ಆ್ಯಪ್ನಗರ

ಕುರುಬ ಸಮುದಾಯ ಎಸ್‌ಟಿ ಮೀಸಲಿಗೆ ಆರ್‌ಎಸ್‌ಎಸ್‌ ಬೆಂಬಲಿಸಿದರೆ ತಪ್ಪೇನು? ವಿಶ್ವನಾಥ್‌ ಪ್ರಶ್ನೆ

​​ಆರ್‌ಎಸ್‌ಎಸ್‌ ಹಿಂದೂ ಧರ್ಮ ಪ್ರತಿಪಾದಿಸುವ ಸಂಘಟನೆಯಾಗಿದ್ದು ಸುಮ್ಮನೆ ಅದನ್ನೊಂದು ಗುಮ್ಮನ ರೀತಿ ಬಿಂಬಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಗುಮ್ಮ ಅಲ್ಲ, ನಿಷೇಧಿತ ಸಂಸ್ಥೆಯೂ ಅಲ್ಲ ಎಂದು ವಿಶ್ವನಾಥ್‌ ಹೇಳಿದ್ದಾರೆ.

Agencies 23 Jan 2021, 9:08 pm
ಚಿತ್ರದುರ್ಗ: ಕುರುಬ ಸಮುದಾಯ ಎಸ್‌ಟಿ ಮೀಸಲಿಗಾಗಿ ನಡೆಸುತ್ತಿರುವ ಹೋರಾಟವನ್ನು ಆರ್‌ಎಸ್‌ಎಸ್‌ ಬೆಂಬಲಿಸಿದರೆ ತಪ್ಪೇನು? ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪ್ರಶ್ನಿಸಿದರು.
Vijaya Karnataka Web h vishwanath
ಎಚ್‌ ವಿಶ್ವನಾಥ್‌, ಪರಿಷತ್‌ ಸದಸ್ಯ (ಸಂಗ್ರಹ ಚಿತ್ರ)


ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕುರುಬರ ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಇದೆ ಎನ್ನುವ ಸಿದ್ಧರಾಮಯ್ಯ ಆರೋಪದ ಕುರಿತು ಪ್ರಶ್ನಿಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.

ಆರ್‌ಎಸ್‌ಎಸ್‌ ಹಿಂದೂ ಧರ್ಮ ಪ್ರತಿಪಾದಿಸುವ ಸಂಘಟನೆ. ಸುಮ್ಮನೆ ಅದನ್ನೊಂದು ಗುಮ್ಮನ ರೀತಿ ಬಿಂಬಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಗುಮ್ಮ ಅಲ್ಲ, ನಿಷೇಧಿತ ಸಂಸ್ಥೆಯೂ ಅಲ್ಲ. ಅಷ್ಟೇ ಏಕೆ? ಕಾಗಿನೆಲೆ ಗುರುಪೀಠದ ಮೊದಲ ಪೀಠಾಧಿಪತಿ ಶ್ರೀಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ ಆರ್‌ಎಸ್‌ಎಸ್‌ ಹಿನ್ನೆಲೆಯವರಾಗಿದ್ದರು ಎಂದು ಸಮರ್ಥಿಸಿಕೊಂಡರು.

ದೇಶದ ನಾನಾ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿರುವ ಕುರುಬ ಸಮುದಾಯದ ಜನಸಂಖ್ಯೆ 12 ಕೋಟಿಯಷ್ಟಿದೆ. ದಶಕಗಳ ಹಿಂದೆಯೇ ಎಲ್ಲರನ್ನೂ ಒಂದೇ ವೇದಿಕೆಗೆ ಕರೆತರುವ ಪ್ರಯತ್ನ ನನ್ನ ನೇತೃತ್ವದಲ್ಲಿಯೇ ಆಗಿತ್ತು. ಕುರುಬ ಸಮುದಾಯಕ್ಕೆ 5 ಸಾವಿರ ವರ್ಷಗಳ ಇತಿಹಾಸ ಇದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವ ಪ್ರಸ್ತಾವನೆ ದಶಕಗಳಷ್ಟು ಹಿಂದಿನದು. ಈಗ ಶ್ರೀಗಳ ನೇತೃತ್ವದಲ್ಲಿ ಹೋರಾಟ ಪ್ರಾರಂಭಿಸಿದ್ದೇವೆ ಎಂದರು.

ಗಟ್ಟಿದನಿಯಿಂದ ಒಬ್ಬಂಟಿನಾನು ಮಂತ್ರಿ ಯಾಗಬೇಕು ಎನ್ನುವ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ. ಮುಂಬೈಗೆ ತೆರಳಿದ 17 ಜನರ ತಂಡವನ್ನು ಮುನ್ನಡೆಸಿದವನು ನಾನು. ಗಟ್ಟಿ ದನಿಯಲ್ಲಿ ಮಾತನಾಡಿದ್ದಕ್ಕಾಗಿ ಒಬ್ಬಂಟಿ ಯಾಗಿದ್ದೇನೆ. ಮತ್ತೆ ನಾನು ಸಚಿವ ಸ್ಥಾನ ಕೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್‌ ಮುಖಂಡ ಜಿ.ಎಸ್‌. ಕುಮಾರಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ