ಆ್ಯಪ್ನಗರ

ನರೇಗಾ ಹಣಕ್ಕೆ ಹತ್ತಾರು ಪ್ರಶ್ನೆ!

ನರೇಗಾ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿ ಯಾರಿಗಾಗಿ, ಏತಕ್ಕಾಗಿ ರೂಪಿಸಲಾಗಿದೆ? ಮಾರ್ಗಸೂಚಿ ಜಾರಿ ಮಾಡುವ ಹೊಣೆಗಾರಿಕೆ ಯಾರಿಗಿದೆ? ಉಲ್ಲಂಘನೆ ಮಾಡಿದಾಗ ಪ್ರಶ್ನಿಸುವ ಅಧಿಕಾರ ಯಾರಿಗಿದೆ? ಉಲ್ಲಂಘನೆ ಆಗಿದೆಯೆಂದು ತಿಳಿದ ಮೇಲೂ ಹಣಪಾವತಿ ಮಾಡಲು ನರೇಗಾ ಕಾಯ್ದೆಯ ಯಾವ ಅಂಶ ಹೇಳುತ್ತದೆ...?

Vijaya Karnataka 14 Jul 2019, 5:00 am
ಚಿತ್ರದುರ್ಗ : ನರೇಗಾ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿ ಯಾರಿಗಾಗಿ, ಏತಕ್ಕಾಗಿ ರೂಪಿಸಲಾಗಿದೆ? ಮಾರ್ಗಸೂಚಿ ಜಾರಿ ಮಾಡುವ ಹೊಣೆಗಾರಿಕೆ ಯಾರಿಗಿದೆ? ಉಲ್ಲಂಘನೆ ಮಾಡಿದಾಗ ಪ್ರಶ್ನಿಸುವ ಅಧಿಕಾರ ಯಾರಿಗಿದೆ? ಉಲ್ಲಂಘನೆ ಆಗಿದೆಯೆಂದು ತಿಳಿದ ಮೇಲೂ ಹಣಪಾವತಿ ಮಾಡಲು ನರೇಗಾ ಕಾಯ್ದೆಯ ಯಾವ ಅಂಶ ಹೇಳುತ್ತದೆ...?
Vijaya Karnataka Web ten question for narega money
ನರೇಗಾ ಹಣಕ್ಕೆ ಹತ್ತಾರು ಪ್ರಶ್ನೆ!


ಜಿಲ್ಲೆಯಲ್ಲಿ ನರೇಗಾದಡಿ ಅನುಷ್ಠಾನಗೊಳಿಸಿರುವ ಕಾಮಗಾರಿ ಕುರಿತಂತೆ ತನಿಖಾ ತಂಡಗಳು ನೀಡಿರುವ ಪರಿಶೀಲನಾ ವರದಿ ಅವಲೋಕಿಸಿದಾಗ ಇಂಥ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸಾರ್ವಜನಿಕರ ಹಣವನ್ನು ಮನಸೋ ಇಚ್ಛೆ ಪೋಲು ಮಾಡಿರುವುದರ ವಿಶ್ವರೂಪ ದರ್ಶನವಾಗುತ್ತದೆ.

ನರೇಗಾದಡಿ ತೋರಿಕೆಯ ಕಾಮಗಾರಿ ನಿರ್ವಹಿಸಿ ಸಿಮೆಂಟು, ಜಲ್ಲಿ, ಕಬ್ಬಿಣದ ಮೆಟೀರಿಯಲ್‌ ಹಾಳುವ ಮಾಡುವ ಬದಲಿಗೆ ಹಣವನ್ನು ನೇರವಾಗಿ ಪಂಚಾಯಿತಿ ಸದಸ್ಯರು, ಪರ್ಸೆಂಟೇಜ್‌ ಹಂಚಿಕೊಳ್ಳುವ ಅಧಿಕಾರಿಗಳು, ಮೆಟಿರೀಯಲ್‌ ಸಪ್ಲೈನಲ್ಲಿ ಬೋಗಸ್‌ ಬಿಲ್‌ ನೀಡುವ ವೆಂಡರ್‌ಗಳೇ ಇಷ್ಟಿಷ್ಟು ಹಂಚಿಕೊಳ್ಳುವುದು ಸೂಕ್ತ ಅಲ್ಲವೇ? ಇದಕ್ಕೆ ಶಾಶ್ವತ ಆಸ್ತಿ ಸೃಜನೆಯ ಮುಖವಾಡ ಏಕೆ ಬೇಕು? ಎಂದು ಪ್ರಶ್ನಿಸುತ್ತಿದ್ದಾರೆ.

ಪ್ರಶ್ನಿಸೋರಿಲ್ಲ:

ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರು ಬೇಕು, ಸಾಸ್ವೆಹಳ್ಳಿ ಏತ ನೀರಾವರಿಬೇಕು ಎಂದು ಪ್ರಶ್ನಿಸುವ ರೈತರು ಕೂಡ ನರೇಗಾದಡಿ ಜಲಸಂರಕ್ಷಣಾ ಕಾಮಗಾರಿಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಠಾಚಾರದ ಕುರಿತು ದನಿ ಎತ್ತುತ್ತಿಲ್ಲ? ಕೆರೆ, ಕುಂಟೆ, ಹಳ್ಳಗಳಲ್ಲಿ ನೀರನ್ನು ಇಂಗಿಸುವ, ಹಿಡಿದಿಡುವ ಸಾವಿರಾರು ಕಾಮಗಾರಿಗಳು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿವೆ. ಆದರೆ, ಕಾಮಗಾರಿಗಳ ಗುಣಮಟ್ಟದ ಕುರಿತು ಯಾವೊಬ್ಬ ರೈತರ ಮುಖಂಡರೂ ತಲೆ ಕೆಡಿಸಿಕೊಂಡಿಲ್ಲ. ನರೇಗಾ ಅಕ್ರಮಗಳ ಕುರಿತು ವಹಿಸಿರುವ ಮೌನ ಕೂಡ ಅಕ್ರಮ ಎಸಗುವವರಿಗೆ ಇನ್ನಷ್ಟು ಉತ್ತೇಜನ ನೀಡುವಂತಿದೆ.

ಒಂಬುಡ್ಸ್‌ಮನ್‌ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ:

ನರೇಗಾದ ಕಾಮಗಾರಿಗಳ ಗುಣಮಟ್ಟ, ಅನುಷ್ಠಾನ ಮತ್ತಿತರೆ ಅಂಶಗಳ ಕುರಿತು ವಿಶೇಷ ಕಣ್ಣಿಡಬೇಕಾದ ನರೇಗಾ ಒಂಬುಡ್ಸ್‌ಮನ್‌ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎನ್ನುವಂತಾಗಿದೆ. ಒಂಬುಡ್ಸ್‌ಮನ್‌ಗೆ ದೂರು ನೀಡಿದರೂ ಏನೂ ಪ್ರಯೋಜನ ಇಲ್ಲದಂತಾಗಿದೆ. ಇಲ್ಲಿನ ಒಂಬುಡ್ಸ್‌ಮನ್‌ ವಸೂಲಾತಿಗೆ ಶಿಫಾರಸು ಮಾಡಿದರೂ ಮೇಲ್ಮನವಿ ಪ್ರಾಧಿಕಾರಕ್ಕೆ ಹೋಗಿ ಬಚಾವಾಗಿ ಬಂದಿರುವ ಹಲವು ನಿದರ್ಶನಗಳು ಇವೆ. ಹಾಗಾಗಿ, ನರೇಗಾ ಅಕ್ರಮಗಳ ಕುರಿತು ಒಂಬುಡ್ಸ್‌ಮನ್‌ಗೆ ದೂರು ನೀಡುವ ಭರವಸೆಯೇ ಯಾರಲ್ಲೂ ಇಲ್ಲದಂತಾಗಿದೆ.

ತನಿಖೆಯ ಅರ್ಹತೆ ಯಾರಿಗಿದೆ?:

ಮೆಟಿರೀಯಲ್‌ ಬಾಬ್ತು ಬಿಲ್‌ ಪಾವತಿಗೂ ಮುನ್ನ ತಾಲೂಕುವಾರು ರಚಿಸಿರುವ ತಂಡಗಳ ಬಗ್ಗೆ ಕೂಡ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಜಿಲ್ಲೆಯಲ್ಲಿ ನರೇಗಾ ಅನುಷ್ಠಾನದ ಭಾಗವಾಗಿರುವ ಅಧಿಕಾರಿ, ನೌಕರರೇ ಪರಿಶೀಲನಾ ತಂಡಗಳು ಸದಸ್ಯರಾಗಿ ಹೊಣೆಗಾರಿಕೆ ವಹಿಸಿಕೊಂಡಾಗ ಪ್ರಾಮಾಣಿಕ ವರದಿ ಹೇಗೆ ನಿರೀಕ್ಷಿಸಲು ಸಾಧ್ಯ? ಎಂಬುದು ಆಕ್ಷೇಪಣೆಯ ಸಾರಾಂಶ. ಪಾರದರ್ಶಕತೆಯ ದೃಷ್ಟಿಯಿಂದ ಮೂರನೇ ಪಾರ್ಟಿಯಿಂದ ತನಿಖೆ ನಡೆಸುವುದು ಸೂಕ್ತ ಮಾರ್ಗ ಎನ್ನುವ ಅಭಿಪ್ರಾಯಗಳಿವೆ.

**

ಯಾವ ತಾಲೂಕಿಗೆ ಎಷ್ಟು ಹಣ ಪಾವತಿ?

ಜಿಲ್ಲೆಯ ಆರು ತಾಲೂಕುಗಳಲ್ಲಿ 2018-19ನೇ ಸಾಲಿನಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ 118 ಕೋಟಿ ರೂ. ಮೆಟಿರೀಯಲ್‌ ಬಿಲ್‌ನಲ್ಲಿ 33.45 ಕೋಟಿ ರೂ. ಇತ್ತೀಚೆಗೆ ತಾನೇ ಪಾವತಿಸಲಾಗಿದೆ.

ನರೇಗಾ ವೆಬ್‌ಸೈಟ್‌ನ ಮಾಹಿತಿ ಪ್ರಕಾರ ಚಳ್ಳಕೆರೆ 55.19 ಲಕ್ಷ, ಚಿತ್ರದುರ್ಗ 3.48 ಕೋಟಿ, ಹಿರಿಯೂರು 13.49 ಕೋಟಿ, ಹೊಳಲ್ಕೆರೆ 6.97 ಕೋಟಿ, ಹೊಸದುರ್ಗ 6.19 ಕೋಟಿ, ಮೊಳಕಾಲ್ಮುರು 2.76 ಕೋಟಿ ರೂ. ಸೇರಿ ಒಟ್ಟು 33.45 ಕೋಟಿ ರೂ. ಪಾವತಿಸಲಾಗಿದೆ.

**

ಬಾಕ್ಸ್‌

ಬಿಲ್‌ ತಡೆ ಹಿಡಿಯಲು ಕಮೀಷನರ್‌ಗೂ ಕಳುಹಿಸಲಾಗಿತ್ತು. ಆದರೆ, ಒಮ್ಮೆ ಎಂಐಎಸ್‌ ದಾಖಲು ಮಾಡಿದ ನಂತರ ಹಣ ಪಾವತಿ ತಡೆ ಹಿಡಿಯಲಿಕ್ಕೆ ಆಗುವುದಿಲ್ಲ. ಕಾಮಗಾರಿಗಳ ಗುಣಮಟ್ಟ ತಿಳಿಯಲು ನನ್ನೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ಪರಿಶೀಲನೆಯ ನಂತರ 'ಎ' ಮತ್ತು 'ಬಿ' ಕಾಮಗಾರಿಗಳಿಗೆ ಮಾತ್ರ ಹಣ ಮಾತ್ರ ಪಾವತಿಸಲಾಗಿದೆ. ಇನ್ನು ಆಡಳಿತಾತ್ಮಕ ಲೋಪಗಳಾಗಿರುವ ಕುರಿತು ಜಿಲ್ಲೆಯ ಎಲ್ಲ ಇಒಗಳಿಗೆ 1 ಟು 4 ನೊಟೀಸ್‌ ನೀಡಲಾಗಿದೆ. ವಿವರಣೆಗೆ ಒಂದು ತಿಂಗಳ ಸಮಯಾವಕಾಶ ಇದೆ. 2012-13ನೇ ಸಾಲಿನಿಂದ ಇಲ್ಲಿಯವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ವರದಿ ಅವಲೋಕಿಸಿ, ಸಂಬಂಧಪಟ್ಟವರಿಂದ ಹಣ ವಾಪಸ್‌ ವಸೂಲು ಮಾಡಲು ಸಹ ಕ್ರಮ ಜರುಗಿಸಲಾಗುತ್ತದೆ.

- ಸಿ.ಸತ್ಯಭಾಮ, ಜಿಪಂ ಸಿಇಒ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ