲ್ಲೂ ಕಾಮಗಾರಿ ನಡೆಸುವಾಗ ಹಾನಿ ಮಾಡುತ್ತಿರುವುದು ನಮ್ಮ ಕಂಪನಿಯೂ ನಷ್ಟದಲ್ಲಿರುವುದರಿಂದ ಮತ್ತೆ ದುರಸ್ತಿಪಡಿಸಲು ಅನುದಾನ ಕೊಡುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ