ಆ್ಯಪ್ನಗರ

ಲಿಫ್ಟ್‌ ಕುಸಿದು ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ಕೇಬಲ್‌ ತುಂಡಾಗಿ ಲಿಫ್ಟ್‌ ಕುಸಿದ ಪರಿಣಾಮ ಅದರಲ್ಲಿದ್ದ ನಾಲ್ವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಹಾಸ್‌ಮ್ಯಾಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka 13 Nov 2018, 5:00 am
ಬೆಂಗಳೂರು : ಕೇಬಲ್‌ ತುಂಡಾಗಿ ಲಿಫ್ಟ್‌ ಕುಸಿದ ಪರಿಣಾಮ ಅದರಲ್ಲಿದ್ದ ನಾಲ್ವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಹಾಸ್‌ಮ್ಯಾಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web  1
ಲಿಫ್ಟ್‌ ಕುಸಿದು ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ


ಫ್ರೇಜರ್‌ಟೌನ್‌ ಎಂ.ಎಂ. ರಸ್ತೆಯ ಸಿಲ್ವರ್‌ ನೆಸ್ಟ್‌ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದ ಈ ನಾಲ್ವರು ಭಾನುವಾರ ರಾತ್ರಿ 9.30ರ ಸುಮಾರಿಗೆ ಲಿಫ್ಟ್‌ನಿಂದ ಇಳಿಯುತ್ತಿದ್ದ ಸಂದರ್ಭದಲ್ಲಿ ಕೇಬಲ್‌ ತುಂಡಾಗಿ ಲಿಫ್ಟ್‌ 3ನೇ ಮಹಡಿಯಿಂದ ಏಕಾಏಕಿ ನೆಲಕ್ಕೆ ಅಪ್ಪಳಿಸಿದೆ. ಈ ಅವಘಡದಿಂದ ಲಿಫ್ಟ್‌ನಲ್ಲಿದ್ದ ನಾಲ್ವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯ ಪ್ರಧಾನ ಮೂಳೆತಜ್ಞ ಡಾ. ಥಾಮಸ್‌ ಚಾಂಡಿ ಮತ್ತು ಡಾ. ಕರಣ್‌ ಕುಕ್ರಜಾ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಗಾಯಾಳುಗಳಲ್ಲಿ 24 ವರ್ಷದ ತನುಶ್ರೀ ಅವರ ಹಣೆ, ಮೂಗು, ಮುಖಕ್ಕೆ ಪೆಟ್ಟಾಗಿದ್ದು, ಸೊಂಟದಲ್ಲಿ ಮೂಳೆ ಪುಡಿಯಾಗಿದ್ದು, ಕಾಲಿನ ಮೂಳೆಗಳೂ ಮುರಿದಿವೆ. ಗಂಭೀರವಾಗಿ ಗಾಯಗೊಂಡಿರುವ ಇವರಿಗೆ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಂಗಳವಾರ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 20 ವರ್ಷದ ಅಕ್ಷರ ಅವರ ಎರಡೂ ಕಾಲುಗಳ ಮೂಳೆಗಳು ಮುರಿದಿದ್ದು, ಎಕ್ಸ್‌ಟರ್ನಲ್‌ ಫಿಕ್ಸೇಟರ್‌ ಮತ್ತು ಕೆ-ವೈರ್‌ ಫಿಕ್ಸೇಟರ್‌ ಅಳವಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನು 20 ವರ್ಷದ ಫಾಲಖ್‌ ಪಟೇಲ್‌ ಅವರ ಬಲ ಪಾದದ ಮಣಿಕಟ್ಟು ಮುರಿದಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಉಳಿದಂತೆ 20 ವರ್ಷದ ಇಶಿಕ ಸಣ್ಣ ಪುಟ್ಟ ಗಾಯಗಳಿಗೆ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಅಜಿತ್‌ ಬೆನೆಡಿಕ್ಟ್ ರಾಯನ್‌ ತಿಳಿಸಿದ್ದಾರೆ.

ಹೈದರಾಬಾದ್‌ನವರಾದ ಈ ನಾಲ್ವರು ಅಲ್ಲಿನ ಸಿಮ್‌ಬಯೋಸಿಸ್‌ ಕಾನೂನು ಶಾಲೆಯ 2ನೇ ವರ್ಷದ ಕಾನೂನು ವ್ಯಾಸಂಗ ಮಾಡುತ್ತಿದ್ದರು. ಎರಡು ವಾರಗಳ ತರಬೇತಿಗಾಗಿ ಬೆಂಗಳೂರಿಗೆ ಆಗಮಿಸಿದ್ದ ಇವರು ಫ್ರೇಜರ್‌ ಟೌನ್‌ನ ಸಿಲ್ವರ್‌ ನೆಸ್ಟ್‌ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದರು. ಸೋಮವಾರದಿಂದ ತರಬೇತಿಗೆ ಹಾಜರಾಗಬೇಕಿತ್ತು. ಅಷ್ಟರಲ್ಲಿ ಈ ದುರಂತ ಸಂಭವಿಸಿದೆ ಎಂದು ವೈದ್ಯರು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ