ಆ್ಯಪ್ನಗರ

ರದ್ದಾದ ನೋಟುಗಳ ವಿನಿಮಯಕ್ಕೆ ಯತ್ನ : ಐವರ ಬಂಧನ

ರದ್ದಾಗಿರುವ 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳು ಇನ್ನೂ ಅಕ್ರಮವಾಗಿ ಚಲಾವಣೆಯಲ್ಲಿದ್ದು, ಸುಮಾರು 92 ಲಕ್ಷ ರೂ.ಯನ್ನು ಅಕ್ರಮವಾಗಿ ವಿನಿಮಯಕ್ಕೆ ಯತ್ನಿಸುತ್ತಿದ್ದ ಐವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 31 Mar 2019, 5:00 am
ಬೆಂಗಳೂರು : ರದ್ದಾಗಿರುವ 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳು ಇನ್ನೂ ಅಕ್ರಮವಾಗಿ ಚಲಾವಣೆಯಲ್ಲಿದ್ದು, ಸುಮಾರು 92 ಲಕ್ಷ ರೂ.ಯನ್ನು ಅಕ್ರಮವಾಗಿ ವಿನಿಮಯಕ್ಕೆ ಯತ್ನಿಸುತ್ತಿದ್ದ ಐವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 92 lakhs old notes seised
ರದ್ದಾದ ನೋಟುಗಳ ವಿನಿಮಯಕ್ಕೆ ಯತ್ನ : ಐವರ ಬಂಧನ


ವಿಜಯನಗರದ ನಿವಾಸಿ ರೇವತಿ, ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ್‌, ವಿನೋದ್‌, ರಾಕೇಶ್‌ ಮತ್ತು ತಮಿಳುನಾಡು ಮೂಲದ ರವಿ ಬಂಧಿತರು.

ತಮಿಳುನಾಡಿನ ರಿಯಲ್‌ ಎಸ್ಟೇಟ್‌ ಉದ್ಯಮಿ ರವಿಗೆ ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ ಸಂತೋಷ್‌ ಪರಿಚಯವಾಗಿತ್ತು. ತನ್ನ ಬಳಿ ಹಳೇ ನೋಟುಗಳಿದ್ದು, ಅವುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಸಿಕೊಟ್ಟರೆ, ಅದಕ್ಕೆ ಪ್ರತಿಯಾಗಿ 25 ಲಕ್ಷ ರೂ. ಮೌಲ್ಯದ ನಿವೇಶನ ಕೊಡಿಸುವುದಾಗಿ ಸಂತೋಷ್‌ಗೆ ರವಿ ಅಮಿಷ ಒಡ್ಡಿದ್ದ.

ಸಂತೋಷ್‌, ತನಗೆ ಪರಿಚಯ ಇರುವ ರೇವತಿ ಮೂಲಕ ಯಾರಾದರೂ ಹಳೇ ನೋಟಗಳನ್ನು ವಿನಿಮಯ ಮಾಡಿಕೊಡುವವರು ಸಿಗುತ್ತಾರಾ ಎಂದು ಹುಡುಕಾಡುತ್ತಿದ್ದರು. ಹೀಗಿರುವಾಗ ಕೆಲ ದಿನಗಳ ಹಿಂದೆ ಕ್ಯಾಬ್‌ ಚಾಲಕ ವಿನೋದ್‌ ಕುಮಾರ್‌ ಎಂಬಾತನ ಪರಿಚಯವಾಗಿತ್ತು. ಆತನ ಬಳಿ ವಿಚಾರಿಸಿದಾಗ ತನ್ನ ಸ್ನೇಹಿತ ರಾಕೇಶ್‌ ಎಂಬಾತ ರದ್ದಾದ ನೋಟುಗಳನ್ನು ಬದಲಾಯಿಸಿಕೊಡುತ್ತಾನೆ. ಆತನೊಂದಿಗೆ ಮಾತನಾಡಿ ಹೇಳುತ್ತೇನೆ ಎಂದಿದ್ದ. ಅದಕ್ಕೆ ಸಂತೋಷ್‌ ಮತ್ತು ರೇವತಿ ಒಪ್ಪಿದ್ದರು.

ವಿನಿಮಯ ಮಾಡಿಕೊಡುತ್ತೇವೆ ಎಂದವರಿಂದಲೇ ದರೋಡೆ

ಮಾ.26ರಂದು ಸದಾಶಿವನಗರದ ಐಐಎಸ್‌ಸಿ ಬಳಿಗೆ 13 ಲಕ್ಷ ರೂ. ಹಳೆ ನೋಟುಗಳನ್ನು ಸ್ಯಾಂಪಲ್‌ಗಾಗಿ ತಂದುಕೊಡುವಂತೆ ಸಂತೋಷ್‌ ಮತ್ತು ರೇವತಿಗೆ ವಿನೋದ್‌ ಸೂಚಿಸಿದ್ದ. ರವಿಯಿಂದ ಹಣ ಪಡೆದ ರೇವತಿ ಮತ್ತು ಸಂತೋಷ್‌ ಐಐಎಸ್‌ಸಿಯ ಡಿ ಗೇಟ್‌ ಬಳಿ ಮಧ್ಯಾಹ್ನ 2.30ರಲ್ಲಿ ಹಣ ತೆಗೆದುಕೊಂಡು ಹೋಗಿದ್ದರು. ವಿನೋದ್‌ ತನ್ನ ಸ್ನೇಹಿತ ರಾಕೇಶ್‌ ಜತೆ ಬಂದು 13 ಲಕ್ಷ ರೂ. ಇದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದ.

ಸುಳ್ಳು ದೂರು ದಾಖಲು

ನೋಟು ವಿನಿಮಯ ಮಾಡಿಸಿ ಕೊಡುವುದಾಗಿ ಹೇಳಿ ದೋಚಿದ ವಿನೋದ್‌ ಮತ್ತು ರಾಕೇಶ್‌ ವಿರುದ್ಧ ರೇವತಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು.

''ನಾನು ಮತ್ತು ಸಂತೋಷ್‌ ತರಕಾರಿ ರಫ್ತು ಮಾಡುವ ವ್ಯವಹಾರ ಮಾಡುತ್ತಿದ್ದೇವೆ. ಸಂತೋಷ್‌ ಅವರ ಸಹೋದರಿಗೆ ಫಿಸಿಯೋಥೆರಪಿ ಕೋರ್ಸ್‌ಗೆ ಸೇರಿಸಲು ಕಾಲೇಜ್‌ ಸೀಟ್‌ ಹುಡುಕಾಟದಲ್ಲಿದ್ದಾಗ ವಿನೋದ್‌ ಕುಮಾರ್‌ ಪರಿಚಯವಾಗಿತ್ತು. ಖಾಸಗಿ ಕಾಲೇಜಿನಲ್ಲಿ ಸ್ನೇಹಿತ ರಾಕೇಶನ ಮೂಲಕ 13 ಲಕ್ಷ ರೂ.ಗೆ ಸೀಟು ಕೊಡಿಸುವುದಾಗಿ ಹೇಳಿದ್ದ. ಅದರಂತೆ ಸಂತೋಷ್‌ ಮತ್ತು ನಾನು ಐಐಎಸ್‌ಸಿ ಬಳಿ 13 ಲಕ್ಷ ರೂ.ಯನ್ನು ತಂದಿದ್ದಾಗ ಅಲ್ಲಿಗೆ ಬಂದ ವಿನೋದ್‌ ಮತ್ತು ಆತನ ಸ್ನೇಹಿತ ರಾಕೇಶ್‌ ಹಣ ಕಸಿದು ಪರಾರಿಯಾಗಿದ್ದಾರೆ''ಎಂದು ದೂರಿನಲ್ಲಿ ತಿಳಿಸಿದ್ದರು.

ಸತ್ಯ ಬಾಯ್ಬಿಟ್ಟರು

ಹಣ ಮತ್ತು ದರೋಡೆ ನಡೆದಿದ್ದು ಹೇಗೆ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ ಗೊಂದಲದ ಹೇಳಿಕೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಹಳೇ ನೋಟುಗಳ ವಿಷಯ ಹಾಗೂ ಅವುಗಳನ್ನು ದೋಚಿರುವ ಕುರಿತು ಮಾಹಿತಿ ನೀಡಿದರು. ಅವರು ನೀಡಿದ ಮಾಹಿತಿ ಆಧರಿಸಿ ವಿನೋದ್‌, ರಾಕೇಶ್‌ ಹಾಗೂ ಹಣ ವಿನಿಮಯಕ್ಕೆ ಯತ್ನಿಸುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ರವಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ