ಚಿತ್ರದುರ್ಗ: ಶೀಘ್ರದಲ್ಲೇ ಭದ್ರಾ ನೀರು ಹರಿಸುವುದಾಗಿ ರಾಜಕಾರಣಿಗಳು ನೀಡುತ್ತಿರುವ ಭರವಸೆಗಳೆಲ್ಲ ಅಪ್ಪಟ ಸುಳ್ಳು, ವೇಗವಾಗಿ ಕಾಮಗಾರಿ ನಡೆಸಿದರೂ ಪೂರ್ಣಗೊಳ್ಳಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಬಣದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸುಮಾರು ಇನ್ನೂರಕ್ಕೂ ಹೆಚ್ಚು ರೈತರ ತಂಡದ ನೇತೃತ್ವವಹಿಸಿ ಬುಧವಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ನಾನಾ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಡಿಸೆಂಬರ್ 2017ಕ್ಕೆ ಜಿಲ್ಲೆಗೆ ಭದ್ರಾ ನೀರು ಹರಿಯುತ್ತದೆ ಎಂದು ಸುಳ್ಳು ಹೇಳಿದ್ದಾಯಿತು. ಈಗ 2018ರ ಮುಂಗಾರು ವೇಳೆಗೆ ನೀರು ಹರಿಯುತ್ತದೆ ಎಂದು ಪುನಃ ಸುಳ್ಳು ಹೇಳುತ್ತಿದ್ದಾರೆ. ಕಾಮಗಾರಿಯಲ್ಲಿ ತೊಡಗಿರುವ ಕೆಲಸಗಾರರೇ ಹೇಳುವಂತೆ, ಯಾವುದೇ ಅಡೆತಡೆಗಳಿಲ್ಲದೆ ವೇಗವಾಗಿ ಕೆಲಸ ನಡೆದರೂ ಜಿಲ್ಲೆಗೆ ನೀರು ಹರಿಯಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ ಎಂದರು.
ಜಾನಕಲ್ ಬಳಿ ಒಂದೂವರೆ ಕಿ.ಮೀ ಸುರಂಗ ಮಾರ್ಗ ಕಾಮಗಾರಿ ಮುಗಿದಿದೆಯಂತೆ. ಇನ್ನೂ ಒಂದೂ ಮುಕ್ಕಾಲು ಕಿ.ಮೀ ಬಾಕಿ ಇದೆ ಎಂದು ಅಲ್ಲಿನ ಗುತ್ತಿಗೆದಾರರು ಹೇಳಿದರು. ಸುರಂಗದ ಒಳಗೆ ಹೋಗುವುದು ಕಷ್ಟ ಆಗಿರುವುದರಿಂದ ಒಳಗೆ ಬಿಡಲಿಲ್ಲ. ಇನ್ನು ಅಜ್ಜಂಪುರ ಬಳಿ ನಡೆಯುತ್ತಿರುವ ಸುರಂಗ ಕಾರ್ಯ ಇನ್ನೂ 500 ಮೀಟರ್ ಬಾಕಿಯಿದೆ. ಕಾಲುವೆ ಪೂರ್ಣ ಆಗಿಲ್ಲ. ಸಡಿಲ ಮಣ್ಣು ಬರ್ತಿದೆಯೆಂತೆ. ಈ ಎಲ್ಲ ಸುರಂಗಗಳ ಕಾಮಗಾರಿ ಮುಗಿಯುವುದಕ್ಕೆ ಅಂದಾಜು ಒಂದು ವರ್ಷ ಬೇಕಾಗಬಹುದು ಎಂದು ಹೇಳಿದರು.
ಗಾಜನೂರು ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶಕ್ಕೆ 2016ರಲ್ಲಿ ಭೇಟಿ ನೀಡಿದ್ದಾಗ ಕಾಲುವೆ ತೆಗೆದಿರಲಿಲ್ಲ. ಈಗ ಕಾಲುವೆ ತೆಗೆದಿದ್ದಾರೆ. ಆದರೆ, ಸಿಮೆಂಟ್ ಪ್ಲಾಸ್ಟಿಂಗ್ ಆಗಿಲ್ಲ. ಅದೂ ಅರ್ಧ ಕಾಲುವೆ ಮುಗಿದಿದೆ ಎಂದು ತಿಳಿಸಿದರು.
ಜಾನಕಲ್ ಸಮೀಪ ನಡೆಯುತ್ತಿರುವ ಸುರಂಗ ಕಾಮಗಾರಿ, ಮದುರೆ ಕಣಿವೆ, ಚಿಕ್ಕಯಗಟಿ, ಸಾಣೆಹಳ್ಳಿ, ಅಜ್ಜಂಪುರ, ಬೆಟ್ಟತಾವರೆಕೆರೆ, ಪಂಪ್ಹೌಸ್, ಬಿಆರ್ ಪ್ರಾಜೆಕ್ಟ್ ನಂತರ ಸಂಜೆ ವೇಳೆಗೆ ಗಾಜನೂರು ಜಲಾಶಯದ ಹಿನ್ನೀರು ಪ್ರದೇಶಕ್ಕೆ (ಚಿತ್ರದುರ್ಗಕ್ಕೆ ನೀರು ಹರಿಯುವ ತುಂಗಾ ನದಿ ಸಮೀಪ) ಭೇಟಿ ನೀಡಿ ವೀಕ್ಷಿಸಲಾಯಿತು ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಕಾರ್ಯಾಧ್ಯಕ್ಷ ಎಸ್.ಬೈಲಪ್ಪ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಪಟೇಲ್ ಚಂದ್ರಶೇಖರಪ್ಪ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಹಿರೇಕಬ್ಬಿಗೆರೆ ರಾಜಣ್ಣ, ಚಳ್ಳಕೆರೆ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಸೇರಿದಂತೆ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಮತ್ತು ಚಳ್ಳಕೆರೆಯ ರೈತ ಮುಖಂಡರು ತಂಡದಲ್ಲಿದ್ದರು.