ಬೆಂಗಳೂರು: ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ 16 ಲಕ್ಷ ರೂ. ಪ್ಯಾಕೇಜ್ ಉದ್ಯೋಗದ ಅಮಿಷವೊಡ್ಡಿದ ಸೈಬರ್ ಖದೀಮರು, ಮಹಿಳೆಯೊಬ್ಬರಿಂದ 4 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ನಿವಾಸಿ ಪ್ರತಿಮಾ (ಹೆಸರು ಬದಲಿಸಲಾಗಿದೆ) ಎಂಬುವವರು ಜಾಬ್ ಪೋರ್ಟಲ್ಗೆ ತಮ್ಮ ಸ್ವವಿವರಗಳನ್ನು ಅಪ್ಲೋಡ್ ಮಾಡಿದ್ದರು. ಈ ಮಾಹಿತಿ ಪಡೆದ ಸೈಬರ್ ಖದೀಮರು, ಪ್ರತಿಮಾ ಅವರಿಗೆ ಇ- ಮೇಲ್ ಹಾಗೂ ದೂರವಾಣಿ ಮೂಲಕ ಸಂಪರ್ಕಿಸಿ, ''ನಿಮ್ಮ ರೆಸ್ಯೂಮ್ ಒಪ್ಪಿಗೆಯಾಗಿದ್ದು, ಹನಿವೆಲ್ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಉದ್ಯೋಗ ನೀಡುತ್ತೇವೆ'' ಎಂದು ತಿಳಿಸಿದ್ದರು. ಅಲ್ಲದೆ, ಅದಕ್ಕಾಗಿ ಫೋನ್ನಲ್ಲೇ ಎರಡು ಬಾರಿ ಸಂದರ್ಶನ ಕೂಡ ನಡೆಸಿದ್ದರು. ಮಾನವ ಸಂಪನ್ಮೂಲ ಅಧಿಕಾರಿ, ವ್ಯವಸ್ಥಾಪಕರು.. ಹೀಗೆ ಹಲವು ಹೆಸರುಗಳಲ್ಲಿ ಪ್ರತಿಮಾ ಅವರನ್ನು ಸಂಪರ್ಕಿಸಿ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವವರಂತೆ ನಾಟಕವಾಡಿದ್ದರು
ಪ್ರತಿಷ್ಠಿತ ಕಂಪನಿಯಲ್ಲಿ ವಾರ್ಷಿಕ 16 ಲಕ್ಷ ರೂ. ವೇತನದ ಕೆಲಸ ಸಿಗುತ್ತದೆ ಎಂದು ನಂಬಿದ ಪ್ರತಿಮಾ ಕೆಲಸಕ್ಕೆ ಒಪ್ಪಿದ್ದರು. ನೇಮಕ ಪತ್ರ ನೀಡುವ ಮುನ್ನ ನೋಂದಣಿ ಶುಲ್ಕ, ಉದ್ಯೋಗ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಆರೋಪಿಗಳು ಕೇಳಿದಂತೆ ಅವರು ನೀಡಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 10ರಿಂದ 20 ಸಾವಿರ ರೂ.ವರೆಗೂ ಪಾವತಿ ಮಾಡಿದ್ದರು. ಆರೋಪಿಗಳು ಇ-ಮೇಲ್ ಮೂಲಕವೇ ನಕಲಿ ನೇಮಕಾತಿ ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಇನ್ನೇನು ಅಂತಿಮ ಆರ್ಡರ್ ನೀಡಲಾಗುತ್ತದೆ ಎಂದು ಹೇಳಿ 4 ಲಕ್ಷ ರೂ.ವರೆಗೆ ಹಣ ಕಟ್ಟಿಸಿಕೊಂಡಿದ್ದರು. ಕೊನೆಗೆ ಯಾವುದೇ ನೇಮಕಾತಿ ಆದೇಶ ಬಾರದ ಕಾರಣ ವಂಚನೆಗೊಳಗಾಗಿರುವುದನ್ನು ಅರಿತ ಪ್ರತಿಮಾ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
''ಉದ್ಯೋಗದ ಅನುಭವ ಇದ್ದ ಕಾರಣ ನೇರ ಸಂದರ್ಶನ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿದ್ದೆ. ಅಲ್ಲದೆ, ನೇಮಕ ಪತ್ರಗಳನ್ನು ಅವರು ಇ- ಮೇಲ್ ಮಾಡಿದ್ದರು. ಹಣ ಪಾವತಿಸಿದ ನಂತರವೇ ಮೋಸ ಹೋಗಿರುವುದು ಗೊತ್ತಾಯಿತು'' ಎಂದು ಪ್ರತಿಮಾ ಹೇಳಿದರು.
ಮತ್ತೆ ಮುಂದುವರಿದ ಡೆಬಿಟ್ ಕಾರ್ಡ್ ವಂಚನೆ: ನಗರದಲ್ಲಿ ಎಟಿಎಂ ಕಾರ್ಡ್ಗಳ ವಂಚನೆ ಮುಂದುವರಿದಿದ್ದು ಬೆಸ್ಕಾಂ ಕಚೇರಿ ಅಪರೇಟರ್ವೊಬ್ಬರ ಡೆಬಿಟ್ ಕಾರ್ಡ್ನಿಂದ ಸೈಬರ್ ಖದೀಮರು 4,800 ರೂ. ದೋಚಿದ್ದಾರೆ.
ರಿಚರ್ಡ್ಸ್ ಟೌನ್ ಎಸ್ಬಿಐನಲ್ಲಿ ಖಾತೆ ಹೊಂದಿರುವ ಎಚ್ಬಿಆರ್ ಲೇಔಟ್ ನಿವಾಸಿ ಅಮೀರ್ ಉಲ್ಲಾ ಖಾನ್ ಅವರು ಮಂಗಳವಾರ ಕಚೇರಿಯಲ್ಲಿದ್ದಾಗ 3.50ರ ಸುಮಾರಿಗೆ 4 ಸಾವಿರ ರೂ. ಹಾಗೂ 800 ರೂ.ಗಳನ್ನು ಕಾರ್ಡ್ ಬಳಸಿ ವಿತ್ ಡ್ರಾ ಮಾಡಿರುವಂತೆ ಸಂದೇಶ ಬಂದಿದೆ. ಆದರೆ, ಎಟಿಎಂ ಕಾರ್ಡ್ ಬಳಿಯಲ್ಲೇ ಇದ್ದರೂ ಹಣ ಡ್ರಾ ಆಗಿರುವುದರಿಂದ ಆತಂಕಗೊಂಡ ಅವರು, ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಡೆಬಿಟ್ ಕಾರ್ಡ್ನಿಂದ ಚೆನ್ನೈನಲ್ಲಿ ಹಣ ವಿತ್ ಡ್ರಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ನ ಅಧಿಕಾರಿಗೆ ಕಾರ್ಡ್ ನನ್ನ ಬಳಿಯೇ ಇದೆ ಎಂದು ತಿಳಿಸಿದಾಗ ಸೈಬರ್ ಕಳ್ಳರು ನಿಮ್ಮ ಕಾರ್ಡ್ನ ಮಾಹಿತಿ ಕದ್ದು, ಅದನ್ನು ನಕಲು ಮಾಡಿರುವ ಸಾಧ್ಯತೆ ಇದೆ. ಹೀಗಾಗಿ, ಪೊಲೀಸ್ ಠಾಣೆಗೆ ದೂರು ನೀಡಿ ಎಂದು ತಿಳಿಸಿದರು. ಅದರಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಅಮೀರ್ ತಿಳಿಸಿದ್ದಾರೆ.
ಇತ್ತೀಚೆಗೆ ಹೆಣ್ಣೂರು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಲವು ಡೆಬಿಟ್ ಕಾರ್ಡ್ಗಳ ಮಾಹಿತಿ ಹ್ಯಾಕ್ ಆಗಿದ್ದು, ಲಕ್ಷಾಂತರ ರೂ. ವಂಚನೆಯಾಗಿದೆ. ಖದೀಮರು ಎಟಿಎಂ ಯಂತ್ರಕ್ಕೆ ಗೌಪ್ಯವಾಗಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿ ಕಾರ್ಡ್ ಬಳಕೆದಾರರ ಮಾಹಿತಿ ಕಳವು ಮಾಡಿ, ವಿವಿಧೆಡೆ ಹಣ ಡ್ರಾ ಮಾಡಿಕೊಂಡಿದ್ದಾರೆ. ಈ ಸಂಬಂಧ ಹತ್ತಕ್ಕೂ ಹೆಚ್ಚು ಎಫ್ಐಆರ್ಗಳು ದಾಖಲಾಗಿವೆ.