ಆ್ಯಪ್ನಗರ

ಶಾಸಕರ ಪುತ್ರ ಎಂದು ಹೇಳಿಕೊಂಡು 90 ಲಕ್ಷ ರೂ . ವಂಚನೆ

ಶಾಸಕರ ಪುತ್ರ ಎಂದು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು, ಕಡಿಮೆ ಬೆಲೆಗೆ ಸರಕಾರದ ಸೈಟ್‌ ಕೊಡಿಸುವುದಾಗಿ ಹೇಳಿ 20 ಮಂದಿಗೆ 90 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 14 Dec 2018, 5:00 am
ಬೆಂಗಳೂರು: ಶಾಸಕರ ಪುತ್ರ ಎಂದು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು, ಕಡಿಮೆ ಬೆಲೆಗೆ ಸರಕಾರದ ಸೈಟ್‌ ಕೊಡಿಸುವುದಾಗಿ ಹೇಳಿ 20 ಮಂದಿಗೆ 90 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 90 lakh cheating to 20 people fraud arrest
ಶಾಸಕರ ಪುತ್ರ ಎಂದು ಹೇಳಿಕೊಂಡು 90 ಲಕ್ಷ ರೂ . ವಂಚನೆ


ನಾಗಸಂದ್ರ ನಿವಾಸಿ ವಾದಿರಾಜ ಗೌಡ (41) ಬಂಧಿತ ಆರೋಪಿ. ಈತನಿಂದ 3 ಲಕ್ಷ ರೂ. ಮತ್ತು 45 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಈತ ವಿಚ್ಛೇದಿತ ಮಹಿಳೆಯೊಬ್ಬರನ್ನು ನಂಬಿಸಿ ಅವರ ಜೊತೆ ಸುಮಾರು 2 ವರ್ಷ ಸಂಸಾರ ನಡೆಸಿ ಹಣ, ಆಭರಣ ದೋಚಿದ್ದ. ''ವಂಚನೆ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಬಂಧಿಸಲಾಗಿದ್ದು, ಈತ ಇನ್ನೂ ಹಲವರಿಗೆ ಮೋಸ ಮಾಡಿರಬಹುದು,'' ಎಂದು ಪೊಲೀಸರು ತಿಳಿಸಿದ್ದಾರೆ.

37 ವರ್ಷದ ಸಂತ್ರಸ್ತೆ ಕವಿತಾಗೆ (ಹೆಸರು ಬದಲಿಸಲಾಗಿದೆ) 15 ವರ್ಷದ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು ವಿಚ್ಛೇಧನ ಕೇಸ್‌ ದಾಖಲಿಸಿ ಪತಿಯಿಂದ ಪ್ರತ್ಯೇಕವಾಗಿ ಜೀವನ ಮಾಡುತ್ತಿದ್ದರು. 2017ರ ಜನವರಿಯಲ್ಲಿ ಫೇಸ್‌ಬುಕ್‌ನಲ್ಲಿ ಆರೋಪಿ ವಾದಿರಾಜ ಕವಿತಾಗೆ ಪರಿಚಯವಾಗಿದ್ದು, ''ತಾನು ಶಾಸಕ ರಾಮಚಂದ್ರಯ್ಯ ಅವರ ಪುತ್ರ. ನನಗೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪರಿಚಯವಿದೆ. ನೀವು ನೋಡಲು ಚೆನ್ನಾಗಿದ್ದು, ಪರಿಚಯ ಇರುವ ನಿರ್ಮಾಪಕರ ಮೂಲಕ ಸಿನೆಮಾದಲ್ಲಿ ಅವಕಾಶ ಕೊಡಿಸುತ್ತೇನೆ,''ಎಂದು ನಂಬಿಸಿದ್ದ. ಅದನ್ನು ನಂಬಿದ್ದ ಕವಿತಾ ಸ್ನೇಹ ಮುಂದುವರಿಸಿದ್ದರು. ಈ ಮಧ್ಯೆ ಆರೋಪಿ ಮದುವೆಯಾಗುವುದಾಗಿ ನಂಬಿಸಿ ಊಟಿ, ಮಡಿಕೇರಿಗೆ ಮೂರ್ನಾಲ್ಕು ದಿನ ಸುತ್ತಾಡಿಸಿದ್ದ. ನಂತರ ಯಶವಂತಪುರದಲ್ಲಿರುವ ಲಾಡ್ಜ್‌ ಒಂದನ್ನು ತೋರಿಸಿ ತಾನದರ ಮಾಲೀಕ ಎಂದು ಹೇಳಿ ನಂಬಿಸಿದ್ದ. ಬಳಿಕ ಆ ಲಾಡ್ಜ್‌ಗೆ ಕರೆದೊಯ್ದಿದ್ದ. ನಂತರ ವಿದ್ಯಾರಣ್ಯಪುರದಲ್ಲಿರುವ ದೇವಸ್ಥಾನಕ್ಕೆ ಕರೆದೊಯ್ದು ತಾಳಿ ಕಟ್ಟಿ ಮದುವೆ ಮಾಡಿಕೊಂಡಂತೆ ನಟಿಸಿದ್ದ.

ಹಣ ಸುಲಿಗೆ ಆರಂಭ: ತನಗೆ ಸರಕಾರದ ಪ್ರಮುಖ ಯೋಜನೆಗಳಲ್ಲಿ ಹಣ ಬರಬೇಕಿದೆ. ಅಲ್ಲಿಯವರೆಗೆ ಐದಾರು ಲಕ್ಷ ರೂ. ಹಣ ಬೇಕಾಗಿದೆ ಎಂದು ಹೇಳಿದ್ದ. ಅದನ್ನು ನಂಬಿದ್ದ ಕವಿತಾ, ಮನೆಯಲ್ಲಿದ್ದ 132 ಗ್ರಾಂ ಚಿನ್ನಾಭರಣಗಳು ಹಾಗೂ ಪರಿಚಿತರ ಬಳಿ ಹೊಂದಿಸಿ 5 ಲಕ್ಷ ರೂ. ಕೊಟ್ಟಿದ್ದರು. ಈ ವೇಳೆ ಆರೋಪಿ ಸರಕಾರದ ಕಡೆಯಿಂದ ಸೈಟ್‌ ಕೊಡಿಸುತ್ತೇನೆಂದು ಎಂದು ಕವಿತಾ ಅವರನ್ನು ನಂಬಿಸಿದ್ದ. ಹೀಗಾಗಿ, ಕವಿತಾ ಅವರು, ಸುಮಾರು 20ಕ್ಕೂ ಹೆಚ್ಚು ಪರಿಚಿತರು, ಸ್ನೇಹಿತರಿಗೆ ತಿಳಿಸಿ ಅವರಿಂದ 45 ಸೈಟ್‌ಗಳಿಗೆಂದು ವಿವಿಧ ಹಂತಗಳಲ್ಲಿ 90 ಲಕ್ಷ ರೂ. ವಾದಿರಾಜ್‌ಗೆ ಕೊಡಿಸಿದ್ದರು. ಹಣ ಒಟ್ಟಾದ ಬಳಿಕ ಆರೋಪಿ ಪರಾರಿಯಾಗಿದ್ದ.

ಶ್ರೀಮಂತನಂತೆ ಫೇಸ್‌ಬುಕ್‌ನಲ್ಲಿ ಬಿಲ್ಡಪ್‌: 10ನೇ ತರಗತಿ ಕಲಿತಿರುವು ಆರೋಪಿ, ದುಶ್ಚಟಗಳ ದಾಸ. ಮೇಕಪ್‌ ಹಚ್ಚಿ, ಹೊಸ ಬಟ್ಟೆಗಳನ್ನು ಹಾಕಿದ ಫೋಟೋಗಳನ್ನು ಹಾಗೂ ವಿಡಿಯೊಗಳನ್ನು ತೆಗೆದು ಫೇಸ್‌ಬುಕ್‌ನಲ್ಲಿ ಹಾಕಿ ಶ್ರೀಮಂತ ಎಂದು ಬಿಂಬಿಸಿಕೊಳ್ಳುತ್ತಿದ್ದ. ಬಳಿಕ ಮಹಿಳೆಯರಿಗೆ ಸಿನಿಮಾ, ಧಾರವಾಹಿಗಳಲ್ಲಿ ಚಾನ್ಸ್‌ ಕೊಡಿಸುವುದಾಗಿ ಪುಸಲಾಯಿಸಿ, ಲಾಡ್ಜ್‌ಗೆ ಕರೆಸಿಕೊಂಡು ಹಣ ಪಡೆದು ಪರಾರಿಯಾಗುತ್ತಿದ್ದ.

ಡೈವೋರ್ಸ್‌ ಕೊಡಿಸಿದ್ದ: ಆರೋಪಿಯ ಪರಿಚಯವಾಗುವ ವೇಳೆ ಕವಿತಾ ಮೈಸೂರಿನಲ್ಲಿ ವಿಚ್ಛೇಧನ ಕೇಸ್‌ ಹಾಕಿದ್ದರು. ಬಳಿಕ ಆರೋಪಿಯೇ ಮೈಸೂರಿಗೆ ತಾನೇ ಓಡಾಡಿ ವಿಚ್ಛೇಧನ ಕೊಡಿಸಿದ್ದಾನೆ ಸಂತ್ರಸ್ತ ಮಹಿಳೆ ಕವಿತಾ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ