ಆ್ಯಪ್ನಗರ

ಊರಿನತ್ತ ವಲಸೆ ಕಾರ್ಮಿಕರು, ನಿರ್ಮಾಣ ಉದ್ಯಮಕ್ಕೆ ಭಾರೀ ಹೊಡೆತದ ಆತಂಕ

ಕೊರೊನಾ ಲಾಕ್‌ಡೌನ್‌ನಿಂದ ಆತಂಕಕ್ಕೆ ಒಳಗಾಗಿರುವ ಕಾರ್ಮಿಕರು ತಮ್ಮ ಊರುಗಳತ್ತ ಹೋಗುತ್ತಿದ್ದಾರೆ. ಕಾರ್ಮಿಕರು ತವರಿಗೆ ಮರಳುತ್ತಿರುವುದರಿಂದ ಕಟ್ಟಡ ನಿರ್ಮಾಣ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದೆ.

ಇರ್ಷಾದ್ ಉಪ್ಪಿನಂಗಡಿ | Vijaya Karnataka Web 5 May 2020, 10:30 am
ಬೆಂಗಳೂರು: ಕೊರೊನಾ ಲಾಕ್‌ಡೌನ್ ಪರಿಣಾಮ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ವಲಸೆ ಕಾರ್ಮಿಕರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಉದ್ಯೋಗ ಕಳೆದುಕೊಂಡು ಮೂರು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ದಿನ ದೂಡಿದ್ದಾರೆ. ಇದೀಗ ಲಾಕ್‌ಡೌನ್ ಸಡಿಲಗೊಂಡಿದ್ದು ಭಾರೀ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮರಳುತ್ತಿದ್ದಾರೆ. ಒರಿಸ್ಸಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದಿಂದ ತುತ್ತಿನ ಚೀಲ ತುಂಬಿಸಲು ಬೆಂಗಳೂರಿಗೆ ಬಂದಿದ್ದ ಕಾರ್ಮಿಕರ ಮುಖದಲ್ಲಿ ಊರಿಗೆ ಮರಳುವ ಸಂತೋಷದ ಜೊತೆಗೆ ಮುಂದಿನ ಭವಿಷ್ಯದ ಆತಂಕವೂ ಕಾಡುತ್ತಿದೆ.
Vijaya Karnataka Web maigrent workers karnataka


ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಿಂದ ತಂಡೋಪತಂಡವಾಗಿ ಕಾರ್ಮಿಕರು ತಮ್ಮ ಊರಿಗಳಿಗೆ ತೆರಳುತ್ತಿದ್ದಾರೆ. ಆದರೆ ವಲಸೆ ಕಾರ್ಮಿಕರ ಈ ನಿರ್ಧಾರ ನಿರ್ಮಾಣ ಚುಟುವಟಕೆ ಮೇಲೆ ಭಾರೀ ಪರಿಣಾಮ ಬೀರುವ ಆತಂಕ ಎದುರಾಗಿದೆ. ಲಾಕ್‌ಡೌನ್ ಸಡಿಲ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಕಾರ್ಯಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕಾರ್ಮಿಕರು ನಗರ ತೊರೆಯುತ್ತಿರುವುದರಿಂದ ಬಿಲ್ಡರ್‌ಗಳು ಆತಂಕಕ್ಕೆ ಒಳಗಾಗಿದ್ದಾರೆ.

'ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದೇನೆ. ಆದರೆ ಕೊರೊನಾ ಲಾಕ್‌ಡೌನ್‌ನಿಂದ ನಮ್ಮ ಬದುಕು ದುಸ್ಥರವಾಗಿದೆ. ವೇತನ ಪಾವತಿಯಾಗಿಲ್ಲ, ಕೈಯಲ್ಲಿ ದುಡ್ಡೂ ಇಲ್ಲ. ಹೇಗಾದರು ಮಾಡಿ ಊರಿಗೆ ತಲುಪಬೇಕು. ಕುಟುಂಬದವರ ಮುಖ ನೋಡಬೇಕು. ಸಾಧ್ಯವಾದರೆ ಮತ್ತೆ ಬೆಂಗಳೂರಿಗೆ ಬರುತ್ತೇನೆ. ಇಲ್ಲದಿದ್ದರೇ ಊರಲ್ಲೇ ಕೆಲಸ ಹುಡುಕುತ್ತೇನೆ ಎನ್ನುತ್ತಾರೆ' ಉತ್ತರ ಭಾರತ ಮೂಲದ ಕಾರ್ಮಿಕ ಮಹೇಂದ್ರ ಬಿಸ್ವಾಸ್.

ತುಮಕೂರು: ಎಂಎಸ್‌ಐಎಲ್‌ ಮಳಿಗೆಗೆ ಗ್ರಾಮಸ್ಥರ ಬಹಿಷ್ಕಾರ

ಕಾರ್ಮಿಕರ ಮನವೋಲಿಕೆಗೆ ಪ್ರಯತ್ನ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದು ಅವರ ಮನವೋಲಿಕೆಯ ಪ್ರಯತ್ನಗಳು ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಊರಿಗೆ ತೆರಳಿದರೆ ಮುಂದಿನ ಜೀವನ ನಿರ್ವಹಣೆಗೆ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಅಧಿಕ. ಕೊರೊನಾ ಲಾಕ್‌ಡೌನ್ ಪರಿಣಾಮ ಆರ್ಥಿಕ ಹಿನ್ನಡೆ ಉಂಟಾಗಿದ್ದು ಉದ್ಯೋಗ ಕ್ಷೇತ್ರಗಳು ಮತ್ತೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶದ ಅಗತ್ಯವಿದೆ.

ಪರಿಣಾಮ ಇರುವ ಉದ್ಯೋಗಳಿಗೂ ಕತ್ತರಿ ಬೀಳತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ಊರುಗಳತ್ತ ತೆರಳಿದರೆ ಜೀವನ ನಿರ್ವಹಣೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಬಹುದು. ಸರ್ಕಾರ ಕೂಡಾ ಕಾರ್ಮಿಕರು ನಗರದಲ್ಲೇ ಉಳಿದುಕೊಳ್ಳುವಂತೆ ಮನವಿ ಮಾಡಿಕೊಂಡಿದೆ. ಆದರೆ ಕಾರ್ಮಿಕರು ಮಾತ್ರ ತಮ್ಮೂರುಗಳಿಗೆ ತೆರಳುವ ತವಕದಲ್ಲಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟದಿಂದ ಆತಂಕಗೊಂಡಿರುವ ಕಾರ್ಮಿಕರ ಮನವೋಲಿಕೆ ಮಾಡುವುದು ಸರ್ಕಾರದ ಪಾಲಿಗೂ ಸವಾಲಾಗಿ ಪರಿಣಮಿಸಿದೆ.

ವಿಕ ಸಂದರ್ಶನ: ಕೊರೊನಾ ಸಮರದಲ್ಲಿ ಗೆಲುವು ನಮ್ಮದೇ, ಆತಂಕ ಬೇಡ, ಡಾ. ಕೆ. ಸುಧಾಕರ್‌

ಕಾರ್ಮಿಕರ ನಡೆಗೆ ಬಿಲ್ಡರ್‌ಗಳು ಏನಂತಾರೆ ?

ಲಾಕ್‌ಡೌನ್ ಪರಿಣಾಮ ಕಾರ್ಮಿಕರಿಗೆ ಮೂರು ಹೊತ್ತಿನ ಊಟ ಕೂಡಾ ಸಿಗುತ್ತಿಲ್ಲ. ನಿರ್ಮಾಣ ಕಾರ್ಯ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಯಾಗಿಲ್ಲ ಪರಿಣಾಮ ಕಾರ್ಮಿಕರು ವೇತನ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಘಸಂಸ್ಥೆಗಳು ನೀಡಿದ ಆಹಾರವನ್ನು ಪಡೆದುಕೊಂಡು ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ. ಅವರೂ ಮನುಷ್ಯರಲ್ಲವೇ ಎನ್ನುತ್ತಾರೆ ಬೆಂಗಳೂರು ಬಿಲ್ಡರ್ ಅಸೋಷಿಯೇಷನ್ ಮಾಜಿ ಅಧ್ಯಕ್ಷ ಮೋಹನ್ ರಾವ್. ಕಾರ್ಮಿಕರು ಇವತ್ತು ತಮ್ಮ ಊರುಗಳಿಗೆ ತೆರಳುತ್ತಾರೆ. ಆದರೆ ಅವರು ಮತ್ತೆ ವಾಪಸ್ ಬರುವುದು ಕಷ್ಟ ಸಾಧ್ಯ. ಕಾರ್ಮಿಕರು ತವರಿನತ್ತ ತೆರಳುತ್ತಿರುವುದರಿಂದ ನಿರ್ಮಾಣ ಕಾರ್ಯಕ್ಕೆ ಭಾರೀ ಹೊಡೆತ ಬೀಳಲಿದೆ. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ಸೌಲಭ್ಯಗಳನ್ನು ನೀಡಿ ರಾಜ್ಯದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಇದೇ ವಿಚಾರವಾಗಿ ಬಿಲ್ಡರ್ಸ್‌ ಅಸೋಸಿಯೇಷನ್ ಮಂಗಳವಾರ ಸಭೆ ನಡೆಸಲಿದ್ದು ಬಳಿಕ ಸರ್ಕಾರಕ್ಕೂ ಬೇಡಿಕೆ ಸಲ್ಲಿಸಲಿದೆ ಎಂದರು.

ಲಾಕ್ ಡೌನ್‌ ಪರಿಣಾಮದಿಂದ ಇನ್ಮುಂದೆ ಹೊಸ ಸಿನಿಮಾಗಳು ಲಾಂಚ್ ಆಗುತ್ತವೆಯೇ?

ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ ಅಂತಿವೆ ಕಾರ್ಮಿಕ ಸಂಘಟನೆಗಳು

‘ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ರಾಜ್ಯದಲ್ಲಿ ಸಂಕಷ್ಟ ಅನುಭವಿಸಿ ತಮ್ಮ ಊರಿಗೆ ತೆರಳಲು ಮುಂದಾಗಿರುವ ವಲಸೆ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅವರಿಗೆ ನೀಡಬೇಕಾಗಿರುವ ವೇತನ, ಆರೋಗ್ಯ ತಪಾಸಣೆಯನ್ನು ಮಾಡುವ ಮೂಲಕ ಗೌರವಯುತವಾಗಿ ಕಳುಹಿಸಿಕೊಡಬೇಕು. ಈ ಕುರಿತಾಗಿ ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಮನವಿ ಮಾಡಿದ್ದೆವು. ಕಾರ್ಮಿಕರ ಸುರಕ್ಷಾ ಪ್ರಯಾಣದ ನಿಟ್ಟಿನಲ್ಲಿ ಸಂಬಂಧಪಟ್ಟ ಕೊಟ್ಟ ರಾಜ್ಯ ಸರ್ಕಾರದ ಜೊತೆಗೆ ಮಾತನಾಡಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಸರ್ಕಾರ ಈ ಕುರಿತಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಬಿಲ್ಡರ್‌ಗಳ ಹಿತಕಾಯಲು ಹರಸಾಹಸ ಪಡುತ್ತಿದೆ. ಅವರ ಹಿತಕ್ಕಾಗಿ ಕಾರ್ಮಿಕರನ್ನು ಬಲಿಪಡೆದುಕೊಳ್ಳುತ್ತಿದೆ' ಎಂದು ಆರೋಪಿಸುತ್ತಾರೆ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ.

ಅದೇನೇ ಇದ್ದರೂ ತಮ್ಮ ಊರುಗಳಿಗೆ ತೆರಳಲು ಮುಂದಾಗಿರುವ ಕಾರ್ಮಿಕರನ್ನು ತಡೆಯಲು ಸಾಧ್ಯವಿಲ್ಲ. ಬದಲಾಗಿ ಅವರಿಗೆ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಕೊರೊನಾ ಪರಿಣಾಮ ಕಾರ್ಮಿಕರಲ್ಲೂ ಆತಂಕ ಮನೆ ಮಾಡಿದೆ. ತಮ್ಮವರನ್ನು ನೋಡುವ ತವಕ ಈ ಸಂದರ್ಭದಲ್ಲಿ ಸಹಜ. ಆದರೆ ಅವರ ಮನವೋಲಿಕೆ ಪ್ರಯತ್ನದ ಜೊತೆಗೆ ಮತ್ತೆ ರಾಜ್ಯಕ್ಕೆ ಬರುವಂತಹ ವಾತಾವರಣವನ್ನು ಸೃಷ್ಟಿ ಮಾಡುವುದು ಸರ್ಕಾರದ ಜಾವಾಬ್ದಾರಿ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ